ಉದಯಪುರದ ಮಾಜಿ ರಾಜಮನೆತನದ ಆಸ್ತಿ ವಿವಾದದಲ್ಲಿ, ದಿವಂಗತ ಅರವಿಂದ್ ಸಿಂಗ್ ಮೇವಾರ್ ಅವರ ಪುತ್ರಿ ಪದ್ಮಜಾ ಕುಮಾರಿ ಅವರ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಸಹೋದರ ಲಕ್ಷ್ಯರಾಜ್ ಸಿಂಗ್ ಮಂಡಿಸಿರುವ 'ವಿಲ್' ಪ್ರಕರಣ ಬಾಕಿ ಇರುವ ಕಾರಣ, ಆಡಳಿತಾತ್ಮಕ ಹಕ್ಕು ನೀಡಲು ನ್ಯಾಯಾಲಯ ನಿರಾಕರಿಸಿದೆ.

ನವದೆಹಲಿ (ಮಾ.18): ಉದಯಪುರದ ಮಾಜಿ ರಾಜಮನೆತನದ ಒಳಗೆ ನಡೆಯುತ್ತಿರುವ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಂಗಳವಾರ ಮಹತ್ವದ ವಿಚಾರಣೆ ನಡೆಸಿತು. ಸಹೋದರ ಲಕ್ಷ್ಯರಾಜ್ ಸಿಂಗ್ ಮೇವಾರ್ ಮತ್ತು ಸಹೋದರಿ ಪದ್ಮಜಾ ಕುಮಾರಿ ಪರ್ಮಾರ್ ನಡುವಿನ ಈ ಕಾನೂನು ಹೋರಾಟದಲ್ಲಿ ಪದ್ಮಜಾ ಅವರಿಗೆ ಹಿನ್ನಡೆಯಾಗಿದೆ. ತಮ್ಮ ದಿವಂಗತ ತಂದೆ ಅರವಿಂದ್ ಸಿಂಗ್ ಮೇವಾರ್ ಅವರು ಯಾವುದೇ 'ವಿಲ್' ಬರೆಯದೆ ನಿಧನರಾಗಿದ್ದಾರೆ, ಆದ್ದರಿಂದ ಆಸ್ತಿಯ ಮೇಲೆ ತಮಗೆ ಆಡಳಿತಾತ್ಮಕ ಹಕ್ಕು (Letters of Administration) ನೀಡಬೇಕು ಎಂದು ಪದ್ಮಜಾ ಕೋರಿದ್ದರು. ಆದರೆ, ನ್ಯಾಯಾಲಯ ಅವರ ಈ ಅರ್ಜಿಯನ್ನು ತಿರಸ್ಕರಿಸಿದೆ.

ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ವಿಚಾರಣೆಯ ವೇಳೆ, "ಸಹೋದರ ಲಕ್ಷ್ಯರಾಜ್ ಮಂಡಿಸಿರುವ 'ವಿಲ್'ಗೆ ಸಂಬಂಧಿಸಿದ ಹಕ್ಕು ಪ್ರತಿಪಾದನೆಯು ನ್ಯಾಯಾಲಯದ ಮುಂದೆ ಬಾಕಿ ಇರುವವರೆಗೆ, ತಂದೆಯವರು ಯಾವುದೇ ವಿಲ್ ಬರೆದಿಲ್ಲ ಎಂಬ ಆಧಾರದ ಮೇಲೆ ಯಾವುದೇ ಕಾನೂನು ಪ್ರಕ್ರಿಯೆಗಳು ಮುಂದುವರಿಯಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಅದೇ ಸಮಯದಲ್ಲಿ, ತನ್ನ ಸಹೋದರ ಮಂಡಿಸಿರುವ ವಿಲ್ ಬಗ್ಗೆ ಇರುವ ಸಂಶಯಾಸ್ಪದ ಸಂದರ್ಭಗಳ ಕುರಿತು ವಾದ ಮಂಡಿಸಲು ನ್ಯಾಯಾಲಯ ಪದ್ಮಜಾ ಅವರಿಗೆ ಅವಕಾಶ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 4ಕ್ಕೆ ನಿಗದಿಪಡಿಸಲಾಗಿದೆ.

ಸಂಭ್ರಮಿಸಿದ ಲಕ್ಷ್ಯರಾಜ್ ಬೆಂಬಲಿಗರು

ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆ ಉದಯಪುರದ ಸಿಟಿ ಪ್ಯಾಲೇಸ್‌ನ ಜಗದೀಶ್ ಚೌಕ್ ಗೇಟ್ ಬಳಿ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಲಕ್ಷ್ಯರಾಜ್ ಸಿಂಗ್, "ಸತ್ಯಕ್ಕೆ ಜಯ ಸಿಕ್ಕಿದೆ. ಸತ್ಯ ಎಲ್ಲರ ಮುಂದೆ ಬಂದಿದೆ. ಇದು ಸಾಮೂಹಿಕ ಪ್ರಯತ್ನದ ಫಲ" ಎಂದರು.

'ಕುಟುಂಬ ಕಷ್ಟಗಳನ್ನು ಅನುಭವಿಸಿದೆ': ಜಗದೀಶ್ ದೇಗುಲಕ್ಕೆ ಲಕ್ಷ್ಯರಾಜ್ ಭೇಟಿ

ತೀರ್ಪಿನ ನಂತರ ಲಕ್ಷ್ಯರಾಜ್ ಸಿಂಗ್ ಮೇವಾರ್ ಅವರು ಪತ್ನಿ ನಿವೃತ್ತಿ ಕುಮಾರಿ ಮತ್ತು ಮಕ್ಕಳೊಂದಿಗೆ ಕಾಲ್ನಡಿಗೆಯಲ್ಲೇ ಜಗದೀಶ್ ದೇವಸ್ಥಾನಕ್ಕೆ ತೆರಳಿ ಜಗನ್ನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, "ಇಂದಿನ ತೀರ್ಪು ಅತ್ಯಂತ ಸಂತೋಷದ ಕ್ಷಣವಾಗಿದೆ. ಇಡೀ ಕುಟುಂಬವು ಕಷ್ಟದ ಅವಧಿಯನ್ನು ಅನುಭವಿಸಿದೆ. ನನ್ನ ತಂದೆ ಎಲ್ಲಿದ್ದರೂ ಅವರಿಗೆ ಈಗ ಶಾಂತಿ ಸಿಕ್ಕಿರುತ್ತದೆ. ಈ ವಿವಾದದ ಸಮಯದಲ್ಲಿ ನನ್ನ ತಂದೆಯ ಬಗ್ಗೆ ಬಳಸಲಾದ ಕೆಲವು ಪದಗಳು ನನಗೆ ತೀವ್ರ ನೋವು ಮತ್ತು ಆಘಾತ ತಂದಿದ್ದವು. ಇಂದು ಸತ್ಯ ಹೊರಬಂದಿದೆ" ಎಂದು ಭಾವುಕರಾದರು.

ಅರವಿಂದ್ ಸಿಂಗ್ ಮೇವಾರ್ ನಿಧನದ ನಂತರ ಶುರುವಾದ ವಿವಾದ

ಈ ಕಾನೂನು ಸಮರವು 2025 ಮಾರ್ಚ್ 16 ರಂದು ಉದಯಪುರದಲ್ಲಿ ನಿಧನರಾದ ಅರವಿಂದ್ ಸಿಂಗ್ ಮೇವಾರ್ ಅವರ ಆಸ್ತಿಗೆ ಸಂಬಂಧಿಸಿದ್ದಾಗಿದೆ. ಅವರ ಮಗಳು ಪದ್ಮಜಾ ಕುಮಾರಿ ಅವರು ತಮ್ಮ ತಂದೆ ಯಾವುದೇ ಮಾನ್ಯವಾದ ವಿಲ್ ಬಿಟ್ಟು ಹೋಗಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಉದಯಪುರದ ಸಿಟಿ ಪ್ಯಾಲೇಸ್ ಮತ್ತು ಪ್ರಸಿದ್ಧ 'ಎಚ್‌ಆರ್‌ಎಚ್ ಗ್ರೂಪ್ ಆಫ್ ಹೋಟೆಲ್ಸ್' (HRH Group of Hotels) ಈ ವಿವಾದದ ಕೇಂದ್ರಬಿಂದುಗಳಾಗಿವೆ. ಲಕ್ಷ್ಯರಾಜ್ ಸಿಂಗ್ ಪ್ರಸ್ತುತ ಈ ಹೋಟೆಲ್ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ.

ದಶಕಗಳ ಇತಿಹಾಸವಿರುವ ಮೇವಾರ್ ಕುಟುಂಬದ ಕಲಹ

ಈ ಸಂಘರ್ಷದ ಬೇರುಗಳು ದಶಕಗಳಷ್ಟು ಹಳೆಯವು. ಉದಯಪುರ ರಾಜಮನೆತನದ ಮಾಜಿ ಮುಖ್ಯಸ್ಥ ಭಗವತ್ ಸಿಂಗ್ ಮೇವಾರ್ ಅವರಿಗೆ ಮೂವರು ಮಕ್ಕಳಿದ್ದರು . ಮಹೇಂದ್ರ ಸಿಂಗ್, ಅರವಿಂದ್ ಸಿಂಗ್ ಮತ್ತು ಯೋಗೇಶ್ವರಿ ಕುಮಾರಿ. 1983ರಲ್ಲಿ ಭಗವತ್ ಸಿಂಗ್ ಅವರು ಕುಟುಂಬದ ಆಸ್ತಿಗಳನ್ನು ಮಾರಾಟ ಮಾಡಲು ಮತ್ತು ಲೀಸ್ ನೀಡಲು ನಿರ್ಧರಿಸಿದಾಗ ಹಿರಿಯ ಮಗ ಮಹೇಂದ್ರ ಸಿಂಗ್ ಅದನ್ನು ವಿರೋಧಿಸಿ ನ್ಯಾಯಾಲಯಕ್ಕೆ ಹೋಗಿದ್ದರು. ಇದರಿಂದ ಅಸಮಾಧಾನಗೊಂಡ ಭಗವತ್ ಸಿಂಗ್ ಅವರು ಮಹೇಂದ್ರ ಸಿಂಗ್ ಅವರನ್ನು ದೂರವಿಟ್ಟು, ಕಿರಿಯ ಮಗ ಅರವಿಂದ್ ಸಿಂಗ್ ಅವರಿಗೆ ಆಸ್ತಿ ಮತ್ತು ವಿಲ್ ನಿರ್ವಹಣೆಯ ಜವಾಬ್ದಾರಿ ನೀಡಿದ್ದರು.

1984ರಲ್ಲಿ ಭಗವತ್ ಸಿಂಗ್ ನಿಧನದ ನಂತರ ಈ ವಿವಾದ ಮತ್ತಷ್ಟು ತೀವ್ರವಾಯಿತು. 2020ರಲ್ಲಿ ಸುಮಾರು 37 ವರ್ಷಗಳ ಕಾನೂನು ಹೋರಾಟದ ನಂತರ ಉದಯಪುರ ಜಿಲ್ಲಾ ನ್ಯಾಯಾಲಯವು ಆಸ್ತಿಯನ್ನು ನಾಲ್ಕು ಭಾಗಗಳಾಗಿ (ಮೂವರು ಮಕ್ಕಳಿಗೆ ತಲಾ ಒಂದು ಮತ್ತು ತಂದೆಯ ಹೆಸರಿಗೆ ಒಂದು) ಹಂಚುವಂತೆ ಆದೇಶಿಸಿತ್ತು. ಈವರೆಗೂ ಹೆಚ್ಚಿನ ಆಸ್ತಿಗಳು ಅರವಿಂದ್ ಸಿಂಗ್ ಅವರ ನಿಯಂತ್ರಣದಲ್ಲಿದ್ದವು. ಈಗ ಅವರ ನಿಧನದ ನಂತರ ಅವರ ಮಕ್ಕಳಾದ ಲಕ್ಷ್ಯರಾಜ್ ಮತ್ತು ಪದ್ಮಜಾ ನಡುವೆ ಉತ್ತರಾಧಿಕಾರತ್ವದ ಸಮರ ಮುಂದುವರಿದಿದೆ.