ನಿರಂತರ ಮಳೆ, ಭೂ ಕುಸಿತದ ಹಿನ್ನೆಲೆ ರೈಲು ಸಂಚಾರ ರದ್ದು  ಚಿಕ್ಕಮಗಳೂರಿನಿಂದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು-ಯಶವಂತಪುರದ ನಡುವೆ ಓಡಾಡುತ್ತಿದ್ದ ರೈಲು ಸಂಚಾರ ಸ್ಥಗಿತ

ಚಿಕ್ಕಮಗಳೂರು (ನ.24): ನಿರಂತರ ಮಳೆ (Rain), ಭೂ ಕುಸಿತದ (Land Slide)ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಿಂದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು-ಯಶವಂತಪುರದ (chikkamagaluru) ನಡುವೆ ಓಡಾಡುತ್ತಿದ್ದ ರೈಲು (Train) ಸಂಚಾರವನ್ನು ನ.24ರಿಂದ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಪಶ್ಚಿಮ ವಲಯದ ರೈಲ್ವೆ ಹಿರಿಯ ವಿಭಾಗೀಯ ಕಮರ್ಷಿಯಲ್‌ ವ್ಯವಸ್ಥಾಪಕ ಡಾ. ಮಂಜುನಾಥ್‌ ಕನ್ಮಾಡಿ ತಿಳಿಸಿದ್ದಾರೆ. ಚಿಕ್ಕಮಗಳೂರು ನಗರದಿಂದ ಪ್ರತಿನಿತ್ಯ ಶಿವಮೊಗ್ಗ (shivamogga) ಹಾಗೂ ಯಶವಂತಪುರಕ್ಕೆ ಸಂಚರಿಸುತ್ತಿದ್ದ ಎರಡೂ ಪ್ಯಾಸೆಂಜರ್‌ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಚಿಕ್ಕಮಗಳೂರು-ಶಿವಮೊಗ್ಗ ರೈಲು ಪ್ರತಿದಿನ ಬೆಳಗ್ಗೆ 6.30ಕ್ಕೆ ಚಿಕ್ಕಮಗಳೂರು ನಿಲ್ದಾಣದಿಂದ ಹೊರಡುತ್ತಿತ್ತು. ಚಿಕ್ಕಮಗಳೂರು-ಯಶವಂತಪುರ ರೈಲು ಬೆಳಗ್ಗೆ 7.30ಕ್ಕೆ ನಿಲ್ದಾಣ ಬಿಡುತ್ತಿತ್ತು. ಈ ಎರಡೂ ರೈಲು ಸಂಚಾರ ನ.24ರಿಂದ ರದ್ದಾಗಲಿದೆ. ಪ್ರತಿದಿನ ಸಂಜೆ ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ರೈಲು ಇನ್ನು ಮುಂದೆ ಬೀರೂರು ರೈಲು ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಎಸ್‌ಡಬ್ಲ್ಯೂಆರ್‌ ಲೈನ್‌ ಮೇಲೆ ಎಡೆಬಿಡದೆ ಸುರಿದ ಮಳೆಯಿಂದಾಗಿ ಟ್ರ್ಯಾಕ್‌ನಿಂದ ಬ್ಯಾಲೆಸ್ಟ್‌ ಕೊಚ್ಚಿ ಹೋಗಿ, ಹಲವು ಸ್ಥಳಗಳಲ್ಲಿ ಭೂ ಕುಸಿತ ಆಗಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮತ್ತು ವಿಭಾಗದಲ್ಲಿ ಕೆಲಸ ಕೈಗೊಳ್ಳಲು ಮುಂದಿನ ಆದೇಶದವರೆಗೆ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ದಾಖಲೆ ಮಳೆಗೆ ತತ್ತರಿಸಿದ ಬೆಂಗಳೂರು : 

ಬೆಂಗಳೂರಿನಲ್ಲಿ (Bengaluru) ಭಾರಿ ಮಳೆ ಸುರಿಯುತ್ತಿದ್ದು ಇದರಿಂದ ನಾಗರಿಕ ಸಮುದಾಯ ತತ್ತರಿಸಿದೆ. ಭಾರೀ ಮಳೆ (heavy Rain) ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಎಲ್ಲೆಲ್ಲಿ ಏನೇನಾಯ್ತು..? ಯಲಹಂಕದ ಪೊಲೀಸ್‌ ಠಾಣೆ (Yalahanka Police station) ವೃತ್ತದಲ್ಲಿರುವ ರೈಲ್ವೆ ಅಂಡರ್‌ ಪಾಸ್‌ನಲ್ಲಿ ನಿಂತಿದ್ದ ನೀರಿನಲ್ಲಿ ಮೂರು ಬಿಎಂಟಿಸಿ ಬಸ್‌ಗಳು (BMTC Bus) ಮೂರು ಗಂಟೆಗಿಂತ ಹೆಚ್ಚು ಕಾಲ ಸಿಲುಕಿಕಿಕೊಂಡ ಪರಿಣಾಮ ದೇವನಹಳ್ಳಿ ಮಾರ್ಗವಾಗಿ ಯಲಹಂಕ, ಹೆಬ್ಬಾಳದ ಕಡೆ ಸಂಚರಿಸುವ ವಾಹನ ಸವಾರರಿಗೆ ತೀವ್ರ ತೊಂದರೆಯುಂಟಾಯಿತು.ಸಿಂಗಾಪುರ ಕೆರೆ ಕೋಡಿ ಬಿದ್ದಿದ್ದರಿಂದ ವಿದ್ಯಾರಣ್ಯಪುರದ ಮತ್ತು ಮುನಿಸ್ವಾಮಪ್ಪ ಬಡಾವಣೆಯ ಹಲವು ಮನೆಗಳಿಗೆ ನೀರು ನುಗ್ಗಿತ್ತು. ಈ ಭಾಗದ ಜನ ರಾತ್ರಿ ಪೂರ್ತಿ ನೀರನ್ನು ಹೊರ ಹಾಕಲು ಪರದಾಡಿದರು. ಅಂಗಡಿಗಳು, ಮನೆಗಳಲ್ಲಿದ್ದ ವಸ್ತುಗಳು ನೀರು ಪಾಲಾದವು.

ಬಿಬಿಎಂಪಿ ಅಧಿಕಾರಿಗಳ ಜನರ ವಿರುದ್ಧ ಆಕ್ರೋಶ

ಪ್ರತಿ ವರ್ಷ ಮಳೆ ಬಂದಾಗಲೂ ಇದೇ ರೀತಿಯ ಸಮಸ್ಯೆ ಉಂಟಾಗುತ್ತಿದೆ. ಈಗಾಗಲೇ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಶಾಸಕರು ಮತ್ತು ಬಿಬಿಎಂಪಿ (BBMP) ಅಧಿಕಾರಿಗಳು ಇತ್ತ ತಲೆ ಹಾಕುತ್ತಿಲ್ಲ. ಸಣ್ಣ ಅಂಗಡಿ ನಡೆಸಿಕೊಂಡು ಜೀವನ ನಡೆಸುತ್ತಿದ್ದೇವೆ. ಇದೇ ರೀತಿ ಮುಂದುವರಿದಲ್ಲಿ ಜೀವನ ನಡೆಸುವುದಾದರೂ ಹೇಗೆ ಎಂದು ಸ್ಥಳೀಯರು ಪ್ರಶ್ನಿಸಿದರು. ಕಳೆದ ಮೂರು ದಿನಗಳಿಂದ ಇದೇ ಸಮಸ್ಯೆ ಎದುರಿಸುತ್ತಿದ್ದು, ನಿದ್ದೆಯಿಲ್ಲದೆ ಪರದಾಡುತ್ತಿದ್ದೇವೆ ಎಂದು ವಿದ್ಯಾರಣ್ಯ ಪುರದ ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸಿದರು.

ರಸ್ತೆಯಲ್ಲಿ ನೀರು

ಯಲಹಂಕದ ಕೋಗಿಲೆ ಕ್ರಾಸ್‌ ಬಳಿ ರಸ್ತೆ ತುಂಬ ನೀರು ನಿಂತಿದ್ದು, ಯಲಹಂಕ- ಕೋಗಿಲು ಸಂಪರ್ಕಿಸುವ ರಸ್ತೆ ಸಂಪೂರ್ಣ ಜಲಾವೃತ್ತವಾಗಿತ್ತು. ಅಲ್ಲದೆ, ಕೋಗಿಲು ಕ್ರಾಸ್‌ (Cross) ಬಳಿಯ ಸಪ್ತಗಿರಿ ಬಡಾವಣೆಯಲ್ಲಿಯ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನತೆ ತೀವ್ರ ತೊಂದರೆ ಅನುಭವಿಸಿದರು.

ತುಂಬಿ ಹರಿದ ಅಲ್ಲಾಳಸಂದ್ರ ಕೆರೆ

ಯಲಹಂಕಕ್ಕೆ ಹೊಂದಿಕೊಂಡಿರುವ ಅಲ್ಲಾಳಸಂದ್ರ ಕೆರೆ (Lake) ತುಂಬಿ ಹರಿದ ಪರಿಣಾಮ ಈ ಭಾಗದ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿರುವ ವಸ್ತುಗಳು ತೇಲಾಡುತ್ತಿದ್ದವು. ಅಕ್ಕಿ, ಬೇಳೆ, ಈರುಳ್ಳಿ, ಸಕ್ಕರೆ ಉಪ್ಪು ದಿನ ಬಳಕೆಯ ಎಲ್ಲವಸ್ತುಗಳು ನೀರುಪಾಲಾದವು. ಅಲ್ಲದೆ, ಟಿವಿ, ಫ್ರಿಡ್ಜ್‌ನಲ್ಲಿ ನೀರು ಸೇರಿದ್ದರಿಂದ ಕೆಟ್ಟು ಹೋಗಿವೆ ಎಂದು ನಿವಾಸಿಗಳು ಗೋಳು ತೋಡಿಕೊಂಡರು.

100 ಕೇಜಿ ಮೀನು ಹಿಡಿದರು

ಅಲ್ಲಾಳಸಂದ್ರ ಕೆರೆಯಿಂದ ಹೊರ ಬಂದ ನೀರಿನ ಜೊತೆ ಮೀನುಗಳು (Fish) ಮನೆಗಳಿಗೆ ತೇಲಿ ಬಂದವು. ಸ್ಥಳೀಯ ನಿವಾಸಿ ಶ್ರೀನಿವಾಸ್‌ ಎಂಬುವರು 100 ಕೆ.ಜಿ ಮೀನು ಹಿಡಿದು ಸ್ಥಳೀಯರಿಗೆ ಹಂಚಿದರು. ಅಲ್ಲದೆ, ನೀರಿನೊಂದಿಗೆ ಬಂದಿದ್ದ ಸುಮಾರು 20ಕ್ಕೂ ಹೆಚ್ಚು ಹಾವುಗಳನ್ನು ಮತ್ತೆ ಕೆರೆಗೆ ಬಿಟ್ಟರು.

ರೈಲ್ವೆ ಕಾಂಪೌಂಡ್‌ ಕುಸಿತ: ವಾಹನಗಳು ಜಖಂ

ಮಳೆಯಿಂದ ಯಶವಂತಪುರದ ಮೋಹನ್‌ ಕುಮಾರ್‌ ನಗರದಲ್ಲಿ ರೈಲ್ವೆ (Railway) ಕಾಂಪೌಂಡ್‌ವೊಂದು ಕುಸಿದಿದ್ದು, ಪಕ್ಕದಲ್ಲೇ ನಿಲ್ಲಿಸಿದ್ದ ಕೆಲವು ವಾಹನಗಳು (Vehicle) ಜಖಂಗೊಂಡವು. ರಾತ್ರಿ 8ರ ವೇಳೆಗೆ ರೈಲ್ವೆ ಕಾಂಪೌಂಡ್‌ ಕುಸಿದ ಪರಿಣಾಮ ಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ 2-3 ಆಟೋಗಳು ಹಾಗೂ ಒಂದು ದ್ವಿಚಕ್ರವಾಹನ ಜಖಂಗೊಂಡಿದೆ.