ಅಲ್ಲಿನ ಬಡ ಕಿಡ್ನಿ ರೋಗಿಗಳು ಡಯಾಲಿಸಿಸ್ಗಾಗಿ ದುಬಾರಿ ವೆಚ್ಚ ಮಾಡಬೇಕಿತ್ತು. ಜಿಲ್ಲಾಸ್ಪತ್ರೆಯಲ್ಲಿರುವ ಡಯಾಲಿಸಿಸ್ ಯಂತ್ರಗಳು ಸಾಕಾಗದೆ ಮೈಸೂರು ಬೆಂಗಳೂರಿನಂತಹ ನಗರಗಳಿಗೆ ಹೋಗಬೇಕಿತ್ತು.
ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಮಾ.28): ಅಲ್ಲಿನ ಬಡ ಕಿಡ್ನಿ ರೋಗಿಗಳು ಡಯಾಲಿಸಿಸ್ಗಾಗಿ ದುಬಾರಿ ವೆಚ್ಚ ಮಾಡಬೇಕಿತ್ತು. ಜಿಲ್ಲಾಸ್ಪತ್ರೆಯಲ್ಲಿರುವ ಡಯಾಲಿಸಿಸ್ ಯಂತ್ರಗಳು ಸಾಕಾಗದೆ ಮೈಸೂರು ಬೆಂಗಳೂರಿನಂತಹ ನಗರಗಳಿಗೆ ಹೋಗಬೇಕಿತ್ತು. ಇದನ್ನು ಮನಗಂಡ ಅಲ್ಲಿನ ರೋಟರಿಸಂಸ್ಥೆ ಅತ್ಯಾಧುನಿಕ ಡಯಾಲಿಸಿಸ್ ಕೇಂದ್ರ ಸ್ಥಾಪಿಸಿ ಬಡರೋಗಿಗಳ ಪಾಲಿಗೆ ವರದಾನಗಿದೆ.
ರೋಟರಿ ಅಂದಾಕ್ಷಣಾ ಪೊಲಿಯೋ ನಿರ್ಮಾಲನೆ, ಉಚಿತ ಕಣ್ಣಿನ ತಪಾಸಣೆಯಂತ ಸೇವಾ ಕಾರ್ಯಗಳು ನಮ್ಮ ಕಣ್ಮುಂದೆ ಬರುತ್ತವೆ. ಹೀಗೆ ಕಳೆದ 56 ವರ್ಷಗಳಿಂದ ಹತ್ತು ಹಲವು ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಚಾಮರಾಜನಗರದ ರೋಟರಿ ಸಂಸ್ಥೆ, ಬಡ ಹಾಗು ಮಧ್ಯಮ ವರ್ಗದ ಕಿಡ್ನಿ ರೋಗಿಗಳಿಗಾಗಿ ಅತ್ಯಾಧುನಿಕ ಡಯಾಲಿಸಿಸ್ ಕೇಂದ್ರ ಸ್ಥಾಪಿಸಿದೆ. ಮೈಸೂರು ರೋಟರಿ ಸಂಸ್ಥೆಯ ನೆರವಿನೊಂದಿಗೆ ಒಂದು ಕೋಟಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ 10 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗಿದ್ದು ಪ್ರತಿ ತಿಂಗಳು 200 ಕ್ಕು ಹೆಚ್ಚು ಡಯಾಲಿಸಿಸ್ ಮಾಡಲಾಗುತ್ತಿದೆ.
ಬೇರೆ ಬೇರೆ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಲು ಒಂದುವರೆಯಿಂದ ಎರಡು ಸಾವಿರ ರೂಪಾಯಿ ಶುಲ್ಕ ತೆರಬೇಕು. ಆದರೆ ಇಲ್ಲಿ ಕೇವಲ 499 ರೂಪಾಯಿಗೆ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬರಿಗೆ ಒಂದು ಬಾರಿ ಡಯಾಲಿಸಿಸ್ ಮಾಡಲು 1200 ರೂಪಾಯಿ ವೆಚ್ಚ ತಗುಲುತ್ತಿದ್ದು ಉಳಿಕೆ ಹಣವನ್ನು ದಾನಿಗಳ ನೆರವಿನಿಂದ ರೋಟರಿ ಸಂಸ್ಥೆಯೇ ಭರಿಸುತ್ತಿದೆ. ಅತಿ ಬಡವರಿಗೆ ಸಂಪೂರ್ಣ ಉಚಿತವಾಗಿ ಡಯಾಲಿಸ್ ಮಾಡಲಾಗುತ್ತಿದೆ. ಪ್ರತಿ ತಿಂಗಳು ವೈದ್ಯಕೀಯ ಉಪಕರಣ, ಸಿಬ್ಬಂದಿ ವೇತನ ಸೇರಿದಂತೆ ಎರಡು ಲಕ್ಷ ರೂಪಾಯಿಗು ಅಧಿಕ ವೆಚ್ಚವಾಗುತ್ತಿದ್ದು ಈ ಹಣವನ್ನು ರೋಟರಿ ಸಂಸ್ಥೆಯೇ ಭರಿಸುತ್ತಿದೆ ಎನ್ನುತ್ತಾರೆ ಈ ಡಯಾಲಿಸಿಸ್ ಕೇಂದ್ರದ ರೂವಾರಿ ಡಾ. ನಾಗಾರ್ಜುನ್.
ರೋಗಿಗಳಿಗೆ ವರದಾನ
ಉಚಿತ ಕಣ್ಣಿನ ತಪಾಸಣೆ ಹಾಗು ಶಸ್ತ್ರಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ, ಸಿಮ್ಸ್ ಆಸ್ಪತ್ರೆಗೆ ರಕ್ತನಿಧಿ ಕೇಂದ್ರದ ಕೊಡುಗೆ, ಹಲವು ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ, ಕಂಪ್ಯೂಟರ್ ಹೀಗೆ ಹತ್ತು ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರೋಟರಿ ಸಂಸ್ಥೆ ಚಾಮರಾಜನಗರದಲ್ಲಿ ಸ್ಥಾಪಿಸಿರುವ ಡಯಾಲಿಸಿಸ್ ಕೇಂದ್ರ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ವರದಾನವಾಗಿದೆ. ಯಾರಾದರು ತಮ್ಮ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಹೀಗೆ ವಿಶೇಷ ಸಂದರ್ಭಗಳಲ್ಲಿ ಹಣ ನೀಡಿದರೆ ಅಂದು ಅವರ ಹೆಸರಿನಲ್ಲಿ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಮಾಡಲಾಗುತ್ತಿದೆ.
ಮುಂಬರುವ ದಿನಗಳಲ್ಲಿ ಬಡ ರೋಗಿಗಳಿಗೆ ಯಾವುದೇ ಶುಲ್ಕ ವಿಧಿಸದೆ ಸಂಪೂರ್ಣವಾಗಿ ಉಚಿತವಾಗಿ ಡಯಾಲಿಸಿಸ್ ಸೌಲಭ್ಯ ನೀಡಲು ರೋಟರಿ ಸಂಸ್ಥೆ ಚಿಂತನೆ ನಡೆಸಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಬದಲಾದ ಜೀವನಶೈಲಿ ಸೇರಿದಂತೆ ವಿವಿಧ ಕಾರಣಗಳಿಗೆ ಕಿಡ್ನಿ ಕಾಯಿಲೆ ಎದುರಾಗುತ್ತಿರುವುದರಿಂದ ವಾರಕ್ಕೊಮ್ಮೆ ತಜ್ಞ ವೈದ್ಯರಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲು ಸಹ ರೋಟರಿ ಸಂಸ್ಥೆ ನಿರ್ಧರಿಸಿದ್ದು ರೋಟರಿ ಸಂಸ್ಥೆಯ ಈ ಸೇವಾ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.


