ಬೆಂಗಳೂರಿನ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ಇತ್ತೀಚೆಗೆ ಉಂಟಾದ ವ್ಯತ್ಯಯಕ್ಕೆ ತಾಂತ್ರಿಕ ದೋಷ ಕಾರಣವೆಂದು ಭಾವಿಸಲಾಗಿತ್ತು. ಆದರೆ, ತನಿಖೆಯ ನಂತರ ಮಹಿಳೆಯೊಬ್ಬರ ಲೋಹದ ಸರ ರೈಲಿನ ಬಾಗಿಲಿಗೆ ಸಿಲುಕಿದ್ದೇ ಈ ವಿಳಂಬಕ್ಕೆ ಕಾರಣವೆಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ. ಈ ಘಟನೆಯಿಂದಾಗಿ ಸಂಜೆ ವೇಳೆ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.

ಬೆಂಗಳೂರಿಗರ ಜೀವನಾಡಿಯಾಗಿದೆ ನಮ್ಮ ಮೆಟ್ರೊ: ದಿನವೂ ಲಕ್ಷಾಂತರ ಮಂದಿ ಪ್ರಯಾಣಿಕರು ಇದನ್ನು ಅವಲಂಬಿಸಿದ್ದಾರೆ. 2-3 ನಿಮಿಷಕ್ಕೆ ಒಂದು ಮೆಟ್ರೋ ಬಂದರೂ ದಟ್ಟಣೆ ಸಮಯದಲ್ಲಿ, ನಿಲ್ಲಲೂ ಆಗದಷ್ಟು ನೂಕು ನುಗ್ಗಲು ಪ್ರತಿಯೊಂದು ಮೆಟ್ರೋದಲ್ಲಿಯೂ ಇರುತ್ತದೆ ಎಂದರೆ, ಇದು ಯಾವ ರೀತಿಯಲ್ಲಿ ಬೆಂಗಳೂರಿಗರ ಅಗತ್ಯವಾಗಿದೆ ಎನ್ನುವುದು ತಿಳಿಯುತ್ತದೆ. ಅದರಲ್ಲಿಯೂ ಕೆಲವೊಂದು ಮಾರ್ಗಗಳಲ್ಲಿ ಅತಿಹೆಚ್ಚು ಐಟಿ ಕಂಪೆನಿಗಳು ಇರುವ ಕಾರಣ, ಅಲ್ಲಿ ಉದ್ಯೋಗಿಗಳಿಗೆ ಇದೇ ಜೀವನಾಧಾರ ಆಗಿಬಿಟ್ಟಿದೆ. ರೇಟ್​ ಹೆಚ್ಚು ಮಾಡಲಿ, ಫ್ರೀ ಬಸ್​ ಇರಲಿ. ಅದೇನೇ ಇದ್ದರೂ ಸಮಯ ಉಳಿಸಲು ಮತ್ತು ನಿಗದಿತ ಟೈಮ್​ಗೆ ಲಭ್ಯ ಇರುವ ಕಾರಣ, ಮೆಟ್ರೋ ಬೇಕೇ ಬೇಕು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊನ್ನೆ ನೇರಳೆ ಮಾರ್ಗದ ಮೆಟ್ರೊದಲ್ಲಿ ತಾಂತ್ರಿಕ ಕಾರಣದಿಂದ ಮೆಟ್ರೋ ಸಂಚಾರ ಆಗಲಿಲ್ಲ. ಇದನ್ನು ಮೊದಲೇ ಬಿಎಂಆರ್​ಸಿಎಲ್​ ತಿಳಿಸಿದ್ದರೂ, ಅದು ಗೊತ್ತಿಲ್ಲದೇ ಬಂದ ಜನರು ಪಟ್ಟ ಪರದಾಟ ಆ ದೇವರಿಗೇ ಪ್ರೀತಿ. ಆದರೆ ನಿನ್ನೆ ಇದ್ದಕ್ಕಿದ್ದಂತೆಯೇ ಮತ್ತೆ ನೇರಳೆ ಮಾರ್ಗದ ಮೆಟ್ರೊ ಸ್ಥಗಿತಗೊಂಡು ಜನರು ಹಿಡಿಶಾಪ ಹಾಕಿದರು. ಹೀಗೆ ಪದೇ ಪದೇ ಮೆಟ್ರೊ ಕೈಕೊಡುತ್ತಿರುವುದು ರಾಜಕೀಯ ತಿರುವನ್ನು ಕೂಡ ಪಡೆದುಕೊಂಡಿತು. ಒಂದೇ ವಾರದಲ್ಲಿ ಎರಡನೇ ಬಾರಿಗೆ ಕಬ್ಬನ್ ಪಾರ್ಕ್ ನಿಲ್ದಾಣದ ಬಳಿ ಮೆಟ್ರೋ ಸಂಚಾರ ಕೈಕೊಟ್ಟಿರುವುದು ಟೀಕೆಗೆ ಗುರಿಯಾಯಿತು. ಅದರಲ್ಲಿಯೂ ಸಂಜೆಯ ವೇಳೆ ಉದ್ಯೋಗಿಗಳು ಇದನ್ನೇ ನಂಬಿಕೊಂಡು ಬಂದಿದ್ದರಿಂದ ಎಲ್ಲರೂ ಪರದಾಡುವಂತಾಯಿತು.

ಮಹಿಳೆಯ ಚೈನ್​ ತಂದ ಫಜೀತಿ

ಆದರೆ ನಿನ್ನೆ ಅರ್ಥಾತ್​ ಜೂನ್​ 25ರ ಗುರುವಾರ ಅಚಾನಕ್​ ಹೀಗೆ ಮೆಟ್ರೊದಲ್ಲಿ ಸಮಸ್ಯೆ ಕಂಡಿರುವುದಕ್ಕೆ ಕಾರಣ ಮಹಿಳೆಯೊಬ್ಬಳ ಚೈನ್​ ಎನ್ನುವುದು ಬೆಳಕಿಗೆ ಬಂದಿದೆ! ಮೆಟಲ್​ ಚೈನ್​ ಒಂದು ಮೆಟ್ರೋ ರೈಲಿನ ಬಾಗಿಲಿಗೆ ಸಿಕ್ಕಿಹಾಕಿಕೊಂಡಿತ್ತು. ಈ ಘಟನೆಯಿಂದ ರಾತ್ರಿ 7:36 ರಿಂದ 7:54 ಗಂಟೆಯವರೆಗೆ ಮೆಟ್ರೋ ಸೇವೆಯಲ್ಲಿ, ತಾತ್ಕಾಲಿಕ ವ್ಯತ್ಯಯ ಉಂಟಾಗಿತ್ತು. ಮೆಟ್ರೋಗಾಗಿ ಕಾದೂ ಕಾದೂ ಸುಸ್ತಾದವರು ಹಿಡಿಶಾಪ ಹಾಕತೊಡಗಿದರು. ತಾಂತ್ರಿಕ ದೋಷ ಎಂದು ಮೊದಲು ಅಂದುಕೊಳ್ಳಲಾಗಿತ್ತು. ಆ ಬಳಿಕ ತಪಾಸಣೆ ಮಾಡಿದಾಗ ಕಂಡು ಬಂದದ್ದು ಮಹಿಳೆಯ ಚೈನು.

ಡೋರ್ ಗೈಡ್‌ವೇನಲ್ಲಿ ಸಿಲುಕಿದ್ದ ಚೈನ್​

ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ನಡೆಸಿದ ತನಿಖೆಯಲ್ಲಿ, ಪ್ರಯಾಣಿಕರೊಬ್ಬರ ಲೋಹದ ಸರ (Metal Chain) ರೈಲಿನ ಬಾಗಿಲಿನ ಡೋರ್ ಗೈಡ್‌ವೇ ಯಲ್ಲಿ ಸಿಲುಕಿಕೊಂಡಿದ್ದರಿಂದ ಬಾಗಿಲುಗಳು ಸರಿಯಾಗಿ ಮುಚ್ಚಲು ಸಾಧ್ಯವಾಗದ ಪರಿಣಾಮವಾಗಿ ಕಾರ್ಯಾಚರಣೆಯಲ್ಲಿ ತಾತ್ಕಾಲಿಕ ವಿಳಂಬ ಉಂಟಾಗಿತ್ತು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ರೈಲು ಹಾಗೂ ಅದರ ಬಾಗಿಲಿನ ವ್ಯವಸ್ಥೆಯ ಸಮಗ್ರ ತಾಂತ್ರಿಕ ಪರಿಶೀಲನೆಯ ನಂತರ, ರೈಲಿನ ಉಪಕರಣಗಳಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂಬುದು ದೃಢಪಟ್ಟಿದೆ ಎಂದಿದ್ದಾರೆ.