ಬೆಂಗಳೂರಿನ ಕೂಡ್ಲು ಬಳಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದ 200 ಕೋಟಿ ಮೌಲ್ಯದ 18 ಅಂತಸ್ತಿನ ಕಟ್ಟಡವನ್ನು ನೆಲಸಮಗೊಳಿಸಲಾಗುತ್ತಿದೆ. ಕಟ್ಟಡವು ಒಂದು ಬದಿಗೆ ವಾಲಿದ್ದರಿಂದ, ಸುರಕ್ಷತಾ ಕ್ರಮವಾಗಿ ಅಧಿಕಾರಿಗಳು ಈ ತೆರವು ಕಾರ್ಯಾಚರಣೆಯನ್ನು ನಿಯಂತ್ರಿತ ವಿಧಾನದಲ್ಲಿ ಆರಂಭಿಸಿದ್ದಾರೆ.
ಬೆಂಗಳೂರು: ನಗರದ ಕೂಡ್ಲು ಸಮೀಪದಲ್ಲಿ ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾನ ಮಾಡಿದ್ದ 18 ಅಂತಸ್ತಿನ ಕಟ್ಟಡವನ್ನು ಕೆಡುವ ಕೆಲಸ ಇಂದಿನಿಂದ ಅಧಿಕಾರಿಗಳು ಆರಂಭ ಮಾಡಿದ್ದಾರೆ. ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯಿಂದ ಕಟ್ಟಡ ನೆಲಸಮ ಕಾರ್ಯ ನಡೆಯಲಿದ್ದು, ಖಾಸಗಿ ಕಟ್ಟಡ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಿದ್ದ ಭವನವನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಕಟ್ಟಡ ನೆಲಸಮ ಮಾಡಲಾಗುತ್ತಿದೆ.
18 ಅಂತಸ್ತಿನ ಕಟ್ಟಡ ತೆರವು ಆರಂಭ
ಬೆಂಗಳೂರಿನ ಕೂಡ್ಲು ಗ್ರಾಮದಲ್ಲಿ ನಿರ್ಮಾಣವಾಗಿದ್ದ SNN ರಾಜ್ 'E-' ಬ್ಲಾಕ್ನಲ್ಲಿರುವ 49 ಅಪಾರ್ಟ್ಮೆಂಟ್ಗಳು ತೆರವು ಕಾರ್ಯ ನಡೆಯಲಿದ್ದು, ಸುರಕ್ಷಿತ ಹಾಗೂ ನಿಯಂತ್ರಿತ ವಿಧಾನದಲ್ಲಿ ಕಟ್ಟಡ ಕೆಡವಲು ನಿರ್ಧಾರ ಮಾಡಲಾಗಿದೆ. ಸುಮಾರು 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಬೃಹತ್ ವಸತಿ ಸಂಕೀರ್ಣ, ಸುಮಾರು 18 ಅಂತಸ್ತು ಹೊಂದಿದೆ.

ಸುರಕ್ಷಿತ ಹಾಗೂ ನಿಯಂತ್ರಿತ ವಿಧಾನದಲ್ಲಿ ಕಟ್ಟಡ ತೆರವು
SNN ರಾಜ್ 'E-' ಬ್ಲಾಕ್ನಲ್ಲಿರುವ 49 ಅಪಾರ್ಟ್ಮೆಂಟ್ಗಳು ತೆರವು ಹಿನ್ನೆಲೆಯಲ್ಲಿ ಕೇಂಬ್ರಿಡ್ ಶಾಲೆಯ ಮಕ್ಕಳು ಆತಂಕಕ್ಕೆ ಒಳಗಾಗಿದ್ದು, SNN ಕಟ್ಟಡದ ಪಕ್ಕದಲ್ಲೇ ದಿ ಕೇಂಬ್ರಿಡ್ಜ್ ಇಂಟರ್ ನ್ಯಾಷನಲ್ ಸ್ಕೂಲ್ ಇದೆ. ಈ ಶಾಲೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು, ಈ ಹಿನ್ನೆಲೆಯಲ್ಲಿ ಸುರಕ್ಷಿತ ಹಾಗೂ ನಿಯಂತ್ರಿತ ವಿಧಾನದಲ್ಲಿ ಕಟ್ಟಡ ಕೆಡವಲು ನಿರ್ಧಾರ ಮಾಡಲಾಗಿದೆ. ಇಂದು ಅಧಿಕೃತವಾಗಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.
ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ನೊಂದಿಗೆ ಮಾತನಾಡಿದ ಕೇಂಬ್ರಿಡ್ಜ್ ಶಾಲೆ ವಿದ್ಯಾರ್ಥಿಯ ತಂದೆ ಅಶೋಕ್ ಅವರು, ಸ್ಕೂಲ್ ನವರು ಆನ್ ಲೈನ್ ಕ್ಲಾಸ್ ಮಾಡ್ತೀವಿ ಅಂದಿದ್ದರು. ಆದರೆ ಈಗ ಸ್ಕೂಲ್ ಗೆ ಬನ್ನಿ ಅಂತ ಹೇಳಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿದ್ದಾರೆ. ನಮ್ಮ ಮಕ್ಕಳನ್ನ ಶಾಲೆಗೆ ಕಳಿಸೋಕೆ ಭಯ ಆಗ್ತಿದೆ. ಈ ಕಟ್ಟಡವನ್ನ ನೋಡಿದ್ರೆ ಭಯ ಆಗುತ್ತೆ. ಆದಷ್ಟು ಬೇಗ ಯಾವುದೇ ತೊಂದರೆ ಆಗದಂತೆ, ಕಟ್ಟಡ ಡೆಮಾಲಿಷನ್ ಮಾಡಲಿ ಅಂತ ಖಾಸಗಿ ಶಾಲೆಯ ಪೋಷಕರ ಅಳಲು ತೋಡಿಕೊಂಡಿದ್ದಾರೆ.
ಕಟ್ಟಡ ತೆರವಿಗೆ ನಿರ್ಮಾಣ ಸಂಸ್ಥೆಯ ಅನುಮತಿ
ಕಟ್ಟಡ ಒಂದು ಕಡೆ ವಾಲಿದಂತೆ ಇದ್ದು, ಇದರಿಂದ ಪ್ರಮಾದ ಉಂಟಾಗಲಿದೆ ಎಂದು ಗುರುತಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಟ್ಟಡ ತೆರವಿಗೆ ನಿರ್ಧರಿಸಿತ್ತು. ಜಿಬಿಎ ಎಂಜಿನಿಯರ್ಗಳು ಈ ಕಟ್ಟಡವನ್ನು ಪರಿಶೀಲನೆ ನಡೆಸಿ ಕಟ್ಟಡ ತೆರವು ಮಾಡಲು ನಿರ್ಧಾರ ಮಾಡಿದ್ದರು. ಚೀಫ್ ಕಮಿಷನರ್ ಮಹೇಶ್ವರ ರಾವು ಅವರು ನಿರ್ಮಾಣ ಸಂಸ್ಥೆಯೊಂದಿಗೆ ಮಾತನಾಡಿದ್ದು, ಅವರು ಅಧಿಕೃತವಾಗಿ ಕಟ್ಟಡ ತೆರವಿಗೆ ಸಮ್ಮತಿ ಸೂಚಿಸಿದ್ದರು. ಇದರ ನಡುವೆಯೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ ಅಧಿಕಾರಿಗಳ ನಡೆಯ ಬಗ್ಗೆ ವಿಮರ್ಶೆ ಎದುರಾಗಿತ್ತು. ಆದರೆ ಭೂಮಿಯ ಮಣ್ಣಿನ ಪರಿಶೀಲನೆ ಸಂಬಂಧದಲ್ಲಿ ನಡೆದ ಒಂದು ತಪ್ಪಿನಿಂದ ಈ ಘಟನೆ ನಡೆದಿದೆ ಎಂದು ವರದಿಯಾಗಿತ್ತು.



