ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳಿಗೆ ಒಂದೇ ಆಧಾರ್ ಸಂಖ್ಯೆ ನೀಡಿದ್ದರಿಂದ ಅವರು 9 ವರ್ಷಗಳ ಕಾಲ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದರು. ಕನ್ನಡಪ್ರಭ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು, ಒಬ್ಬರ ಆಧಾರ್ ಕಾರ್ಡ್ ರದ್ದುಪಡಿಸಿ ಹೊಸ ಕಾರ್ಡ್ ನೀಡುವುದಾಗಿ ಭರವಸೆ ನೀಡಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾರೆ.

ಬಾಗಲಕೋಟೆ: ಜಮಖಂಡಿಚತಾಲೂಕಿನ ಹಿರೇಪಡಸಲಗಿ ಗ್ರಾಮದ ಇಬ್ಬರು ನಿವಾಸಿಗಳಿಗೆ ಒಂದೇ ಆಧಾರ್‌ ನಂಬರ್‌ ವಿತರಿಸಿದ ಕುರಿತು ಕನ್ನಡಪ್ರಭ ವರದಿ ಪ್ರಕಟಿಸಿದ ನಂತರ ಎಚ್ಚತ್ತ ಅಧಿಕಾರಿಗಳು ಗೊಂದಲವನ್ನು ಸರಿಪಡಿಸಲು ಮುಂದಾಗಿದ್ದಾರೆ.

ಅಪರೂಪದ ಪ್ರಕರಣ

ಬೆಂಗಳೂರು ಹಾಗೂ ಬಾಗಲಕೋಟೆ ಅಧಿಕಾರಿಗಳ ನಿರ್ದೇಶನದ ಮೇರೆಗೆ ತಾಲೂಕು ಮಟ್ಟದ ಅಧಿಕಾರಿಗಳು ಸಂತ್ರಸ್ತರನ್ನು ಕಚೇರಿಗೆ ಕರೆಯಿಸಿಕೊಂಡು ಮಾಹಿತಿ ಪಡೆದಿದ್ದಾರೆ. ಅಲ್ಲದೇ ಒಂದು ಆಧಾರ ಕಾರ್ಡ್‌ನ್ನು ರದ್ದುಪಡಿಸಿ ಹೊಸ ಆಧಾರ್‌ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಒಂದೇ ಆಧಾರ್‌ ಸಂಖ್ಯೆ ಇಬ್ಬರು ವ್ಯಕ್ತಿಗಳಿಗೆ ಹಂಚಿಕೆಯಾಗಿರುವ ಅಪರೂಪದ ಪ್ರಕರಣವೊಂದು ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ಬೆಳಕಿಗೆ ಬಂದಿತ್ತು.

ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತ

ಈ ಲೋಪದಿಂದಾಗಿ ಇಬ್ಬರು ಬಡ ಕುಟುಂಬಗಳು 2017ರಿಂದ 9 ವರ್ಷಗಳ ವರೆಗೆ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮದ ಆನಂದ ಬಡಿಗೇರ ಹಾಗೂ ಚನ್ನಬಸವ ದೊಡ್ಡಮನಿ ಎಂಬ ಇಬ್ಬರು ವ್ಯಕ್ತಿಗಳ ಆಧಾರ ಕಾರ್ಡ್ಗಳಲ್ಲಿ ಒಂದೇ ಆಧಾರ್‌ ಸಂಖ್ಯೆ ನಮೂದಾಗಿರುವುದೇ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಇಬ್ಬರೂ ತಮ್ಮದೇ ಆದ ಗುರುತಿನ ದಾಖಲೆ ಹೊಂದಿದ್ದರೂ, ಆಧಾರ್‌ ಸಂಖ್ಯೆ ಒಂದೇ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಗಳು, ಪಿಂಚಣಿ ಸೇರಿ ಅಗತ್ಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಆಧಾರ ಸಂತ್ರಸ್ತ ಚೆನ್ನಬಸವ ದೊಡ್ಡಮನಿ ಎಂಬುವರನ್ನು ತಾಲೂಕು ಅಧಿಕಾರಿಗಳು ಬುಧವಾರ ಕಚೇರಿ ಕರೆಯಿಸಿಕೊಂಡು ಮಾಹಿತಿ ಪಡೆದರಲ್ಲದೇ ಬೆಂಗಳೂರು ಹಾಗೂ ಬಾಗಲಕೋಟೆಯ ಅಧಿಕಾರಿಗಳು ಚನ್ನಬಸವ ನೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರೆಯಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಸಂತ್ರಸ್ತರಲ್ಲಿ ತಮ್ಮ ಸಮಸ್ಯೆಗೆ ಪರಿಹಾರ ದೊರಕುವದೆಂಬ ಭರವಸೆ ಮೂಡಿದ್ದು, ಕನ್ನಡಪ್ರಭಕ್ಕೆ ಅಭಿನಂದನೆ ತಿಳಿಸಿದ್ದಾರೆ.