ಸಂಸದರು, ಶಾಸಕರ ಬೆಂಬಲವಿದೆ, ಗೆಲುವು ಖಚಿತ ಎಂದ ರೈತ ರಾಷ್ಟ್ರಪತಿ ಚುನಾವಣೆ ಕಣದಲ್ಲಿ ಒಟ್ಟು 56 ಅಭ್ಯರ್ಥಿಗಳಿಂದ ನಾಮಪತ್ರ ದ್ರೌಪದಿ ಮುರ್ಮು,ಯಶವಂತ್ ಸಿನ್ಹ ಸೇರಿದಂತೆ 56 ಅಭ್ಯರ್ಥಿಗಳ ಸ್ಪರ್ಧೆ
ನವದೆಹಲಿ(ಜೂ.28): ರಾಷ್ಟ್ರಪತಿ ಚುನಾವಣಾ ಕಣ ರಂಗೇರಿದೆ. ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವು ಬಹುತೇಕ ಖಚಿತವಾಗಿದ್ದರೂ, ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹ ತಮ್ಮ ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ರೈತ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲ ತನಗೆ ಹಲವು ಸಂಸದರು, ಶಾಸಕರು, ಸಚಿವರ ಬೆಂಬಲವಿದೆ. ಹೀಗಾಗಿ ತನ್ನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿ ಚುನಾವಣಾ ಕಣದಲ್ಲಿ ಇದೀಗ ಕೇಳಿ ಬರುತ್ತಿರುವ ಹೊಸ ಹೆಸರು ರೈತ ವಿನೋದ್ ಕುಮಾರ್ ಯಾದವ್. 10ನೇ ತರಗತಿವರೆಗೆ ಓದಿರುವ ವಿನೋದ್ ಕುಮಾರ್ ರೈತನಾಗಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿರುವ ರೈತ, ತಾನು 10 ರಾಜ್ಯಗಳ ನಾಯಕರು ಹಾಗೂ ಪಕ್ಷಗಳ ಜೊತೆ ಮಾತುಕತೆ ನಡೆಸಿದ್ದೇನೆ. ಎಲ್ಲರೂ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ತನ್ನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇವೇಗೌಡರ ಬೆಂಬಲ ಕೇಳಿದ ದ್ರೌಪದಿ ಮುರ್ಮು
2005-06 ರಿಂದ ತಾನು ಸಕ್ರೀಯ ರಾಜಕಾರಣದಲ್ಲಿದ್ದೇನೆ. ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಇಷ್ಟೇ ಅಲ್ಲ ತಾನೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪಕ್ಕದ ಗ್ರಾಮದವನು. ಹೀಗಾಗಿ ನನ್ನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ತಾನು ಗೆದ್ದ ಬಳಿತ ತನ್ನ ಕಲಾನಿ ಗ್ರಾಮವನ್ನು ವಿಶ್ವವಿಖ್ಯಾತ ಮಾಡುತ್ತೇನೆ ಎಂದಿದ್ದಾರೆ.
ರೈತ ಮಾತ್ರವಲ್ಲ, ಲಿಮ್ಕಾ ಬುಕ್ನಲ್ಲಿ ದಾಖಲೆ ಬರೆದಿರುವ ಕೆ ಪದ್ಮರಾಜನ್ ಕೂಡ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಗ್ರಾಮ ಪಂಚಾಯಿತ್ನಿಂದ ಹಿಡಿದು ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಕೆ ಪದ್ಮರಾಜನ್ ಇದುವರೆಗೂ ಯಾವುದೇ ಚುನಾವಣೆಯಲ್ಲಿ ಗೆದ್ದ ಇತಿಹಾಸವಿಲ್ಲ.
ಮತ್ತೊರ್ವ ನಾಗರೀಕರ ರಾಮ್ ಕುಮಾರ್ ಶುಕ್ಲಾ ಕೂಡ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಸಾಮಾನ್ಯ ನಾಗರೀಕನಾಗಿರುವ ತನಗೆ ದೇಶದ ಬಹುತೇಕ ವರ್ಗದ ಜನರ ನಾಡಿಮಿಡಿತದ ಅರಿವಿದೆ. ಹೀಗಾಗಿ ತಾನು ಮುಂದಿನ ರಾಷ್ಟ್ರಪತಿಯಾಗಲು ಸೂಕ್ತ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ವಿಪಕ್ಷ ಅಭ್ಯರ್ಥಿ ಯಶವಂತ್ ಸಿನ್ಹ ನಾಮಪತ್ರ, ಟಿಆರ್ಎಸ್ ಬೆಂಬಲ!
ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಹಾಗೂ ಸೇನಾ ಶ್ರೇಯೋಭಿವೃದ್ಧಿ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅಶೋಕ್ ಕುಮಾರ್ ದಿಂಗ್ರಾ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೋಫೆಸರ್ ದಶಾ ಶಂಕರ್ ಅಗರ್ವಾಲ್ ಕೂಡ ನಾಮಪತ್ರ ಸಲ್ಲಿಸಿದಜ್ದಾರೆ.
ದ್ರೌಪದಿ ಮುರ್ಮು , ಯಶವಂತ್ ಸಿನ್ಹ ಸೇರಿದಂತೆ ಇದುವರೆಗೆ ಒಟ್ಟು 56 ಮಂದಿ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಜೂನ್ 29ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಜುಲೈ 2ರ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಇನ್ನು ಜುಲೈ 21ಕ್ಕೆ ಎತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟಗೊಳ್ಳಲಿದೆ.
2022ರ ರಾಷ್ಟ್ರಪತಿ ಚುನಾವಣೆಯಲ್ಲಿ ಇದುವರೆಗೆ 56 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರೆ, 2017ರ ಚುನಾವಣೆಗೆ 106 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ರಾಷ್ಟ್ರಪತಿ ನಾಮಪತ್ರವನ್ನು ಆಯೋಗ ಪರಿಶೀಲಿಸಲಿದೆ. ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಇರುವ ಮಾನದಂಡಗಳಲ್ಲಿ ಪಾಸ್ ಆದ ಅಭ್ಯರ್ಥಿಗೆ ಮಾತ್ರ ಸ್ಪರ್ಧಿಸಲು ಅವಕಾಶವಿರುತ್ತದೆ. ನಾಮಪತ್ರ ಸಲ್ಲಿಕೆ ವೇಳೆ ಠೇವಣಿ ಮೊತ್ತವಾಗಿ 15,000 ರೂಪಾಯಿ ಪಾವತಿಸಬೇಕು. ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡರೆ ಹಣ ವಾಪಸ್ ಪಡೆಯಲು ಸಾಧ್ಯವಿದೆ. ಆದರೆ ಕನಿಷ್ಠ ಮತಗಳು ಸಿಗದೇ ಹೋದರೆ ಠೇವಣಿ ಮುಟ್ಟುಗೋಲಾಗಲಿದೆ.
