ಅರಾವಳಿ ಪರ್ವತ ಶ್ರೇಣಿಯನ್ನು ಗಣಿಗಾರಿಕೆ ಮಾಫಿಯಾದಿಂದ ರಕ್ಷಿಸಲು ರಾಷ್ಟ್ರೀಯ ಯುವ ಕಾಂಗ್ರೆಸ್ 'ಅರಾವಳಿ ಸತ್ಯಾಗ್ರಹ' ಎಂಬ 1,000 ಕಿ.ಮೀ. ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಈ ಹೋರಾಟದ ಮೂಲಕ, ಅಕ್ರಮ ಗಣಿಗಾರಿಕೆ  ನಿಲ್ಲಿಸುವುದು ಮತ್ತು ಅರಾವಳಿ 'ನಿರ್ಣಾಯಕ ಪರಿಸರ ವಲಯ' ಎಂದು ಘೋಷಿಸುವಂತೆ ಒತ್ತಾಯ.

ನವದೆಹಲಿ(ಡಿ.26): ದೇಶದ ಅತ್ಯಂತ ಪುರಾತನ ಪರ್ವತ ಶ್ರೇಣಿಯಾದ ಅರಾವಳಿಯನ್ನು ಗಣಿಗಾರಿಕೆ ಮಾಫಿಯಾದಿಂದ ರಕ್ಷಿಸಲು ರಾಷ್ಟ್ರೀಯ ಯುವ ಕಾಂಗ್ರೆಸ್ ಮುಂದಾಗಿದೆ. 2026ರ ಜನವರಿ 7 ರಿಂದ 'ಅರಾವಳಿ ಸತ್ಯಾಗ್ರಹ' ಹೆಸರಿನಲ್ಲಿ ಬೃಹತ್ ಪಾದಯಾತ್ರೆ ಆರಂಭವಾಗಲಿದ್ದು, ಇದು ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದೆಹಲಿ ರಾಜ್ಯಗಳ ಮೂಲಕ ಸುಮಾರು 1,000 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ. ಜನವರಿ 20 ರವರೆಗೆ ಈ ಸತ್ಯಾಗ್ರಹ ನಡೆಯಲಿದ್ದು, ಪರಿಸರ ರಕ್ಷಣೆಯ ಕಿಚ್ಚು ಹಚ್ಚಲಿದೆ.

'ಉತ್ತರ ಭಾರತದ ರಕ್ಷಣಾ ಕವಚಕ್ಕೆ ಅಪಾಯ': ಉದಯ್ ಭಾನು ಚಿಬ್ ಕಿಡಿ

ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ಬಿಜೆಪಿ ಸರ್ಕಾರ ಮೊದಲು ದೇಶದ ಸಂಸ್ಕೃತಿಯನ್ನು ಕಲುಷಿತಗೊಳಿಸಿತು, ಈಗ ಪರಿಸರವನ್ನು ನಾಶಪಡಿಸುತ್ತಿದೆ. 1.5 ಶತಕೋಟಿ ವರ್ಷಗಳ ಇತಿಹಾಸವಿರುವ ಅರಾವಳಿ ಬೆಟ್ಟಗಳು ಕೇವಲ ಕಲ್ಲುಗಳಲ್ಲ, ಅವು ಉತ್ತರ ಭಾರತಕ್ಕೆ ಪ್ರಕೃತಿ ನೀಡಿದ ರಕ್ಷಣಾತ್ಮಕ ಗುರಾಣಿ. ಇದನ್ನು ನಾಶಪಡಿಸುವುದು ಎಂದರೆ ಮುಂದಿನ ಪೀಳಿಗೆಯ ಭವಿಷ್ಯವನ್ನು ಬಲಿ ನೀಡಿದಂತೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಣಿಗಾರಿಕೆ ಮಾಫಿಯಾಗೆ ಸರ್ಕಾರದ ಸಾಥ್?

100 ಮೀಟರ್‌ಗಿಂತ ಕಡಿಮೆ ಎತ್ತರವಿರುವ ಬೆಟ್ಟಗಳನ್ನು ಅರಾವಳಿ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರಸ್ತಾವನೆ ಸಲ್ಲಿಸಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಇದು ಕೇವಲ ದೊಡ್ಡ ಪ್ರಮಾಣದ ಗಣಿಗಾರಿಕೆಗೆ ದಾರಿ ಮಾಡಿಕೊಡುವ ತಂತ್ರವಾಗಿದೆ ಎಂದು ಆರೋಪಿಸಿದೆ. ಅಲ್ಲದೆ, ರಾಜಸ್ಥಾನ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ 50 ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡಿರುವುದು ಮತ್ತು 2010 ರಿಂದ ಸ್ಥಗಿತಗೊಂಡಿದ್ದ ಗಣಿಗಾರಿಕೆಯನ್ನು ಮತ್ತೆ ಆರಂಭಿಸಿರುವುದು ಅಕ್ರಮದ ಪರಮಾವಧಿ ಎಂದು ಟೀಕಿಸಲಾಗಿದೆ.

ಯುವ ಕಾಂಗ್ರೆಸ್ ಮುಂದಿಟ್ಟಿರುವ ಮೂರು ಪ್ರಮುಖ ಬೇಡಿಕೆಗಳೇನು?

ಪರಿಸರ ನಾಶವನ್ನು ತಡೆಯಲು ಯುವ ಕಾಂಗ್ರೆಸ್ ಸರ್ಕಾರಕ್ಕೆ ಮೂರು ಪ್ರಮುಖ ಷರತ್ತುಗಳನ್ನು ವಿಧಿಸಿದೆ:

  •  ಬೆಟ್ಟಗಳ ಎತ್ತರಕ್ಕೆ ಸಂಬಂಧಿಸಿದ 100 ಮೀಟರ್ ನಿಯಮವನ್ನು ತಕ್ಷಣವೇ ರದ್ದುಗೊಳಿಸಬೇಕು.
  •  ಇಡೀ ಅರಾವಳಿ ಪ್ರದೇಶವನ್ನು 'ನಿರ್ಣಾಯಕ ಪರಿಸರ ವಲಯ' (Critical Ecological Zone) ಎಂದು ಘೋಷಿಸಬೇಕು.
  •  ಅಕ್ರಮ ಮತ್ತು ಅನಿಯಂತ್ರಿತವಾಗಿ ನಡೆಯುತ್ತಿರುವ ಎಲ್ಲಾ ಗಣಿಗಾರಿಕೆ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು.
  • ಹೈಬ್ರಿಡ್ ಮಾದರಿ ಸತ್ಯಾಗ್ರಹ: ಜನಸಾಮಾನ್ಯರ ಭಾಗಿತ್ವಕ್ಕೆ ಕರೆ

ಈ ಸತ್ಯಾಗ್ರಹ ಯಾತ್ರೆಯಲ್ಲಿ ಕೇವಲ ರಾಜಕೀಯ ಮುಖಂಡರಲ್ಲದೆ, ಪರಿಸರವಾದಿಗಳು ಮತ್ತು ನಾಗರಿಕರು ಭಾಗವಹಿಸಲಿದ್ದಾರೆ. ವಿಶೇಷವೆಂದರೆ, ದೇಶದ ಎಲ್ಲಾ ಭಾಗಗಳ ಜನರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವಂತೆ ಇದನ್ನು 'ಹೈಬ್ರಿಡ್' ಮಾದರಿಯಲ್ಲಿ ನಡೆಸಲಾಗುತ್ತಿದೆ. ನಿಕೋಬಾರ್, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ಕಾಡುಗಳ ಸಂರಕ್ಷಣೆಯ ವಿಚಾರವನ್ನೂ ಈ ಹೋರಾಟದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಯುವ ಕಾಂಗ್ರೆಸ್ ತಿಳಿಸಿದೆ.