ವಕ್ಫ್ (ತಿದ್ದುಪಡಿ) ಕಾಯ್ದೆಗೆ ಸಂಪೂರ್ಣ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿ, ಕೆಲವು ಸೆಕ್ಷನ್ಗಳಿಗೆ ಮಾತ್ರ ತಡೆ ವಿಧಿಸಿದೆ. ವಕ್ಫ್ ಆಸ್ತಿಗಳ ಸ್ವರೂಪ ಬದಲಾವಣೆ ಮತ್ತು ಹೊಸ ನೇಮಕಾತಿಗಳನ್ನು ನಿಷೇಧಿಸಿದೆ. ಕೇಂದ್ರ, ವಕ್ಫ್ ಬೋರ್ಡ್ ಮತ್ತು ಅರ್ಜಿದಾರರಿಗೆ ಏಳು ದಿನಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿ, ಮೇ 5ಕ್ಕೆ ವಿಚಾರಣೆ ಮುಂದೂಡಿದೆ. ಐದು ಪ್ರತಿನಿಧಿ ಅರ್ಜಿದಾರರನ್ನು ಆಯ್ಕೆ ಮಾಡಲು ಸೂಚಿಸಿದೆ.
2025 ರ ವಕ್ಫ್ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವದ ವಿರುದ್ಧದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಕ್ಫ್ (ತಿದ್ದುಪಡಿ) ಕಾಯ್ದೆ 2025ಕ್ಕೆ ಸಂಪೂರ್ಣ ತಡೆ ನೀಡಲು ನಿರಾಕರಿಸಿದೆ. ವಕ್ಫ್ ಬೋರ್ಡ್ ಗಳು, ಕೇಂದ್ರ ಸರ್ಕಾರ ಹಾಗು ಅರ್ಜಿದಾರರಿಗೆ ಪ್ರತಿಕ್ರಿಯೆ ಗಳನ್ನು ಏಳು ದಿನಗಳಲ್ಲಿ ತಿಳಿಸುವಂತೆ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಮೇ 5, ಮಧ್ಯಾಹ್ನ 2 ಗಂಟೆಗೆ ನಿಗದಿಪಡಿಸಿದೆ.
ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ , ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಪೂರ್ಣ ತಡೆ ನೀಡಲು ನಕಾರ ಮಾಡಿದ್ದು, ಕೆಲವು ಸೆಕ್ಷನ್ ಗಳಿಗೆ ಮಾತ್ರ ತಡೆ ನೀಡಿ ಕೇಂದ್ರ ಸರ್ಕಾರ, ಅರ್ಜಿದಾರರು, ವಕ್ಫ್ ಬೋರ್ಡ್ ಗೆ ಏಳು ದಿನಗಳಲ್ಲಿ ಅಭಿಪ್ರಾಯ ತಿಳಿಸಲು ಸೂಚನೆ ನೀಡಿದೆ. ವಕ್ಫ್ ಆಸ್ತಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಅಥವಾ ಸ್ವರೂಪ ಬದಲಾವಣೆ ಮಾಡುವಂತಿಲ್ಲ ಮತ್ತು ವಕ್ಫ್ ಬೋರ್ಡ್ ಹೊಸ ನೇಮಕಾತಿ ಮಾಡುವಂತಿಲ್ಲ ಎಂದು ಸುಪ್ರೀಂ ಕಟ್ಟುನಿಟ್ಟಿನ ಆದೇಶ ಪ್ರಕಟಿಸಿದೆ.
ಹಿಂದೂ ಧಾರ್ಮಿಕ ಟ್ರಸ್ಟ್ಗಳಲ್ಲಿ ಮುಸ್ಲಿಂಗೂ ಅವಕಾಶ ಮಾಡಿಕೊಡುತ್ತೀರಾ? : ಸುಪ್ರೀಂ ಪ್ರಶ್ನೆ!
ಮುಂದಿನ ವಿಚಾರಣೆಯಲ್ಲಿ ಐದು ಅರ್ಜಿದಾರರ ವಾದ ಆಲಿಸಲಿದ್ದೇವೆ. ಐದು ಅರ್ಜಿದಾರರು ಯಾರು ನೀವೆ ಆಯ್ಕೆ ಮಾಡಿ ಎಂದ ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಆಯ್ಕೆಯನ್ನು ಬಿಟ್ಟಿದೆ. ಇನ್ನು ಇದೇ ವೇಳೆ ಮುಂದಿನ ವಿಚಾರಣೆಯವರೆಗೆ 'ವಕ್ಫ್ ಬೈ ಡೀಡ್' ಮತ್ತು 'ಬಳಕೆದಾರರಿಂದ ವಕ್ಫ್' ಅನ್ನು ಡಿನೋಟಿಫೈ ಮಾಡುವುದಿಲ್ಲ ಎಂದು ಕೇಂದ್ರವು ಸುಪ್ರೀಂಗೆ ಭರವಸೆ ನೀಡಿದೆ.
ಸರ್ಕಾರ ಜನರಿಗೆ ಉತ್ತರಿಸಬೇಕು. ಸರ್ಕಾರವು ಲಕ್ಷಕ್ಕೂ ಹೆಚ್ಚು ಪ್ರಾತಿನಿಧ್ಯವನ್ನು ಪಡೆಯಿತು, ಒಂದರ ನಂತರ ಒಂದರಂತೆ ಹಳ್ಳಿಗಳನ್ನು ವಕ್ಫ್ ಆಗಿ ತೆಗೆದುಕೊಳ್ಳಲಾಗುತ್ತಿದೆ. ಎಷ್ಟೋ ಭೂಮಿಯನ್ನು ವಕ್ಫ್ ಎಂದು ಹೇಳಿಕೊಳ್ಳಲಾಗುತ್ತಿದೆ. ಇದನ್ನು ಕಾನೂನಿನ ಒಂದು ಭಾಗವೆಂದು ಪರಿಗಣಿಸಲಾಗುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ತಿಳಿಸಿದ್ದಾರೆ.
ವಕ್ಫ್ ಮಸೂದೆ ಬಗ್ಗೆ ಪಾಕಿಸ್ತಾನ ತಕರಾರು: ಭಾರತದ ತೀವ್ರ ತಿರುಗೇಟು
ಇದರ ಜೊತೆಗೆ ವಕ್ಫ್ ಕಾಯ್ದೆಯ ಸೆಕ್ಷನ್ 9 ಮತ್ತು 14 ರ ಅಡಿಯಲ್ಲಿ ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳಿಗೆ ಯಾವುದೇ ನೇಮಕಾತಿಗಳನ್ನು ಮಾಡಲಾಗುವುದಿಲ್ಲ ಎಂದು ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಭರವಸೆ ನೀಡಿದರು. ಹಾಗೆಯೇ ಮುಂದಿನ ವಿಚಾರಣೆಯ ದಿನದವರೆಗೆ, ಯಾವುದೇ ವಕ್ಫ್ ಆಸ್ತಿಯನ್ನು - ಅಧಿಸೂಚನೆಯ ಮೂಲಕ ವಕ್ಫ್ ಎಂದು ನೋಂದಾಯಿಸಿದ ಅಥವಾ ಘೋಷಿಸಿದ ಆಸ್ತಿಗಳನ್ನು ಒಳಗೊಂಡಂತೆ - ಡಿ-ನೋಟಿಫೈ ಮಾಡಲಾಗುವುದಿಲ್ಲ ಎಂದು ಹೇಳಿದರು ಇದನ್ನು ಘನ ನ್ಯಾಯಾಲಯವು ದಾಖಲೆಯಾಗಿ ತೆಗೆದುಕೊಂಡಿತು.
ಇನ್ನು ಬುಧವಾರ ಮುಸ್ಲಿಮರನ್ನು ಹಿಂದೂ ಧಾರ್ಮಿಕ ಟ್ರಸ್ಟ್ಗಳ ಭಾಗವಾಗಲು ಅನುಮತಿಸಲಾಗುತ್ತದೆಯೇ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿತ್ತು. ಜೊತೆಗೆ ಕಾನೂನು ಜಾರಿಗೆ ಬಂದ ನಂತರದ ಸಂಭಾವ್ಯ ಹಿಂಸಾಚಾರದ ಬಗ್ಗೆಯೂ ಸುಪ್ರೀಂ ಕಳವಳ ವ್ಯಕ್ತಪಡಿಸಿತ್ತು ಮತ್ತು ಈ ರೀತಿಯ ಸೂಕ್ಷ್ಮ ವಿಷಯಗಳನ್ನು ಕೈಗೆತ್ತಿಕೊಂಡಾಗ ತೊಂದರೆಯಾಗುತ್ತದೆ ಎಂದು ಹೇಳಿತ್ತು.
ಈ ಮಸೂದೆಯನ್ನು ಏಪ್ರಿಲ್ 3, 2025 ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು , 288 ಸದಸ್ಯರು ಇದಕ್ಕೆ ಬೆಂಬಲ ಸೂಚಿಸಿದ್ದರು. ಮತ್ತು 232 ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಮತ ಚಲಾಯಿಸಿದರು. ಹಾಗೂ ಏಪ್ರಿಲ್ 4, 2025 ರಂದು ರಾಜ್ಯಸಭೆಯಲ್ಲಿ 128 ಸದಸ್ಯರು ಪರವಾಗಿ ಮತ್ತು 95 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು.
