Asianet Suvarna News Asianet Suvarna News

ಕೇಂದ್ರ ಸಚಿವ ಜೈಪಾಲ್‌ ರೆಡ್ಡಿ ಮಗಳನ್ನೇ ಪ್ರೀತಿಸಿ ಮದುವೆಯಾಗಿದ್ದ ರೇವಂತ್‌ ರೆಡ್ಡಿ!

ತೆಲಂಗಾಣದ ನೂತನ ಸಿಎಂ ಆಗಿ ರೇವಂತ್‌ ರೆಡ್ಡಿ ನೇಮಕವಾಗಿದ್ದು, ನಾಳೆ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಇದರ ನಡುವೆ ಅವರ ಲವ್‌ಸ್ಟೋರಿ ವಿವರಗಳು ಒಂದೊಂದಾಗಿ ಹೊರಬರುತ್ತಿದೆ.
 

Telangana New Chief Minister revanth reddy geetha reddy interesting love story san
Author
First Published Dec 6, 2023, 1:08 PM IST

ನವದೆಹಲಿ (ಡಿ.6): ರಾಜಕಾರಣ ಬಿಟ್ಟು ಬೇರೆನನ್ನೂ ಕನಸು ಕಾಣದ ಕಾಂಗ್ರೆಸ್‌ ನಾಯಕ ರೇವಂತ್‌ ರೆಡ್ಡಿ ತೆಲಂಗಾಣದ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಸಿಎಂ ಆಗಿ ಅವರ ಪದಗ್ರಹಣ ಸಮಾರಂಭ ನಾಳೆ ನಿಗದಿಯಾಗಿದೆ. ದೇಶದ ಅತ್ಯಂತ ಯುವ ರಾಜ್ಯವಾಗಿರುವ ತೆಲಂಗಾಣದ 2ನೇ ಸಿಎಂ ರೇವಂತ್‌ ರೆಡ್ಡಿ. 2014ರಲ್ಲಿ ಆಂಧ್ರಪ್ರದೇಶದಿಂದ ವಿಭಜನೆಗೊಂಡು ಹೊಸ ರಾಜ್ಯವಾಗಿದ್ದ ತೆಲಂಗಾಣದಲ್ಲಿ ಕಳೆದ 10 ವರ್ಷಗಳ ಕಾಲೆ ಕೆಸಿ ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ (ಅಂದಿನ ಟಿಆರ್‌ಎಸ್‌) ಅಧಿಕಾರದಲ್ಲಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಆರ್‌ಎಸ್‌ನ ಅಧಿಪತ್ಯವನ್ನು ಕೊನೆಗಾಣಿಸಿದ್ದು ರೇವಂತ್‌ ರೆಡ್ಡಿ. ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಆಪ್ತರೂ ಆಗಿರುವ ರೇವಂತ್‌ ರೆಡ್ಡಿ ಶಾಲಾ-ಕಾಲೇಜು ದಿನಗಳಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಸದಸ್ಯರಾಗಿದ್ದವರು. ಶಾಲಾ ದಿನಗಳಿಂದಲೂ ರಾಜಕೀಯದ ಕುರಿತಾಗಿ ಆಸಕ್ತಿ ಇರಿಸಿಕೊಂಡಿದ್ದ ರೇವಂತ್‌ ರೆಡ್ಡಿ ಅವರ ಪತ್ನಿ, ಕಾಂಗ್ರೆಸ್‌ನ ಮಾಜಿ ನಾಯಕ ಹಾಗೂ ಕೇಂದ್ರ ಸಚಿವ ಜೈಪಾಲ್‌ ರೆಡ್ಡಿ ಅವರ ಸಹೋದರನ ಪುತ್ರಿ. ನಾಗಾರ್ಜುನ ಸಾಗರ ಅಣೆಕಟ್ಟಿನ ಬೋಟ್‌ ರೈಡ್‌ನಲ್ಲಿ ಮೊದಲ ಬಾರಿಗೆ ಪರಿಚಯವಾಗಿದ್ದ ಇವರಿಬ್ಬರ ಪ್ರೇಮ್‌ ಕಹಾನಿ ಇಂದು ಮತ್ತೆ ಸುದ್ದಿಯಾಗುತ್ತಿದೆ.

ಸಿಎಂ ಆಗಿ ಘೋಷಣೆ ಆದ ಬೆನ್ನಲ್ಲಿಯೇ ರೇವಂತ್‌ ರೆಡ್ಡಿ ಅವರ ರಾಜಕೀಯ ಪ್ರಯಾಣದ ಕುರಿತಾಗಿ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಸಿಎಂ ಆಗಿ ಆಯ್ಕೆಯಾದ ರೇವಂತ್ ರೆಡ್ಡಿ ಅವರ ನಿಜ ಜೀವನದಲ್ಲಿ ಒಂದು ಸುಂದರ ಪ್ರೇಮಕಥೆ ಇದೆ. ಮದುವೆಯ ವಿಚಾರದಲ್ಲಿ ಸಿನಿಮಾಗಳನ್ನು ಮೀರಿದ ಟ್ವಿಸ್ಟ್‌ಗಳಿವೆ. ರೇವಂತ್ ರೆಡ್ಡಿ, ಗೀತಾ ರೆಡ್ಡಿ ಎಂಬ ಹುಡುಗಿಯನ್ನು ಪ್ರೀತಿಸಿ 1992ರಲ್ಲಿ ಮದುವೆಯಾಗಿದ್ದರು. ಆದರೆ, ಈ ಮದುವೆ ಸುಲಭವಾಗಿ ನಡೆದಿದ್ದಲ್ಲ.

ರೇವಂತ್ ರೆಡ್ಡಿ ಪ್ರೀತಿಸಿದ ಈ ಗೀತಾ ರೆಡ್ಡಿ ಬೇರೆ ಯಾರೂ ಅಲ್ಲ. ಅವರು ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿ ಅವರ ಕಿರಿಯ ಸಹೋದರನ ಮಗಳು. ಕಾಲೇಜು ದಿನಗಳಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಹಿರಿಯರ ಮನವೊಲಿಸಿ ಮದುವೆಯಾಗುವ ಭರದಲ್ಲಿ ಹಲವು ಕಷ್ಟಗಳನ್ನು ಈ ಜೋಡಿ ಎದುರಿಸಿತ್ತು.  ರೇವಂತ್ ರೆಡ್ಡಿ ವಿದ್ಯಾರ್ಥಿಯಾಗಿದ್ದಾಗಲೇ ಎಬಿವಿಪಿ ನಾಯಕರಾಗಿ ಹಲವು ಕಾರ್ಯಕ್ರಮಗಳನ್ನು ಹಾಗೂ ಚಳವಳಿಗಳನ್ನು ಮಾಡಿದ್ದರು. ಆ ವೇಳೆ ರೇವಂತ್ ರೆಡ್ಡಿಗೆ ಗೀತಾ ರೆಡ್ಡಿ ಮೇಲೆ ಪ್ರೀತಿ ಮೂಡಿತ್ತು. ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡುತ್ತಿದ್ದಾಗ ರೇವಂತ್ ಅವರ ಮೇಲೂ ಗೀತಾ ರೆಡ್ಡಿಗೆ ಪ್ರೀತಿ ಮೂಡಿತ್ತು. ಈ ವಿಚಾರ ಗೀತಾ ರೆಡ್ಡಿ ಅವರ ತಂದೆಗೆ ತಿಳಿದಾಗ, ವಿಷಯ ಗಂಭೀರವಾಯಿತು.

ರೇವಂತ್ ರೆಡ್ಡಿಗೆ ಮಗಳನ್ನು ಕೊಡಲು ಇಷ್ಟಪಡದ ಗೀತಾ ರೆಡ್ಡಿ ತಂದೆ ದೆಹಲಿಯಲ್ಲಿದ್ದ ತಮ್ಮ ಅಣ್ಣ ಜೈಪಾಲ್ ರೆಡ್ಡಿ ಬಳಿ ಮಗಳನ್ನು ಕಳುಹಿಸಿದ್ದರು. ಇದರಿಂದ ರೇವಂತ್ ರೆಡ್ಡಿ ಮೇಲೆ ರಾಜಕೀಯ ಒತ್ತಡ ಕೂಡ ಆರಂಭವಾಯಿತು. ಆದರೆ, ತನ್ನ ಪ್ರೀತಿಯನ್ನು ಪಡೆಯಲು ಹಿಂಜರಿಯದ ರೇವಂತ್‌ ರೆಡ್ಡಿ ಈ ವಿಚಾರವಾಗಿ ಸಾಕಷ್ಟು ಹೋರಾಟ ಮಾಡುತ್ತಾರೆ. ಇನ್ನೊಂದೆಡೆ ದೆಹಲಿಯಲ್ಲಿದ್ದ ಗೀತಾ ರೆಡ್ಡಿ ಕೂಡ ತಾನು ಮದುವೆಯಾದರೆ ರೇವಂತ್‌ ರೆಡ್ಡಿಯನ್ನೇ ಎನ್ನುವುದನ್ನು ಖಡಾಖಂಂಡಿತವಾಗಿ ತಿಳಿಸಿಬಿಡುತ್ತಾರೆ.

ಆ ಬಳಿಕ ರೇವಂತ್ ರೆಡ್ಡಿ, ಜೈಪಾಲ್‌ ರೆಡ್ಡಿ ಅವರನ್ನು ಭೇಟಿಯಾಗಿ ವಿಷಯವನ್ನು ಮನವರಿಕೆ ಮಾಡಿಕೊಟ್ಟರು. ರೇವಂತ್ ಅವರಲ್ಲಿದ್ದ ಧೈರ್ಯ, ಚಾಣಾಕ್ಷತನ, ಪ್ರತಿಭೆಯನ್ನು ಕಂಡ ಜೈಪಾಲ್ ರೆಡ್ಡಿ ಅವರು ಮುಂದೊಂದು ದಿನ ಈತ ದೊಡ್ಡ ನಾಯಕನಾಗುತ್ತಾನೆ ಎನ್ನುವುದು ಮನದಟ್ಟಾಗಿತ್ತು. ಇದೇ ವಿಚಾರವನ್ನು ಅವರು ತಮ್ಮನಿಗೂ ತಿಳಿಸಿದ್ದರು. ಅದಲ್ಲದೆ, ರೇವಂತ್‌ ರೆಡ್ಡಿ ತಮ್ಮದೇ ಜಾತಿಯಾಗಿರುವ ಕಾರಣ ಜೈಪಾಲ್‌ ರೆಡ್ಡಿ ಒಪ್ಪಿಗೆ ನೀಡಲು ಇನ್ನೊಂದು ಕಾರಣವೂ ಇತ್ತು. ಅದಾದ ಬಳಿಕ ರೇವಂತ್‌ ರೆಡ್ಡಿ ತಾವು ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಲು ಯಶಸ್ವಿಯಾಗಿದ್ದರು.

ತೆಲಂಗಾಣದಲ್ಲಿ ಬಿಆರ್‌ಎಸ್‌ ಕಾರ್‌ ಪಂಚರ್‌ ಮಾಡಿದ ಕಾಂಗ್ರೆಸ್‌, ರೇವಂತ್‌ ರೆಡ್ಡಿ ಮುಂದಿನ ಸಿಎಂ?

ರೇವಂತ್ ರೆಡ್ಡಿ ಅವರು 1969ರ ನವೆಂಬರ್ 8 ರಂದು ತೆಲಂಗಾಣ ರಾಜ್ಯದ ನಾಗರ್ಕರ್ನೂಲ್ ಜಿಲ್ಲೆಯ ವಂಗೂರ್ ಮಂಡಲದ ಕೊಂಡರೆಡ್ಡಿಪಲ್ಲಿ ಗ್ರಾಮದಲ್ಲಿ ಜನಿಸಿದ್ದರು. ಬಾಲ್ಯದಿಂದಲೂ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರು. ಅದೇ ಭರವಸೆ ಮತ್ತು ಉಸಿರಿನೊಂದಿಗೆ ಅವರು ಕ್ರಮೇಣ ರಾಜಕೀಯಕ್ಕೆ ಬಂದರು.  2017ರ ಅಕ್ಟೋಬರ್‌ನಲ್ಲಿ ಟಿಡಿಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ರೇವಂತ್‌ ರೆಡ್ಡಿ, ನಂತರ 2018 ರಲ್ಲಿ TPCC ಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡರು. ನಂತರ ಅವರು ಡಿಸೆಂಬರ್ 2018 ರ ವಿಧಾನಸಭಾ ಚುನಾವಣೆಯಲ್ಲಿ ಕೊಡಂಗಲ್‌ನಿಂದ ಸ್ಪರ್ಧಿಸಿ ಸೋತರು. ಮೇ 2019 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪರವಾಗಿ ಮಲ್ಕಾಜಿಗಿರಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಸ್ಪರ್ಧಿಸಿದ್ದರು
ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು 2021ರ ಜೂನ್ 26 ರಂದು ರೇವಂತ್ ರೆಡ್ಡಿ ಅವರನ್ನು ತೆಲಂಗಾಣ PCC ಅಧ್ಯಕ್ಷರನ್ನಾಗಿ ನೇಮಿಸಿತು. ಅಂದಿನಿಂದ ಅವರು ಪಕ್ಷದ ಮೇಲೆ ಹೆಚ್ಚಿನ ಗಮನ ನೀಡಿದ್ದರು. ಮತ್ತು ಪಕ್ಷದಲ್ಲಿನ ಎಲ್ಲಾ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸಿದರು. ಅತೃಪ್ತ ಮುಖಂಡರು ಹಾಗೂ ಅತೃಪ್ತ ವರಿಷ್ಠರನ್ನು ಒಟ್ಟುಗೂಡಿಸಿದರು. ಎಲ್ಲರನ್ನೂ ಒಂದುಗೂಡಿಸಿ ತೆಲಂಗಾಣದಲ್ಲಿ ಕಾಂಗ್ರೆಸ್‌ ಧ್ವಜ ಹಾರುವಂತೆ ಮಾಡಿದ್ದಾರೆ.

ರೇವಂತ್‌ ರೆಡ್ಡಿ ಭೇಟಿಯಾಗಿ ಹೂಗುಚ್ಛ ನೀಡಿದ ಡಿಜಿಪಿಯನ್ನು ಅಮಾನತು ಮಾಡಿದ ಚುನಾವಣಾ ಆಯೋಗ!

Follow Us:
Download App:
  • android
  • ios