ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳ ಸಮ್ಮುಖದಲ್ಲೇ 'ಸ್ವಾಮೀಜಿ ದಾರಿ ತಪ್ಪುತ್ತಿದ್ದಾರೆ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಬೇಸರ

ಶ್ರೀರಂಗಪಟ್ಟಣ (ಮಾ.15): ‘ಇತ್ತೀಚಿನ ದಿನಗಳಲ್ಲಿ ಆದಿಚುಂಚನಗಿರಿ ಮಠದ ಸ್ವಾಮೀಜಿ ಎಲ್ಲೆಲ್ಲೋ ದಾರಿ ತಪ್ಪುತ್ತಿದ್ದಾರೆ’ ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರು ನಿರ್ಮಲಾನಂದನಾಥ ಶ್ರೀಗಳ ಸಮ್ಮುಖದಲ್ಲಿಯೇ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದಕ್ಕೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಟ್ಟಣದಲ್ಲಿ ಶನಿವಾರ ನಡೆದ ನೂತನ ಶ್ರೀ ಆದಿಚುಂಚನಗಿರಿ ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಗಣಪತಿ ದೇವಾಲಯದ ಕಟ್ಟಡ ಲೋಕಾರ್ಪಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಂಡಿಸಿದ್ದೇಗೌಡ, ನಮ್ಮ ಸ್ವಾಮೀಜಿ ಇತ್ತೀಚೆಗೆ ಎಲ್ಲೆಲ್ಲೋ ದಾರಿ ತಪ್ಪುತ್ತಿದ್ದಾರೆ. ಬಾಲಗಂಗಾಧರನಾಥ ಸ್ವಾಮೀಜಿ ಅವರು ಎಲ್ಲರನ್ನೂ ಒಗ್ಗೂಡಿಸಿ ಜೊತೆಗೆ ಕರೆದುಕೊಂಡು ಹೋಗುವಂತೆ ಒಳ್ಳೆಯ ದಾರಿ ಹಾಕಿಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ಹಾದಿ ತಪ್ಪಬಾರದು ಎಂಬ ಉದ್ದೇಶದಿಂದ ಹೀಗೆ ಹೇಳುತ್ತಿದ್ದೇನೆ. ಚುಂಚನಗಿರಿ ಮಠ ಪ್ರಪಂಚದಾದ್ಯಂತ ಹೆಸರು ಮಾಡಿದ್ದು, ಇತ್ತೀಚಿನ ದಿನದ ತಮ್ಮ ಹೆಜ್ಜೆ ಹಾಗೂ ನಡೆಗಳನ್ನು ಗಮನಿಸಿ ಬಹಳ ಬೇಸರದಿಂದ ಹೇಳುತ್ತಿದ್ದೇನೆ. ದೇಶದ ಎಲ್ಲಾ ವರ್ಗದವರಿಗೂ ಸಹಾಯ ಮಾಡಿರುವ ಕೀರ್ತಿ ನಿಮಗೆ ಸಲ್ಲಬೇಕು ಎಂದು ಸ್ವಾಮೀಜಿಗೆ ಹೇಳಿದರು.

ಕಾರ್ಯಕ್ರಮದಲ್ಲಿದ್ದ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದು, ನಮ್ಮ ಸ್ವಾಮೀಜಿ ಅವರು ತಪ್ಪು ಮಾಡಿದ್ದಾರೆ ಎಂದು ಯಾರೂ ಸಹ ಸಾರ್ವಜನಿಕವಾಗಿ ಬೆರಳು ತೋರಿಸುಂತಾಗಬಾರದು. ಬಂಡಿಸಿದ್ದೇಗೌಡರು ಸ್ವಾಮೀಜಿ ಬಗ್ಗೆ ಹಾದಿ ತಪ್ಪಿ ಹೋಗಿತ್ತೀದ್ದೀರಿ ಎಂದರೆ ಅರ್ಥವೇನು? ಎಂದು ಅಸಮಾಧಾನ ಹೊರಹಾಕಿದರು.

ಈ ಹಿಂದೆ ಸ್ವಾಮೀಜಿ ಅವರು, ನಮ್ಮ ಸಮಾಜದವರು ಸಿಎಂ ಆಗಬೇಕು ಎಂದಾಗ ನಾನು ಸಹ ‘ನಿಮ್ಮ ವ್ಯಕ್ತಿತ್ವ ಬಹಳ ಎತ್ತರಕ್ಕೆ ಬೆಳೆದಿದ್ದು, ರಾಜಕೀಯ ಹೇಳಿಕೆ ನೀಡಬಾರದು ಎಂದಿದ್ದೆ. ಆಗ ದೇವೇಗೌಡರು ನನಗೆ ಬುದ್ಧಿ ಹೇಳಿ ಸ್ವಾಮೀಜಿ ಅವರ ಬಳಿ ಕ್ಷಮೆ ಕೋರುವಂತೆ ಹೇಳಿದ್ದರು. ಸಾರ್ವಜನಿಕವಾಗಿ ನಾನು ಕ್ಷಮೆ ಕೋರಿದ್ದೇನೆ ಎಂದು ಸ್ಮರಿಸಿದರು.