ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಕಳೆದ ಮೂರು ತಿಂಗಳಲ್ಲಿ 4000ಕ್ಕೂ ಹೆಚ್ಚು ಜನರಿಗೆ ಕಚ್ಚಿ, ಚಿಕಿತ್ಸೆ ಫಲಿಸದೆ ಇಬ್ಬರು ಸಾವನ್ನಪ್ಪಿದ್ದಾರೆ. ಜಿಲ್ಲಾಡಳಿತವು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರೂ, ಶೆಲ್ಟರ್ ನಿರ್ಮಾಣಕ್ಕೆ ಜಾಗದ ಕೊರತೆಯಿಂದಾಗಿ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.
ಮಂಜುನಾಥ ಕೆ.ಎಂ.
ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು, ಮೂರೇ ತಿಂಗಳಲ್ಲಿ 4000ಕ್ಕೂ ಅಧಿಕ ಜನರಿಗೆ ನಾಯಿಗಳು ಕಚ್ಚಿ ಚಿಕಿತ್ಸೆ ಫಲಿಸದೇ ಇಬ್ಬರು ಸಾವಿಗೀಡಾಗಿದ್ದಾರೆ. ಜಿಲ್ಲೆಯ ಐದು ತಾಲೂಕುಗಳ ಪೈಕಿ ಬಳ್ಳಾರಿ ನಗರದಲ್ಲಿ ಅತಿ ಹೆಚ್ಚು ನಾಯಿ ಕಡಿತ ಘಟನೆಗಳು ನಡೆದಿವೆ.
ಬಳ್ಳಾರಿ ನಗರದಲ್ಲಿ 17 ಸಾವಿರ ಸೇರಿ ತಾಲೂಕಿನಲ್ಲಿ 30,383 ನಾಯಿಗಳಿವೆ. ಒಂದು ವರ್ಷದ ಹಿಂದಿನ ಗಣತಿ ಪ್ರಕಾರ ಜಿಲ್ಲೆಯಲ್ಲಿ 52,375 ನಾಯಿಗಳಿವೆ. ಕಳೆದ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ 4,330 ಜನರಿಗೆ ನಾಯಿ ಕಚ್ಚಿದ್ದು ಚಿಕಿತ್ಸೆ ಪಡೆದಿದ್ದಾರೆ.
ಬಳ್ಳಾರಿಯಲ್ಲಿ ನಿತ್ಯ 250 ರಿಂದ 300 ಶ್ವಾನಗಳನ್ನು ಹಿಡಿದು ಸಂತಾನ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಕಳೆದ ವರ್ಷದ ಜೂನ್ನಿಂದ ಈವರೆಗೆ ನಗರದ 3800 ಶ್ವಾನಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮೊದಲ ಆದ್ಯತೆಯಾಗಿ ಆಸ್ಪತ್ರೆಗಳು ಹಾಗೂ ಶಾಲಾ-ಕಾಲೇಜುಗಳ ಬಳಿಯ ಶ್ವಾನಗಳನ್ನು ಮಾತ್ರ ಹಿಡಿಯಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ತಿಳಿಸಿದ್ದಾರೆ.
ನಾಯಿಗಳ ಕಡಿತಕ್ಕೆ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಆರ್ವಿ ಇಂಜೆಕ್ಷನ್ ಲಭ್ಯವಿದೆ. ಎಲ್ಲೂ ಕೊರತೆಯಿಲ್ಲ. ಒಂದು ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಭ್ಯವಿಲ್ಲದಿದ್ದರೆ ಕೂಡಲೇ ತಾಲೂಕು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವೈ.ರಮೇಶ್ ಬಾಬು ಕನ್ನಡಪ್ರಭಕ್ಕೆ ತಿಳಿಸಿದರು.
ನಾಯಿ ಶೆಲ್ಟರ್ಗೆ ಜಾಗದ ಅಭಾವ
ಶ್ವಾನಗಳನ್ನು ಹಿಡಿದ ಬಳಿಕ ಅವುಗಳನ್ನು ಶೆಲ್ಟರ್ನಲ್ಲಿ ಹಾಕಬೇಕು. ಸದ್ಯಕ್ಕೆ ಬಳ್ಳಾರಿ ಹೊರವಲಯದ ಗುಗ್ಗರಹಟ್ಟಿ ಪ್ರದೇಶದಲ್ಲಿ ಶೆಲ್ಟರ್ ನಿರ್ಮಿಸಲಾಗಿದೆ. ಆದರೆ, ಈ ಶೆಲ್ಟರ್ನಲ್ಲಿ 250ರಿಂದ 300 ನಾಯಿಗಳನ್ನು ಮಾತ್ರ ಇರಿಸಬಹುದು. ಸುಮಾರು 17 ಸಾವಿರ ನಾಯಿಗಳನ್ನು ಶೆಲ್ಟರ್ನಲ್ಲಿರಿಸಲು ದೊಡ್ಡ ಜಾಗವೇ ಬೇಕು. ಹೊರವಲಯದ ಆಲ್ದಳ್ಳಿ ಬಳಿ 10 ಎಕರೆ ಸರ್ಕಾರಿ ಜಮೀನಿನಲ್ಲಿ ದೊಡ್ಡ ಶೆಲ್ಟರ್ ನಿರ್ಮಿಸಲು ಯೋಚಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಜಾಗ ಪಾಲಿಕೆಯ ಸುಪರ್ದಿಗೆ ಬಂದಿಲ್ಲ. ಹೀಗಾಗಿ ಶೆಲ್ಟರ್ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ತುಂಗಾಭದ್ರ ಜಲಾಶಯದ ನೀರಿನ ಮಟ್ಟದಲ್ಲಿ ಭಾರಿ ಇಳಿಕೆ: ಹಲವು ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ
ನಾಯಿಗಳಿಗೆ ಶೆಲ್ಟರ್ ನಿರ್ಮಿಸುವ ಸಂಬಂಧ ಸರ್ಕಾರಕ್ಕೆ ₹4 ಕೋಟಿ ಕೊಡುವಂತೆ ಕೇಳಲಾಗಿತ್ತು. ಮೊದಲ ಹಂತದಲ್ಲಿ ₹1.05 ಕೋಟಿ ಬಿಡುಗಡೆ ಮಾಡಿದ್ದಾರೆ. ಆದರೆ, ಶೆಲ್ಟರ್ ನಿರ್ಮಿಸಲು ಜಾಗವಿಲ್ಲ. ಆಲ್ದಳಿ ಬಳಿಯ 10 ಎಕರೆ ಜಾಗ ಪಾಲಿಕೆ ಸುಪರ್ದಿಗೆ ಪಡೆಯಲು ಕ್ರಮ ವಹಿಸಲಾಗುತ್ತಿದೆ ಎಂದು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ್ ಹೇಳುತ್ತಾರೆ.
ಹೊಸಪೇಟೆಯಲ್ಲಿ 733 ಜನರಿಗೆ ನಾಯಿ ಕಡಿತ
ವಿಜಯನಗರ ಜಿಲ್ಲೆಯಲ್ಲಿ ಕಳೆದ ಜನವರಿ, ಫೆಬ್ರವರಿಯಲ್ಲಿ 1751 ಜನರಿಗೆ ನಾಯಿಗಳು ಕಚ್ಚಿದ್ದು, ಈ ಪೈಕಿ ಹೊಸಪೇಟೆ ನಗರದಲ್ಲಿಯೇ 733 ಜನರಿಗೆ ನಾಯಿ ಕಚ್ಚಿರುವ ಪ್ರಕರಣಗಳಿವೆ. ಕೂಡ್ಲಿಗಿ, ಕೊಟ್ಟೂರಿನಲ್ಲಿ ಅತಿ ಕಡಿಮೆ ನಾಯಿ ದಾಳಿ ಪ್ರಕರಣಗಳಿವೆ.
ಇದನ್ನೂ ಓದಿ: ಅಖಂಡ ಬಳ್ಳಾರಿ ಜಿಲ್ಲೆಗೆ ₹2372 ಕೋಟಿ ವೆಚ್ಚದಲ್ಲಿ ಎರಡು ಹೊಸ ರೈಲು ಮಾರ್ಗ, ಅಭಿವೃದ್ಧಿಯ ಹೊಸ ಶಕೆ


