ಕಾರವಾರದ ಕಠಿಣಕೋಣ ಗ್ರಾಮದ ಮನೆಯೊಂದರ ಅಂಗಳದಲ್ಲಿ 8 ರಿಂದ 12 ಅಡಿ ಉದ್ದದ ಆರು ಬೃಹತ್ ಹೆಬ್ಬಾವುಗಳು ಪತ್ತೆಯಾಗಿವೆ. ಉರಗ ರಕ್ಷಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಈ ಹಾವುಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ. 

​ಕಾರವಾರ: ಬೃಹತ್ ಗಾತ್ರದ 6 ಹೆಬ್ಬಾವುಗಳು ಒಂದೇ ಕಡೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಹಾಗೂ ಅಚ್ಚರಿ ಮೂಡಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಕಠಿಣಕೋಣ ಗ್ರಾಮದ ನಿವಾಸಿ ವಿಜಯ ತಳೇಕರ ಅವರ ಮನೆಯ ಆವರಣದಲ್ಲಿ ಕೆಲವು ದಿನಬಳಕೆಯ ವಸ್ತುಗಳನ್ನು ದಾಸ್ತಾನು ಮಾಡಲಾಗಿತ್ತು. ಈ ವಸ್ತುಗಳ ಅಡಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವುಗಳು ಅಡಗಿ ಕುಳಿತಿದ್ದನ್ನು ಗಮನಿಸಿದ ಮನೆಯವರು ಉರಗ ರಕ್ಷಕ ಹಾಗೂ ಅರಣ್ಯ ಇಲಾಖೆಯ ಗಸ್ತು ವನಪಾಲಕ ಗೋಪಾಲ ನಾಯ್ಕ ಅವರಿಗೆ ಮಾಹಿತಿ ನೀಡಿದ್ದಾರೆ.

6 ಹೆಬ್ಬಾವುಗಳ ರಕ್ಷಣೆ 

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಗೋಪಾಲ ನಾಯ್ಕ, ರಾಜೇಶ್ ನಾಯ್ಕ ಅವರ ನೆರವಿನೊಂದಿಗೆ ಕಾರ್ಯಾಚರಣೆಗಿಳಿದರು. ಪತ್ತೆಯಾದ ಆರೂ ಹೆಬ್ಬಾವುಗಳು ತಲಾ 8 ರಿಂದ 12 ಅಡಿ ಉದ್ದವಿದ್ದವು. ಯಾವುದೇ ಪ್ರಾಣಹಾನಿ ಅಥವಾ ಹಾವುಗಳಿಗೆ ತೊಂದರೆ ಆಗದಂತೆ ಅತ್ಯಂತ ಎಚ್ಚರಿಕೆಯಿಂದ ಎಲ್ಲ 6 ಹೆಬ್ಬಾವುಗಳನ್ನು ಸುರಕ್ಷಿತವಾಗಿ ಸೆರೆಹಿಡಿದು, ಬಳಿಕ ಅವುಗಳನ್ನು ಅರಣ್ಯಕ್ಕೆ ಬಿಡಲಾಯಿತು.

ಇದನ್ನೂ ಓದಿ: ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ ಇಂಡಿಯ ಲಿಂಬೆಕಾಯಿ ಬಗ್ಗೆ ಪ್ರಧಾನಿ ಮೋದಿ ಫಿದಾ

ಹಾವುಗಳ ಮಿಲನಕ್ರಿಯೆಯ ಸಮಯ

ಈ ಕುರಿತು ಮಾಹಿತಿ ನೀಡಿರುವ ಉರಗ ರಕ್ಷಕ ಗೋಪಾಲ ನಾಯ್ಕ, ಬೇಸಿಗೆ ಕಾಲದ ಆರಂಭವು ಹಾವುಗಳ ಮಿಲನಕ್ರಿಯೆಯ ಸಮಯವಾಗಿದೆ. ಈ ಅವಧಿಯಲ್ಲಿ ಹೆಣ್ಣು ಹಾವನ್ನು ಹುಡುಕಿಕೊಂಡು ಗಂಡು ಹಾವುಗಳು ಬರುವುದು ಪ್ರಕೃತಿ ಸಹಜ. ಇದೇ ಕಾರಣಕ್ಕಾಗಿ ಒಂದೇ ಕಡೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹೆಬ್ಬಾವುಗಳು ಸೇರಿದ್ದವು ಎಂದು ಸ್ಪಷ್ಟಪಡಿಸಿದ್ದಾರೆ. ಸಕಾಲದಲ್ಲಿ ಅರಣ್ಯ ಇಲಾಖೆ ಸ್ಪಂದಿಸಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಯಾವ ಶಾಸಕರಾದರೂ 5 ಲಕ್ಷ ತೆಗೆದುಕೊಳ್ತಾರಾ? ಚಂದ್ರು ಲಮಾಣಿ ಪರ ಶ್ರೀರಾಮುಲು ಬ್ಯಾಟಿಂಗ್