ಎನ್ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ ಧನಕರ್ಗೆ ಬೆಂಬಲ ಸೂಚಿಸಿದ ಮಾಯಾವತಿ!
ಉಪರಾಷ್ಟ್ರಪತಿ ಚುನಾವಣೆಗೆ ಕೆಲ ದಿನಗಳು ಮಾತ್ರ ಬಾಕಿ. ಎನ್ಡಿಎ ಅಭ್ಯರ್ಥಿ ಜಗದೀಪ್ ದನಕರ್ಗೆ ಬೆಂಬಲ ಹೆಚ್ಚಾಗುತ್ತಿದೆ. ಇದೀಗ ಬಿಎಸ್ಪಿ ನಾಯಕಿ ಮಾಯಾವತಿ ಧನಕರ್ಗೆ ಬೆಂಬಲ ಸೂಚಿಸಿದ್ದಾರೆ. ಈ ಬಾರಿಯ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಧನಕರ್ ಹಾಗೂ ಪ್ರತಿಸ್ಪರ್ಧಿ ಮಾರ್ಗರೆಟ್ ಆಳ್ವಾಗೆ ಬೆಂಬಲ ಹೇಗಿದೆ?
ನವದೆಹಲಿ(ಆ.03): ದೇಶಲ್ಲೀಗ ಉಪ ರಾಷ್ಟ್ರಪತಿ ಚುನಾವಣೆ ಕಾವು ಹೆಚ್ಚಾಗಿದೆ. ಆಗಸ್ಟ್ 6 ರಂದು ಮುಂದಿನ ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಕಣದಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನಕರ್ ಹಾಗೂ ವಿಪಕ್ಷಗಳ ಅಭ್ಯರ್ಥಿ ಮಾರ್ಗೆರೆಟ್ ಆಳ್ವ ಕಣದಲ್ಲಿದ್ದಾರೆ. ಚುನಾವಣೆಗೆ ಇನ್ನು ಕೆಲ ದಿನಗಳು ಬಾಕಿ ಇರುವಾಗ ಬಹುಜನ್ ಸಮಾಜವಾದಿ ಪಾರ್ಟಿ(BSP)ನಾಯಕಿ ಮಾಯಾವತಿ ಬೆಂಬಲ ಯಾರಿಗೆ ಅನ್ನೋದನ್ನು ಘೋಷಿಸಿದ್ದಾರೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಜಗದೀಪ್ ಧನಕರ್ಗೆ ಬೆಂಬಲ ಸೂಚಿಸುವುದಾಗಿ ಮಾಯಾವತಿ ಘೋಷಿಸಿದ್ದಾರೆ. ದೇಶದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಬಿಎಸ್ಪಿ ಎನ್ಡಿಎ ಅಭ್ಯರ್ಥಿಗೆ ಬೆಂಬಲ ಸೂಚಿಸುತ್ತಿದೆ ಎಂದು ಮಾಯಾಮತಿ ಹೇಳಿದ್ದಾರೆ. ಎನ್ಡಿಎ ಅಭ್ಯರ್ಥಿಯನ್ನು ಗಮನದಲ್ಲಿಟ್ಟುಕೊಂಡು ಬೆಂಬಲ ಸೂಚಿಸುತ್ತಿದ್ದೇವೆ. ಇಲ್ಲಿ ಎನ್ಡಿಎ ಅಥವಾ ಬಿಜೆಪಿ ಬೆಂಬಲ ನೀಡುತ್ತಿಲ್ಲ ಎಂದು ಮಾಯಾವತಿ ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಮಾಯಾವತಿ ದ್ರೌಪದಿ ಮುರ್ಮುಗೆ ಬೆಂಬಲ ನೀಡಿದ್ದರು.
ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಅಭ್ಯರ್ಥಿ ಮಾರ್ಗರೆಟ್ ಆಳ್ವಾಗೆ ಬೆಂಬಲ ಕಡಿಮೆಯಾಗುತ್ತಿದೆ. ಉಪ ರಾಷ್ಟ್ರಪತಿ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಹಗ್ಗ ಜಗ್ಗಾಟ ನಡೆಯುತ್ತಿದೆ. ಮಮತಾ ಬ್ಯಾನರ್ಜಿ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಹೀಗಾಗಿ ಟಿಎಂಸಿ ಬೆಂಬಲ ಯಾರಿಗೆ ಅನ್ನೋದು ಇನ್ನೂ ಗೊಂದಲದಲ್ಲಿದೆ. ವಿಪಕ್ಷಗಳಲ್ಲಿ ಒಗ್ಗಟ್ಟಿನ ಪರಿಸ್ಥಿತಿ ಇಲ್ಲದ ಕಾರಣ ಎನ್ಡಿಎ ಅಭ್ಯರ್ಥಿಗೆ ವರವಾಗಲಿದೆ.
ಉಪ ರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್ ಆಳ್ವಾಗೆ ಸೈಬರ್ ವಂಚನೆ!?
ಉಪರಾಷ್ಟ್ರಪತಿ ಚುನಾವಣೆಯ ಮತದಾನದಿಂದ ದೂರ ಉಳಿಯುವುದಾಗಿ ಪ್ರಕಟಿಸಿದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ನಿರ್ಧಾರವನ್ನು, ವಿಪಕ್ಷಗಳ ಜಂಟಿ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್ ಆಳ್ವ ಕಟುವಾಗಿ ಟೀಕಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಆಳ್ವ , ‘ಉಪ ರಾಷ್ಟ್ರಪತಿ ಚುನಾವಣೆಯಿಂದ ದೂರ ಉಳಿಯುವ ಟಿಎಂಸಿ ನಿರ್ಧಾರ ಬೇಸರ ತರಿಸುವಂಥದ್ದು. ಇದು ಪ್ರತೀಕಾರ, ಅಹಂಕಾರ ಅಥವಾ ಸಿಟ್ಟಿನ ಸಮಯವಲ್ಲ. ಬದಲಾಗಿದೆ ಧೈರ್ಯ, ನಾಯಕತ್ವ ಮತ್ತು ಐಕ್ಯತೆಯನ್ನು ತೋರಿಸುವ ಸಮಯ. ಹೀಗಾಗಿ ಧೈರ್ಯಕ್ಕೆ ಉದಾಹರಣೆಯಂತಿರುವ ಮಮತಾ ಅವರು ವಿಪಕ್ಷಗಳ ಜೊತೆಗೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.
ಪ್ರಧಾನಿ, ರಾಷ್ಟ್ರಪತಿ, ಪ್ರಮುಖ ಹುದ್ದೆಗಳಲ್ಲಿ ಉತ್ತರ ಭಾರತದವರೇ ಇದ್ದಾರೆ. ದಕ್ಷಿಣ ಭಾರತದ ಧ್ವನಿಯಾಗಲು ಉಪರಾಷ್ಟ್ರಪತಿ ಹುದ್ದೆಗೆ ನಾನು ಸ್ಪರ್ಧಿಸಿದ್ದೇನೆ ಎಂದು ಉಪರಾಷ್ಟ್ರಪತಿ ಅಭ್ಯರ್ಥಿ, ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಹೇಳಿದ್ದರು. ಈ ಮೂಲಕ ದಕ್ಷಿಣ ಭಾರತದ ಪಕ್ಷಗಳ ಬೆಂಬಲ ಪಡೆಯಲು ಆಳ್ವ ಪರೋಕ್ಷ ದಾಳ ಉರುಳಿಸಿದ್ದಾರೆ.
ಅಭ್ಯರ್ಥಿ ಯಾರು? ಬಿಜೆಪಿ ಅಣಕಿಸಿದ ಕಾಂಗ್ರೆಸ್ಗೆ ಸಂಕಷ್ಟ ತಂದಿಟ್ಟ ಜೈರಾಮ್ ರಮೇಶ್!
ದಕ್ಷಿಣ ಸಂಸದರ ಜತೆ ಧನಕರ್ ಭೇಟಿ
ಆ.6ರಂದು ನಡೆಯಲಿರುವ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಜಗದೀಪ್ ಧನಕರ್ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನವದೆಹಲಿಯ ನಿವಾಸದಲ್ಲಿ ದಕ್ಷಿಣ ರಾಜ್ಯಗಳ ಸಂಸದರನ್ನು ಭೇಟಿ ಮಾಡಿದರು. ಸಭೆಯಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ ಚಂದ್ರಶೇಖರ್ ಅವರು ಧನಕರ್ ಅವರನ್ನು ಅಭಿನಂದಿಸಿದರು.