ಬೆಳಗಾವಿ ತಾಲೂಕಿನ ಸತ್ತಿ ಗ್ರಾಮದ 8ನೇ ತರಗತಿ ವಿದ್ಯಾರ್ಥಿ ಶ್ರೀಶೈಲ ಕಲಗೌಡ ಜಗದೇವ, ಮನೆಯಲ್ಲಿನ ನಿರುಪಯುಕ್ತ ವಸ್ತುಗಳನ್ನು ಬಳಸಿ 80 ಕೆಜಿ ಭಾರ ಎಳೆಯಬಲ್ಲ ಟ್ರ್ಯಾಕ್ಟರ್ ಅನ್ನು ಸಂಶೋಧಿಸಿದ್ದಾನೆ. ಈ ಬಾಲಕನ ವೈಜ್ಞಾನಿಕ ಮನೋಭಾವ ಮತ್ತು ಸಾಧನೆಗೆ ಶಾಲೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಬೆಳಗಾವಿ: ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ತಾಲೂಕಿನ ಸತ್ತಿ ಗ್ರಾಮದ ಬಸವಶ್ರೀ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ಪಾಟೀಲ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಶ್ರೀಶೈಲ ಕಲಗೌಡ ಜಗದೇವ 80 ಕೇಜಿ ಭಾರ ಹೊರುವ ಟ್ರ್ಯಾಕ್ಟರ್ ಸಂಶೋಧನೆ ಮಾಡುವ ಮೂಲಕ ತನ್ನ ಸಹಪಾಠಿಗಳಿಗೆ ಮಾದರಿಯಾಗಿದ್ದಾನೆ.

ಮನೆಯಲ್ಲಿರುವ ನಿರೂಪಯುಕ್ತ ವಸ್ತುಗಳನ್ನು ಬಳಸಿಕೊಂಡು 80 ಕೇಜಿ ಭಾರ ಜಗ್ಗುವ ಟ್ರ್ಯಾಕ್ಟರ್ ಅನ್ನು ಸಂಶೋಧನೆ ಮಾಡಿದ್ದು, ಶಾಲೆಯ ಶಿಕ್ಷಕರು ಈ ಬಾಲಕನ ಸಂಶೋಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಯ ಸಾಧನೆಯ ಕುರಿತು ಸಂಸ್ಥೆಯ ಅಧ್ಯಕ್ಷ ಚಿದಾನಂದ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿ, ಶ್ರೀಶೈಲ ಜಗದೇವ ವೈಜ್ಞಾನಿಕ ಮನೋಭಾವ ಹೊಂದಿದ್ದು, ಜೀವನದಲ್ಲಿ ಏನಾದರೂ ಹೊಸ ಸಂಶೋಧನೆ ಮಾಡಬೇಕು ಎಂಬ ತವಕ ಹೊಂದಿದ್ದಾನೆ. ವಿದ್ಯಾರ್ಥಿಯು ಮನೆಯಲ್ಲಿರುವ ಪ್ಲಾಸ್ಟಿಕ್ ಪೈಪ್, ಪ್ಲೈವುಡ್, ಸೈಕಲ್ ಟ್ಯೂಬ್, ರಟ್ಟು, ಡ್ರಿಲ್ ಮಷೀನ್, ವೈರ್ ತುಂಡುಗಳು ಇನ್ನಿತರ ವಸ್ತುಗಳನ್ನು ಉಪಯೋಗಿಸಿಕೊಂಡು ಟ್ರ್ಯಾಕ್ಟರ್ ತಯಾರಿಸಿದ್ದಾನೆ.

ವಿಶೇಷ ವಿನ್ಯಾಸವುಳ್ಳ ಟ್ರ್ಯಾಕ್ಟರ್

ಟ್ರ್ಯಾಕ್ಟರನ್ನು ವಿಶೇಷ ವಿನ್ಯಾಸದ ಮೂಲಕ ತಯಾರಿಸಿದ್ದು ಅದರಲ್ಲಿ ಬ್ಲೂಟೂತ್ ಮೂಲಕ ಸೌಂಡ್ ವ್ಯವಸ್ಥೆ, ಲೈಟಿಂಗ್ ವ್ಯವಸ್ಥೆ, ಹಿಂದೆ ಮುಂದೆ ತೆಗೆದುಕೊಳ್ಳುವ ಸೌಲಭ್ಯ ಅನೇಕ ವಿಶೇಷತೆಗಳಿವೆ. ಚಿಕ್ಕ ವಯಸ್ಸಿನಲ್ಲಿಯೇ ಸಂಶೋಧನಾ ಮನೋಭಾವ ಹೊಂದಿರುವ ವಿದ್ಯಾರ್ಥಿ, ಭವಿಷ್ಯತ್ತಿನಲ್ಲಿ ವಿಜ್ಞಾನಿ ಆಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಈ ಸಾಧನೆ ಮಾಡುವ ಮೂಲಕ ನಮ್ಮ ಶಾಲೆಗೆ ಕೀರ್ತಿ ಹೆಚ್ಚಿಸಿದ್ದಾನೆ. ಮುಂಬರುವ ದಿನಗಳಲ್ಲಿ ಈ ಬಾಲಕ ನಡೆಸುವ ಸಂಶೋಧನೆಗೆ ಶಿಕ್ಷಕರ ಮಾರ್ಗದರ್ಶನ ಮತ್ತು ಸಂಸ್ಥೆಯ ಸಹಕಾರ ನೀಡಲಾಗುವುದು ಎಂದರು.

ಕನಸು ಹೇಳಿಕೊಂಡ ಬಾಲ ವಿಜ್ಞಾನಿ

ನಾನು ಕೂಡಾ ಏನಾದರೂ ಸಂಶೋಧನೆ ಮಾಡಬೇಕು ಎಂಬ ಕನಸಿನೊಂದಿಗೆ ಮನೆಯಲ್ಲಿರುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಇoದು 80 ಕೇಜಿ ಭಾರ ಹೊತ್ತು ಸಾಗುವ ಟ್ರ್ಯಾಕ್ಟರ್ ಆವಿಷ್ಕಾರ ಮಾಡಿದ್ದೇನೆ. ಮುಂದೆ 500 ಕೇಜಿ ಭಾರ ಹೊತ್ತೊಯ್ಯುವ ಟ್ರ್ಯಾಕ್ಟರ್ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದೇನೆ ಎಂದು ಶ್ರೀಶೈಲ ಜಗದೇವ ಹೇಳುತ್ತಾನೆ.