ಭೂಕಂಪದಲ್ಲಿ ನೆರವಿಗೆ ಬಂದ ಭಾರತಕ್ಕೆ ಟರ್ಕಿ ಮಿತ್ರದ್ರೋಹ: ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಿ ಪಾಕ್ಗೆ ಬೆಂಬಲ
ಭೂಕಂಪದಲ್ಲಿ ನೆರವಿಗೆ ಬಂದ ಭಾರತಕ್ಕೆ ಟರ್ಕಿ ಮಿತ್ರದ್ರೋಹ ಮಾಡಿದ್ದು, ಬೆನ್ನಿಗೆ ಚೂರಿ ಹಾಕಿದೆ. ಹಿಂದುಸ್ತಾನ್ ನಮ್ಮ ದೋಸ್ತ್ ಎಂದಿದ್ದು ನಾಟಕವೇ ಎಂಬ ಮಾತು ಕೇಳಿಬರುತ್ತಿದೆ. ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಪ್ರಸ್ತಾಪಿಸಿ ಟರ್ಕಿ ಪಾಕ್ಗೆ ಬೆಂಬಲ ನೀಡಿದೆ.
ನವದೆಹಲಿ (ಮಾರ್ಚ್ 6, 2023): ಭೀಕರ ಭೂಕಂಪದಿಂದ ನಲುಗಿದ್ದಾಗ ‘ಆಪರೇಷನ್ ದೋಸ್ತ್’ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗೆ ಹಗಲು-ರಾತ್ರಿ ಎನ್ನದೆ ನೆರವು ನೀಡಿದ್ದ ಭಾರತಕ್ಕೆ ಟರ್ಕಿ ವಿಶ್ವಾಸದ್ರೋಹ ಎಸಗಿದೆ. ಕಾಶ್ಮೀರ ಎಂಬುದು ಭಾರತದ ಅವಿಭಾಜ್ಯ ಅಂಗ ಎಂಬ ಸಂಗತಿ ಗೊತ್ತಿದ್ದರೂ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (ಯುಎನ್ಎಚ್ಆರ್ಸಿ) ಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದೆ. ಅಲ್ಲದೆ, ಈ ವಿಚಾರವಾಗಿ ಪಾಕಿಸ್ತಾನವನ್ನು ಬೆಂಬಲಿಸಿ, ಭಾರತವನ್ನು ತರಾಟೆಗೂ ತೆಗೆದುಕೊಂಡಿದೆ. ಇದಕ್ಕೆ ಅಲ್ಲೇ ಭಾರತ ತೀಕ್ಷ್ಣ ತಿರುಗೇಟನ್ನೂ ಕೊಟ್ಟಿದೆ.
ಭಾರತದ ಎದಿರೇಟು:
ಯುಎನ್ಎಚ್ಆರ್ಸಿಯಲ್ಲಿ (UNHRC) ಕಾಶ್ಮೀರ (Kashmir) ವಿಷಯ ಪ್ರಸ್ತಾಪಿಸಿದ ಟರ್ಕಿ (Turkey) ಪ್ರತಿನಿಧಿಗಳಿಗೆ ಜಿನೆವಾದ ಭಾರತದ ಶಾಶ್ವತ ಮಿಷನ್ನ ಪ್ರಥಮ ಕಾರ್ಯದರ್ಶಿಯಾಗಿರುವ ಸೀಮಾ ಪೂಜಾನಿ ಅವರು ತಿರುಗೇಟು ಕೊಟ್ಟಿದ್ದಾರೆ. ಜಮ್ಮು-ಕಾಶ್ಮೀರದ (Jammu - Kashmir) ಬಗ್ಗೆ ಅನಗತ್ಯ ಹೇಳಿಕೆಗಳನ್ನು ಕೊಡಲು ಬರಬೇಡಿ. ಇದು ನಮ್ಮ ಆಂತರಿಕ ವಿಚಾರವಾಗಿದ್ದು, ಟರ್ಕಿ ಇಂತಹ ಅನಪೇಕ್ಷಿತ ಹೇಳಿಕೆಗಳನ್ನು ನೀಡಬಾರದು ಎಂದು ತಾಕೀತು ಮಾಡಿದ್ದಾರೆ. ಇದೇ ವೇಳೆ, ಪಾಕಿಸ್ತಾನದಲ್ಲಿ (Pakistan) ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸೀಮಾ ಅವರು ಎಳೆಎಳೆಯಾಗಿ ವಿಶ್ವ ಸಮುದಾಯದ ಮುಂದೆ ಬಿಚ್ಚಿಟ್ಟು, ಆ ದೇಶದ ಬಣ್ಣವನ್ನು ಜಾಗತಿಕ ವೇದಿಕೆಯಲ್ಲಿ ಬಯಲು ಮಾಡಲು ಯತ್ನಿಸಿದ್ದಾರೆ.
ಇದನ್ನೂ ಓದಿ: ಟರ್ಕಿಗೆ ತೆರಳಿದ್ದ ಎನ್ಡಿಆರ್ಎಫ್ ತಂಡಕ್ಕೆ ಮೋದಿ ಮೆಚ್ಚುಗೆ: ಇನ್ನೊಬ್ಬರ ರಕ್ಷಣೆ ನಮ್ಮ ಕರ್ತವ್ಯ ಎಂದ ಪ್ರಧಾನಿ
ಟರ್ಕಿ ನಡೆಗೆ ಟೀಕೆ
ಸಂಕಷ್ಟದ ಸಂದರ್ಭದಲ್ಲಿ ನೆರವಾದ ದೇಶದ ವಿರುದ್ಧವೇ ಟರ್ಕಿ ನಿಂತಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ಭೂಕಂಪ ವೇಳೆ ಪರಿಹಾರವಾಗಿ ಕೊಡಲು ಏನೂ ಇಲ್ಲದೆ, ತನ್ನ ದೇಶ ಪ್ರವಾಹಕ್ಕೀಡಾದ ಸಂದರ್ಭದಲ್ಲಿ ಟರ್ಕಿ ಕಳುಹಿಸಿದ್ದ ನೆರವನ್ನೇ ಭೂಕಂಪ ಪರಿಹಾರದ ಹೆಸರಲ್ಲಿ ಆ ದೇಶಕ್ಕೆ ಕಳುಹಿಸಿಕೊಟ್ಟಿದ್ದ ಪಾಕಿಸ್ತಾನದ ಬೆಂಬಲಕ್ಕೆ ಟರ್ಕಿ ನಿಂತಿರುವುದಕ್ಕೆ ಟೀಕೆಗಳೂ ವ್ಯಕ್ತವಾಗಿವೆ.
ಇದನ್ನೂ ಓದಿ: ಟರ್ಕಿ ಭೂಕಂಪ: ಭಾರತದಿಂದ ಸಹಾಯಹಸ್ತ; ದೋಸ್ತ್ ಎಂದು ಧನ್ಯವಾದ ಹೇಳಿದ ಟರ್ಕಿ ಸರ್ಕಾರ