ಹಲವು ರೋಗಿಗಳಿಗೆ ಒಂದೇ ಇಂಜೆಕ್ಷನ್‌ ಬಳಸಿದ ಕಾರಣಕ್ಕೆ ಉತ್ತರ ಪ್ರದೇಶದ ಇಟಾಹ್‌ದಲ್ಲಿ ಬಾಲಕಿಯೊಬ್ಬಳಿಗೆ ಎಚ್‌ಐವಿ ಸೋಂಕು ತಗಲಿದೆ. ವೈದ್ಯಕೀಯ ಕಾಲೇಜಿನ ವೈದ್ಯರ ವಿರುದ್ಧ ಈ ಕುರಿತಾಗಿ ತನಿಖೆಗೆ ಆದೇಶಿಸಲಾಗಿದೆ. 

ನವದೆಹಲಿ (ಮಾ.5): ವೈದ್ಯರ ಬೇಜವಾಬ್ದಾರಿಯಿಂದಾಗಿ ಬಾಳಿ ಬದುಕಬೇಕಾದ ಪುಟ್ಟ ಬಾಲಕಿಗೆ ಎಚ್‌ಐವಿ ಸೋಂಕು ತಗುಲಿದೆ. ಈ ಘಟನೆ ಉತ್ತರ ಪ್ರದೇಶದ ಇಟಾಹ್‌ ನಗರದಲ್ಲಿ ನಡೆದಿದೆ. ಅಲ್ಲಿನ ವೈದ್ಯಕೀಯ ಆಸ್ಪತ್ರೆಯ ವೈದ್ಯರು ಒಂದೇ ಸೂಜಿಯಿಂದ ಹಲವು ರೋಗಿಗಳಿಗೆ ಇಂಜೆಕ್ಷನ್‌ ಕೊಟ್ಟ ಪರಿಣಾಮ ಬಾಲಕಿಗೆ ಎಚ್‌ಐವಿ ಪಾಸಿಟಿವ್‌ ಸೋಂಕು ತಗುಲಿದೆ. ಈ ಕುರಿತಂತೆ ರಾಣಿ ಆವಂತಿ ಬಾಯಿ ಲೋಧಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಮುಖ್ಯಸ್ಥರಿಂದ ವರದಿಯನ್ನು ಕೇಳಲಾಗಿದೆ ಎಂದು ಉತ್ತರಪ್ರದೇಶದ ಉಪಮುಖ್ಯಮಂತ್ರಿ ಬ್ರಿಜೇಶ್‌ ಪಾಠಕ್‌ ಶನಿವಾರ ತಿಳಿಸಿದ್ದಾರೆ. ಮಗುವಿಗೆ ಎಚ್‌ಐವಿ ಪಾಸಿಟಿವ್‌ ಆಗಿದೆ ಎಂದು ವರದಿಯಾದ ಬಳಿಕ ಈ ತನಿಖೆಗೆ ಆದೇಶಿಸಲಾಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಾಠಕ್‌ ತಿಳಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಂಕಿತ್‌ ಕುಮಾರ್‌ ಅಗರವಾಲ್‌ ಅವರಿಗೆ ಈ ಕುರಿತಾಗಿ ಬಾಲಕಿಯ ಪೋಷಕರು ದೂರು ಸಲ್ಲಿಸಿದ್ದಾರೆ. ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲು ಮಾಡಿದ್ದ ವೇಳೆ ಒಂದೇ ಸಿರಿಂಜ್‌ನಿಂದ ಹಲವಾರು ರೋಗಿಗಳಿಗೆ ವೈದ್ಯರು ಇಂಜೆಕ್ಷನ್‌ ನೀಡಿದ್ದಾರೆ. ಈ ವೇಳೆ ತಮ್ಮ ಪುತ್ರಿಗೂ ಇಂಜೆಕ್ಷನ್‌ ನೀಡಿದ್ದಾರೆ ಎಂದು ದೂರು ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಎಲೆಕ್ಟ್ರಿಕ್‌ ವಾಹನ ಖರೀದಿದಾರರಿಗೆ ತೆರಿಗೆ, ನೋಂದಣಿ ಶುಲ್ಕ ವಿನಾಯಿತಿ ನೀಡಿದ ಯೋಗಿ ಆದಿತ್ಯನಾಥ್ ಸರ್ಕಾರ

ಫೆಬ್ರವರಿ 20 ರಂದು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ, ಮಗುವಿಗೆ ಎಚ್‌ಐವಿ ಪಾಸಿಟಿವ್‌ ಎಂದು ಪತ್ತೆಯಾದಾಗ ಆರೋಗ್ಯ ಕಾರ್ಯಕರ್ತರು ರಾತ್ರೋರಾತ್ರಿ ಆಸ್ಪತ್ರೆಯಿಂದ ಬಲವಂತವಾಗಿ ಹೊರಹಾಕಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಈ ಘಟನೆಯ ಬಗ್ಗೆ ನನಗೆ ಮಾಹಿತಿ ಲಭಿಸಿದೆ, ಜಿಲ್ಲಾ ಮ್ಯಾಜಿಸ್ಟ್ರೇಟ್‌ ಈ ಬಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಇಟಾಹ್‌ ಸಿಎಂ ಉಮೇಶ್‌ ಕುಮಾರ್‌ ತ್ರಿಪಾಠಿ ಹೇಳಿದ್ದಾರೆ. ಸೂಕ್ತ ತನಿಖೆಯ ನಂತರ ಅದರ ವರದಿಗಳನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಲಿದ್ದೇವೆ ಎಂದು ಹೇಳಿದರು.

ತಮಿಳ್ನಾಡಲ್ಲಿ ಬಿಹಾರಿಗಳ ಕೊಲೆ ವದಂತಿ: ಉ.ಪ್ರ. ಬಿಜೆಪಿ ಮುಖಂಡ, ಇಬ್ಬರು ಪತ್ರಕರ್ತರ ವಿರುದ್ಧ ಕೇಸ್‌

'ಇಟಾಹ್‌ನ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರು ಒಂದೇ ಸಿರಿಂಜ್‌ನಿಂದ ಹಲವಾರು ರೋಗಿಗಳಿಗೆ ಚುಚ್ಚುಮದ್ದು ನೀಡಿ ಮಗುವಿನ ಪರೀಕ್ಷೆಯ ವರದಿಯಲ್ಲಿ ಎಚ್‌ಐವಿ ಪಾಸಿಟಿವ್ ಬಂದಿದೆ. ಘಟನೆ ಬಗ್ಗೆ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಂದ ವಿವರಣೆ ಕೇಳಲಾಗಿದೆ. ಯಾವುದೇ ವೈದ್ಯರು ತಪ್ಪಿತಸ್ಥರು ಎಂದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಟ್ವೀಟ್‌ ಮಾಡಿದ್ದಾರೆ.