ದೆಹಲಿಯಲ್ಲಿ ನಡೆದ ಜಾಗತಿಕ ಎಐ ಶೃಂಗಸಭೆ ವೇಳೆ ಶರ್ಟ್‌ ಬಿಚ್ಚಿ ಬನಿಯನ್‌ನಲ್ಲಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್‌ನ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದು, ‘ಇಂದು ವಿಪಕ್ಷವು ಮುಸ್ಲಿಂ ಲೀಗ್‌-ಮಾವೋವಾದಿ ಕಾಂಗ್ರೆಸ್‌ ಆಗಿದೆ.

ಜೈಪುರ: ದೆಹಲಿಯಲ್ಲಿ ನಡೆದ ಜಾಗತಿಕ ಎಐ ಶೃಂಗಸಭೆ ವೇಳೆ ಶರ್ಟ್‌ ಬಿಚ್ಚಿ ಬನಿಯನ್‌ನಲ್ಲಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್‌ನ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದು, ‘ಇಂದು ವಿಪಕ್ಷವು ಮುಸ್ಲಿಂ ಲೀಗ್‌-ಮಾವೋವಾದಿ ಕಾಂಗ್ರೆಸ್‌ ಆಗಿದೆ. ದೇಶಕ್ಕೆ ಕಳಂಕ ತರುವ ಒಂದೂ ಅವಕಾಶವನ್ನು ಅವರು ಬಿಡುವುದಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಜಗತ್ತು ಭಾರತವನ್ನು ಶ್ಲಾಘಿಸುವಾಗ ಭಾರತೀಯರಿಗೆ ಹೆಮ್ಮೆಯಾಗುತ್ತದೆ

ರಾಜಸ್ಥಾನದ ಅಜ್ಮೇರ್‌ನಲ್ಲಿ 16,600 ಕೋಟಿ ರು. ಗಾತ್ರದ ಹಲವು ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ‘ಜಗತ್ತು ಭಾರತವನ್ನು ಶ್ಲಾಘಿಸುವಾಗ ಭಾರತೀಯರಿಗೆ ಹೆಮ್ಮೆಯಾಗುತ್ತದೆ. ಆದರೆ ಕಾಂಗ್ರೆಸ್‌ ಮಾತ್ರ ಜಾಗತಿಕ ವೇದಿಕೆಯಲ್ಲಿ ನಾಟಕ ಮಾಡಿ, ವಿದೇಶಿ ಗಣ್ಯರೆದುರು ದೇಶಕ್ಕೆ ಅವಮಾನ ಮಾಡಲು ಯತ್ನಿಸುತ್ತದೆ. ಚುನಾವಣೆಗಳಲ್ಲಿನ ನಿರಂತರ ಸೋಲಿನಿಂದ ಹತಾಶರಾಗಿ ಅವರು ಹೀಗೆ ಮಾಡತ್ತಿದ್ದಾರೆ’ ಎಂದು ಹರಿಹಾಯ್ದರು. ಇದೇ ವೇಳೆ, ‘ಒಂದು ಕಾಲದಲ್ಲಿ ಐಎನ್‌ಸಿ ಎಂದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂಬರ್ಥ ಬರುತ್ತಿತ್ತು. ಆದರೆ ಇಂದು ಎಂಎಂಸಿ, ಅಂದರೆ ಮುಸ್ಲಿಂ ಲೀಗ್‌-ಮಾವೋವಾದಿ ಕಾಂಗ್ರೆಸ್‌ ಆಗಿದೆ’ ಎಂದರು. ಇದಕ್ಕೆ ಕಾರಣವನ್ನು ವಿವರಿಸುತ್ತಾ, ‘ಮುಸ್ಲಿಂ ಲೀಗ್‌ನವರು ಭಾರತವನ್ನು ದ್ವೇ಼ಷಿಸುತ್ತಿದ್ದರು ಹಾಗೂ ಅದೇ ಕಾರಣಕ್ಕೆ ದೇಶ ವಿಭಜನೆ ಆಯಿತು. ಮಾವೋವಾದಿಗಳಿಗೆ ಭಾರತ ಉದ್ಧಾರವಾಗುತ್ತಿರುವ ಬಗ್ಗೆ ಅಸಮಾಧಾನವಿದೆ. ಇಂದು ಕಾಂಗ್ರೆಸ್‌ ಅದನ್ನೇ ಮಾಡುತ್ತಿದೆ’ ಎಂದು ಮೋದಿ ಹೇಳಿದರು.

ಇಂದು ದೀಪಸ್ತಂಭ ವಿವಾದದ ದೇವಸ್ಥಾನಕ್ಕೆ ಮೋದಿ ಭೇಟಿ

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಮಾ.1ರಂದು ತಮಿಳುನಾಡು ಮತ್ತು ಪುದುಚೇರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ದೀಪಸ್ತಂಭ ವಿವಾದಕ್ಕೆ ಕಾರಣವಾಗಿದ್ದ ಮದುರೈನ ತಿರುಪ್ಪರಂಕುಂದ್ರಂ ದೇಗುಲಕ್ಕೂ ಭೇಟಿ ನೀಡಲಿದ್ದಾರೆ.

ಶನಿವಾರ ರಾತ್ರಿಯೇ ಚೆನ್ನೈಗೆ ಪ್ರಧಾನಿ ಬಂದಿಳಿದಿದ್ದಾರೆ. ಭಾನುವಾರ ಬೆಳಿಗ್ಗೆ ಅವರು ಪುದುಚೇರಿಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ಅವರು ಮೂಲಸೌಕರ್ಯ, ಶಿಕ್ಷಣ ಸೇರಿದಂತೆ ಸುಮಾರು 2700 ಕೋಟಿ ರು.ಗಳಿಗೂ ಹೆಚ್ಚಿನ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ನಂತರ ಅವರು ಮದುರೈಗೆ ಪ್ರಯಾಣಿಸಲಿದ್ದಾರೆ. ಅಲ್ಲಿ 4400 ಕೋಟಿ ರು. ವೆಚ್ಚದ ವಿವಿಧ ಕಾಮಗಾರಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಜತೆಗೆ ಎನ್‌ಡಿಎ ರ್‍ಯಾಲಿಯಲ್ಲಿ ಭಾಗಿಯಾಗಲಿದ್ದಾರೆ.ಬಳಿಕ ಅವರು ಮದುರೈನ ತಿರುಪ್ಪರಕುಂದ್ರಂನಲ್ಲಿ ಕಾರ್ತಿಕ ದೀಪೋತ್ಸವದ ಕಾರಣಕ್ಕೆ ವಿವಾದಕ್ಕೆ ಗುರಿಯಾಗಿದ್ದ ಅರುಲ್ಮಿಗು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.