ನಂಜನಗೂಡಿನ ರಸಬಾಳೆಹಣ್ಣು, ಮೈಸೂರಿನ ವೀಳ್ಯದೆಲೆ ಮತ್ತು ವಿಜಯಪುರದ ಇಂಡಿ ನಿಂಬೆ ರುಚಿ ಮತ್ತು ಗುಣಮಟ್ಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಇದೇ ಕಾರಣಕ್ಕೆ ಇವು ವಿದೇಶಗಳಿಗೆ ಕೂಡ ರಫ್ತಾಗುತ್ತಿವೆ ಎಂದು ಹೇಳಿದ್ದಾರೆ.

ನವದೆಹಲಿ: ನಂಜನಗೂಡಿನ ರಸಬಾಳೆಹಣ್ಣು, ಮೈಸೂರಿನ ವೀಳ್ಯದೆಲೆ ಮತ್ತು ವಿಜಯಪುರದ ಇಂಡಿ ನಿಂಬೆ ರುಚಿ ಮತ್ತು ಗುಣಮಟ್ಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಇದೇ ಕಾರಣಕ್ಕೆ ಇವು ವಿದೇಶಗಳಿಗೆ ಕೂಡ ರಫ್ತಾಗುತ್ತಿವೆ ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

‘ಮನ್‌ ಕೀ ಬಾತ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ

ಭಾನುವಾರ ಪ್ರಸಾರವಾದ ಮಾಸಿಕ ‘ಮನ್‌ ಕೀ ಬಾತ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೃಷಿಯಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ ರಾಜ್ಯಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ, ಈ ವೇಳೆ ಕರ್ನಾಟಕದ ಕೃಷಿ ಉತ್ಪನ್ನಗಳ ಬಗ್ಗೆಯೂ ಪ್ರಸ್ತಾಪಿಸಿದರು.

ಕೃಷಿಕರ ಪರಿಶ್ರಮವು ಭಾರತದ ಸಾಧನೆ

‘ಕೃಷಿಕರ ಪರಿಶ್ರಮವು ಭಾರತದ ಸಾಧನೆಯ ಅಂಕಿ-ಅಂಶಗಳನ್ನು ಪ್ರತಿಫಲಿಸಿದ್ದು, 15 ಕೋಟಿ ಟನ್‌ ಅಕ್ಕಿ ಉತ್ಪಾದಿಸುವ ಮೂಲಕ ದೇಶ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕನಾಗಿ ಹೊರಹೊಮ್ಮಿದೆ. ಅನ್ನದಾತರಾಗಿರುವ ರೈತರೇ ಭೂಮಿತಾಯಿಯ ನಿಜವಾದ ಆರಾಧಕರಾಗಿದ್ದಾರೆ. ಮಣ್ಣನ್ನು ಚಿನ್ನ ಮಾಡುವ ಕಲೆಯನ್ನು ಅವರಿಂದ ಕಲಿಯಬೇಕು’ ಎಂದು ಮೋದಿ ಕೊಂಡಾಡಿದರು.

ಇದೇ ವೇಳೆ ಭಾರತೀಯ ಕೃಷಿ ಉತ್ಪನ್ನಗಳು ಮಾಲ್ಡೀವ್ಸ್‌ನಂತಹ ರಾಷ್ಟ್ರಗಳಿಗೆ ರಫ್ತಾಗುತ್ತಿರುವುದನ್ನು ಉಲ್ಲೇಖಿಸುತ್ತಾ, ‘ವಿಮಾನಗಳ ಮೂಲಕ ನಂಜನಗೂಡಿನ ಬಾಳೆ, ಮೈಸೂರಿನ ವೀಳ್ಯದೆಲೆ, ಇಂಡಿ ನಿಂಬೆ ಈಗ ಅನ್ಯ ದೇಶಗಳ ಮಾರುಕಟ್ಟೆಯನ್ನೂ ಪ್ರವೇಶಿಸುತ್ತಿವೆ. ಇವುಗಳು ರುಚಿ ಹಾಗೂ ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು, ಜಿಐ ಟ್ಯಾಗ್‌ ಕೂಡ ಪಡೆದಿವೆ. ಇಂದು ರೈತರು ಪ್ರಮಾಣದ ಜತೆ ಗುಣವರ್ಧನೆಯ ಕಡೆಗೂ ಗಮನಹರಿಸುತ್ತಿದ್ದಾರೆ’ ಎಂದು ಹೇಳಿದರು.

ಉಳಿದಂತೆ ಒಂದೇ ಹೊಲದಲ್ಲಿ 570 ವಿಧದ ಅಕ್ಕಿಗಳನ್ನು ಬೆಳೆಯುತ್ತಿರುವ ಕೇರಳದ ತ್ರಿಶೂರು ಗ್ರಾಮ ಹಾಗೂ ತಂತ್ರಜ್ಞಾನದ ಅಳವಡಿಕೆಯಿಂದ ಭೂಮಿಯ ಉತ್ತಮ ಬಳಕೆ ಮತ್ತು ಕಡಿಮೆ ನೀರನ್ನು ಬಳಸುವ ತಂತ್ರಗಳ ಮೂಲಕ ಹೆಚ್ಚಿನ ಆದಾಯ ಗಳಿಸಿದ ಒಡಿಶಾದ ಕೃಷಿಕ ಹಿರೋದ್‌ ಪಟೇಲ್‌ರನ್ನು ಶ್ಲಾಘಿಸಿದರು.