ಚಿಕ್ಕಮಗಳೂರಿನಲ್ಲಿ ಪುಟ್ಟದೊಂದು ಮನೆಯಲ್ಲಿ ವಾಸವಿದ್ದ ವೃದ್ಧ ದಂಪತಿ ಜಿಲ್ಲೆಯಲ್ಲಿ ಸುರಿದ ಮಹಾಮಳೆಯಲ್ಲಿ ತಮ್ಮ ಏಕೈಕ ಆಸ್ತಿಯಾಗಿದ್ದ ಮನೆಯನ್ನೂ ಕಳೆದುಕೊಂಡಿದ್ದಾರೆ. ದಂಪತಿಗಳು ಬಾಳಿ ಬದುಕಿದ್ದ ಮನೆ ನೋಡ ನೋಡುತ್ತಿದ್ದಂತೆಯೇ ಕಣ್ಣಮುಂದೆಯೇ ಕುಸಿದು ಬಿದ್ದಿದೆ.

ಚಿಕ್ಕಮಗಳೂರು(ಆ.17): ವೃದ್ಧ ದಂಪತಿ ತಮಗಿದ್ದ ಏಕೈಕ ಆಸ್ತಿ ಏಕೈಕ ಮನೆಯನ್ನು ಮಹಾಮಳೆಯಲ್ಲಿ ಕಳೆದುಕೊಂಡಿದ್ದಾರೆ. ಈಗ ತಾತ್ಕಾಲಿಕವಾಗಿ ಆಶ್ರಯ ಪಡೆದುಕೊಂಡಿದ್ದು ಬೇರೆಯವರ ಮನೆಯಲ್ಲಿ. ಈ ವೃದ್ಧ ದಂಪತಿ ತಮ್ಮ ಜೀವನದ ಕೊನೆಯಲ್ಲಿ ಈ ರೀತಿ ದುರಂತ ನಡೆಯುತ್ತದೆ ಅಂದುಕೊಂಡಿರಲೇ ಇಲ್ಲ.

Add Asianetnews Kannada as a Preferred SourcegooglePreferred

ಮೂಡಿಗೆರೆ ತಾಲೂಕಿನ ಹಿರೇಬೈಲು ಸಮೀಪದ ಯಡೂರು ಮಾರ್ಗದಲ್ಲಿ ಬೆನ್ನ ಪಾಯಿಸ್‌ (65) ಮತ್ತು ಪತ್ನಿ ಮೇರಿ ಪಾಯಿಸ್‌ (58) ಹೆಂಚಿನ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಅವರು ಇವರಿಂದ ದೂರವಾಗಿ ಬಹಳ ವರ್ಷಗಳೇ ಆಗಿವೆ ಎಂದು ನೆರೆಹೊರೆಯವರು ಹೇಳುತ್ತಿದ್ದಾರೆ.

ಬೆನ್ನ ಪಾಯಿಸ್‌ ಅವರು ಪಾಶ್ರ್ವವಾಯು ಪೀಡಿತರಾಗಿದ್ದಾರೆ. ಕಾಯಿಲೆಯಿಂದ ಬಳಲುತ್ತಿರುವ ಅವರು ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಪತ್ನಿ ಮೇರಿ ಪಾಯಿಸ್‌ ಅವರು ಊರಿನ ಆಸುಪಾಸಿನಲ್ಲಿರುವ ತೋಟಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಇವರಿಗೆ ತಮ್ಮದೇ ಆದ ಆಸ್ತಿ ಎಂದರೆ ಅದು ಹೆಂಚಿನ ಮನೆ. ಅದು ಹೊರತುಪಡಿಸಿ ಬೇರೆನೂ ಇಲ್ಲ. ಕೂಲಿ ಮಾಡಿ ಜೀವನ ನಡೆಸಬೇಕು.

ಚಿಕ್ಕಮಗಳೂರು: ನೆರೆ ಸಂತ್ರಸ್ತರಿಗೆ ಗ್ಯಾಸ್‌ ಸ್ಟೌ, ಪಾತ್ರೆ ಸೆಟ್‌

ಇತ್ತೀಚೆಗೆ ಸುರಿದ ಭಾರಿ ಮಳೆಯ ಸಂದರ್ಭದಲ್ಲಿ ಧರೆಯ ಮಣ್ಣು ಮನೆಯ ಬಳಿ ಕುಸಿಯುತ್ತಿದ್ದಂತೆ ಮೇರಿ ಪಾಯಿಸ್‌ ಅವರು ಬೇರೆಯವರ ಸಹಾಯದಿಂದ ತನ್ನ ಗಂಡನನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಮೇರಿ ಅವರು ನೋಡನೋಡುತ್ತಿದ್ದಂತೆ ಹಲವು ವರ್ಷದಿಂದ ಬಾಳಿ ಬದುಕಿದ ಮನೆ ಧರೆಯ ಮಣ್ಣಿನೊಳಗೆ ಮುಚ್ಚಿಹೋಯಿತು.

ಚಿಕ್ಕಮಗಳೂರು: ಜಿಲ್ಲೆ ಹಲವೆಡೆ ವಾಹನ ಸಂಚಾರಕ್ಕೆ ನಿರ್ಬಂಧ

ಮನೆಯಲ್ಲಿದ್ದ ಪಾತ್ರೆ, ಬಟ್ಟೆಸೇರಿದಂತೆ ಇತರೆ ಎಲ್ಲ ವಸ್ತುಗಳು ಮಣ್ಣು ಪಾಲಾದವು. ಈಗ, ಈ ನತದೃಷ್ಟದಂಪತಿ ಹಿರೇಬೈಲು ಗ್ರಾಮದ ವಿನ್ಸೆಂಟ್‌ ಫರ್ಟೂಡ್‌ ಅವರ ಮನೆಯಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿದ್ದಾರೆ.