ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್, ಸಂಸ್ಕೃತವನ್ನು 'ಸತ್ತ ಭಾಷೆ' ಎಂದು ಕರೆದು, ಭಾಷಾ ಅನುದಾನದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಸಂಸ್ಕೃತಕ್ಕೆ ₹2,400 ಕೋಟಿ ನೀಡಲಾಗಿದ್ದು, ತಮಿಳಿಗೆ ಕೇವಲ ₹150 ಕೋಟಿ ನೀಡಲಾಗಿದೆ ಎಂದು ಆರೋಪಿಸಿದರು.
ಚೆನ್ನೈ: ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಸಂಸ್ಕೃತವನ್ನು “ಸತ್ತ ಭಾಷೆ” ಎಂದು ಕರೆಯಿರುವುದು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಭಾಷಾ ನೀತಿ ಮತ್ತು ಹಣಕಾಸು ಹಂಚಿಕೆಗಳಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನಡೆಸುತ್ತಿದೆ ಎಂದು ಆರೋಪಿಸಿದ ಉದಯನಿಧಿಯ ಹೇಳಿಕೆ, ರಾಜ್ಯ–ಕೇಂದ್ರ ಸರ್ಕಾರಗಳ ನಡುವೆ ಹೊಸ ಕಲಹಕ್ಕೆ ತುತ್ತಾಗಿದೆ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್,
ತಮಿಳು ಭಾಷೆಯ ಬಗ್ಗೆ ಕಾಳಜಿ ಇರುವಂತೆ ನೀವು ವರ್ತಿಸುತ್ತೀರಿ. ಆದರೆ ಮತ್ತೊಂದೆಡೆ, ನಮ್ಮ ವಿದ್ಯಾರ್ಥಿಗಳು ತಮಿಳು ಕಲಿಯಬಾರದು ಎಂದು ಹಿಂದಿ ಮತ್ತು ಸಂಸ್ಕೃತವನ್ನು ಹೇರಲು ಪ್ರಯತ್ನಿಸುತ್ತೀರಿ. ಇದು ಹೇಗೆ ನ್ಯಾಯ? ಎಂದು ಪ್ರಶ್ನಿಸಿದರು.
ತ್ರಿಭಾಷಾ ನೀತಿಯನ್ನು ಟೀಕಿಸಿದ ಅವರು, ತ್ರಿಭಾಷಾ ನೀತಿಯನ್ನು ಅಂಗೀಕರಿಸಿದರೆ ಮಾತ್ರ ತಮಿಳುನಾಡಿಗೆ ಅನುದಾನ ನೀಡುತ್ತೇವೆ ಎಂದು ಹೇಳುತ್ತೀರಿ. ಆದರೆ ತಮಿಳಿನ ಅಭಿವೃದ್ಧಿಗೆ ನೀವು ಏನು ಮಾಡಿದ್ದಾರೆ? ಎಂದು ಕಿಡಿಕಾರಿದರು.
10 ವರ್ಷಗಳಲ್ಲಿ ಸಂಸ್ಕೃತಕ್ಕೆ 2,400 ಕೋಟಿ, ತಮಿಳಿಗೆ ಕೇವಲ 150 ಕೋಟಿ: ಉದಯನಿಧಿಯ ಗಂಭೀರ ಆರೋಪ
ಕಳೆದ ದಶಕದಲ್ಲಿ ಕೇಂದ್ರ ಸರ್ಕಾರ ತಮಿಳು ಬೆಳೆಸಲು ಕೇವಲ ₹150 ಕೋಟಿ ಮಾತ್ರ ಮೀಸಲಿಟ್ಟಿದೆ. ಅದೇ ಅವಧಿಯಲ್ಲಿ “ಸತ್ತ ಭಾಷೆ” ಎಂದು ಕರೆಸಿದ ಸಂಸ್ಕೃತಕ್ಕೆ ₹2,400 ಕೋಟಿ ನೀಡಲಾಗಿದೆ ಎಂದು ಉದಯನಿಧಿ ಆಕ್ಷೇಪಿಸಿದರು. ಅವರು ಮುಂದುವರಿದು, “ಇಂತಹ ಅವಮಾನ ಹಣಕಾಸು ಹಂಚಿಕೆ ತಮಿಳು ಭಾಷಿಕರ ಮೇಲೆ ಮಾಡುವ ಅನ್ಯಾಯ. 2026 ರ ಚುನಾವಣೆಯಲ್ಲಿ ಜನರು ಈ ಅನ್ಯಾಯ ಪ್ರಶ್ನಿಸಬೇಕು” ಎಂದು ಕರೆ ನೀಡಿದರು.
ಬಿಜೆಪಿಯ ತೀವ್ರ ಪ್ರತಿಕ್ರಿಯೆ
ಉದಯನಿಧಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಹಿರಿಯ ನಾಯಕಿ ತಮಿಳಿಸೈ ಸೌಂದರರಾಜನ್, ಅವರ ಹೇಳಿಕೆಯನ್ನು ತೀವ್ರ ಖಂಡಿಸಿದರು. “ದೇಶಾದ್ಯಂತ ಪೂಜೆ, ಸಂಸ್ಕೃತಿ, ಶಾಸ್ತ್ರಗಳಲ್ಲಿ ವ್ಯಾಪಕವಾಗಿ ಬಳಸುವ ಭಾಷೆಯನ್ನು ‘ಸತ್ತ ಭಾಷೆ’ ಎಂದು ಕರೆಯುವ ಹಕ್ಕು ಯಾರಿಗೂ ಇಲ್ಲ. ಭಾಷೆ ಮತ್ತು ಸಂಸ್ಕೃತಿಯ ಕುರಿತಂತೆ ಮಾತನಾಡುವಾಗ ನಾಯಕರು ಹೆಚ್ಚು ಜವಾಬ್ದಾರಿಯುತವಾಗಿರಬೇಕು” ಎಂದು ಅವರು ಎಚ್ಚರಿಕೆ ನೀಡಿದರು. ತಮಿಳು ಭಾಷೆಯೇ ಹಲವಾರು ಸಂಸ್ಕೃತ ಪದಗಳನ್ನು ಅಳವಡಿಸಿಕೊಂಡಿದೆ ಎಂದು ಸೌಂದರರಾಜನ್ ಉಲ್ಲೇಖಿಸಿದರು. ಇದು ಭಾಷೆಯ ಮುಕ್ತತೆ ಮತ್ತು ಶಕ್ತಿಯನ್ನು ತೋರಿಸುತ್ತದೆ, ದೌರ್ಬಲ್ಯವಲ್ಲ ಎಂದು ಹೇಳಿದರು.


