ಕಚೇರಿಯಲ್ಲಿ ಉಳಿದಿದ್ದ ಬಿಸ್ಕೆಟ್‌ ಅನ್ನು ಹಸಿದ ಮಕ್ಕಳಿಗೆ ಕೊಂಡೊಯ್ದ ಅಟೆಂಡರ್‌ ಮೇಲೆ ಕಳ್ಳತನದ ಆರೋಪ ಹೊರಿಸಿ ಕೆಲಸದಿಂದ ವಜಾಗೊಳಿಸಲಾಗಿತ್ತು. 17 ವರ್ಷಗಳ ಸೇವೆ ಸಲ್ಲಿಸಿದ್ದ ನೌಕರನಿಗೆ ಅಂತಿಮವಾಗಿ ನ್ಯಾಯಾಲಯವು ನ್ಯಾಯ ಒದಗಿಸಿದ್ದು, ಮರುನೇಮಕಕ್ಕೆ ಆದೇಶಿಸಿ, ಬಾಕಿ ವೇತನ ಪಾವತಿಸುವಂತೆ ಸೂಚಿಸಿದೆ.

ಕೋಟಿ ಕೋಟಿ ಲೂಟಿ ಮಾಡಿ, ನಾಚಿಕೆ ಮಾನ ಮರ್ಯಾದೆ ಇಲ್ಲದೇ ಜನರಿಂದ ಪ್ರತಿಯೊಂದು ಕೆಲಸಕ್ಕೂ ಲಂಚಕ್ಕೆ ಬೇಡಿಕೆಯೊಡ್ಡುವ ಅಧಿಕಾರಿಗಳು ಎಷ್ಟೋ ಕಡೆಗಳಲ್ಲಿ ನಿಶ್ಚಿಂತೆಯಿಂದ ಇದ್ದಾರೆ. ಕೆಲವು ಕಚೇರಿಗಳಲ್ಲಿ ಲಂಚ ಇಲ್ಲದೇ ಅಲ್ಲಿರುವ ಸಿಬ್ಬಂದಿಯನ್ನು ಮಾತನಾಡಿಸಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ಇದೆ. ಅದೇ ಇನ್ನೊಂದೆಡೆ, ಶ್ರೀಮಂತಿಕೆಯ ಮದದಲ್ಲಿ, ಊಟದ ತಟ್ಟೆಯಲ್ಲಿ ಅರ್ಧಕ್ಕರ್ಧ ಚೆಲ್ಲಿ, ಶ್ರೀಮಂತಿಕೆಯನ್ನು ಮೆರೆಯುವ ಜನರೂ ಅಷ್ಟೇ ಪ್ರಮಾಣದಲ್ಲಿ ಇದ್ದಾರೆ. ಇದರ ನಡುವೆ, ಹಸಿದ ಮಕ್ಕಳಿಗೆ ಕಚೇರಿಯ ಸಿಬ್ಬಂದಿ ಬಿಟ್ಟ ಬಿಸ್ಕೆಟ್‌ ಕೊಂಡೊಯ್ದ ಅಟೆಂಡರ್‌ ಒಬ್ಬರನ್ನು ಕೆಲಸದಿಂದಲೇ ವಜಾ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾಮಾನ್ಯವಾಗಿ ಕಚೇರಿಗಳಲ್ಲಿ ಮೀಟಿಂಗ್‌ ಮಾಡಿದಾಗ, ಅರ್ಧಂಬರ್ಧ ತಿನ್ನುವುದು ಇದ್ದೇ ಇದೆ. ಕೊನೆಗೆ ಉಳಿದ ಬಿಸ್ಕೆಟ್‌ ಅಥವಾ ಆಹಾರವನ್ನು ಡಸ್ಟ್‌ಬಿನ್‌ಗೆ ಹಾಕಿ ವ್ಯರ್ಥ ಮಾಡಲಾಗುತ್ತದೆ. ಹಸಿದ ಪ್ರಾಣಿಗಳಿಗೂ ಅದನ್ನು ಕೊಡುವುದಿಲ್ಲ, ಇಂಥ ಅಳಿದುಳಿದ ಬಿಸ್ಕೆಟ್‌ ಅನ್ನು ತನ್ನ ಹಸಿದ ಮಕ್ಕಳಿಗೆ ತೆಗೆದುಕೊಂಡು ಹೋಗಿದ್ದಕ್ಕೆ ಈ ಅಟೆಂಡರ್‌ಗೆ ಕಳ್ಳತನದ ಆರೋಪ ಹೊರಿಸಿ ಕಚೇರಿಯಿಂದ ವಜಾ ಮಾಡಿರುವ ಅಮಾನವೀಯ ಘಟನೆ ನಡೆದದ್ದು ಜಾರ್ಖಂಡ್‌ನಲ್ಲಿ.

ಏನಿದು ಸ್ಟೋರಿ?

2005 ರಲ್ಲಿ ಈ ಘಟನೆ ನಡೆದಿದೆ! DRDAಯಲ್ಲಿ ಕೆಲಸ ಮಾಡುತ್ತಿದ್ದ ಹಿಮಾಂಶು ಎನ್ನುವವರು ಸುಮಾರು 17 ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ್ದರು. ಮಾರ್ಚ್ 2022 ರಲ್ಲಿ ವೈಯಕ್ತಿಕ ಬಳಕೆಗಾಗಿ ಕಚೇರಿಯಿಂದ "ಕೆಲವು ವಸ್ತುಗಳನ್ನು" ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ಶೋ-ಕಾಸ್ ನೋಟಿಸ್ ನೀಡಲಾಗಿತ್ತು. ಕಳ್ಳತನದ ಆರೋಪ ಹೊರಿಸಿದ್ದರೂ, ನೋಟಿಸ್‌ನಲ್ಲಿ ವಸ್ತುಗಳು ಏನು ಎಂದು ಹೇಳಿರಲಿಲ್ಲ. ಏಕೆಂದರೆ, ಹಾಗೆ ಹೇಳಿದರೆ ಇದ್ದ ಮರ್ಯಾದೆ ಹೋಗುವುದು ಎಂದು ಅನ್ನಿಸಿತ್ತೋ ಏನೊ. ಆದರೆ ಈ ಬಡವನನ್ನು ವಜಾ ಮಾಡಲಾಗಿತ್ತು.

ಕೋರ್ಟ್​ ಹೇಳಿದ್ದೇನು?

ಕೊನೆಗೆ ಅವರು ಕೋರ್ಟ್ ಮೊರೆ ಹೋಗಿದ್ದರು. ನಂತರ ಅವರ ಪರ ವಕೀಲರು ನ್ಯಾಯಾಲಯಕ್ಕೆ ಉಳಿದ ಚಹಾ ಪುಡಿ ಮತ್ತು ಕೆಲವು ಬಿಸ್ಕತ್ತುಗಳನ್ನು ಕೊಂಡೊಯ್ದ ಬಗ್ಗೆ ಕೋರ್ಟ್‌ಗೆ ತಿಳಿಸಿದರು. ಇದನ್ನು ಕೇಳಿದ ಕೋರ್ಟ್ ಕಚೇರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅವರನ್ನು ಕೂಡಲೇ ಮರು ನೇಮಕ ಮಾಡಿಕೊಳ್ಳುವಂತೆ ಜಾರ್ಖಂಡ್ ಹೈಕೋರ್ಟ್ ಆದೇಶಿಸಿದೆ, ಈ ಶಿಕ್ಷೆಯು ಆಘಾತಕಾರಿಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಂ.ಎಸ್. ಸೋನಕ್ ಮತ್ತು ನ್ಯಾಯಮೂರ್ತಿ ರಾಜೇಶ್ ಶಂಕರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ. ನಾಲ್ಕು ವರ್ಷ ಕೆಲಸವಿಲ್ಲದೇ ನೋವು ಅನುಭವಿಸುತ್ತಿದ್ದ ಹಿಮಾಂಶು ಅವರು ಇದೀಗ ಮರು ನೇಮಕಗೊಳ್ಳಲಿದ್ದಾರೆ. ಜೊತೆಗೆ, ಕೋರ್ಟ್ ಅವರಿಗೆ ಜುಲೈ 31 ರೊಳಗೆ 50 ಪ್ರತಿಶತ ಬಾಕಿ ವೇತನವನ್ನು ಪಾವತಿಸಲು ಆದೇಶಿಸಿದೆ.

ಹಿಮಾಂಶು ವಿರುದ್ಧ ಈ ಹಿಂದೆ ಯಾವುದೇ ದುಷ್ಕೃತ್ಯದ ಆರೋಪವಿರಲಿಲ್ಲ ಮತ್ತು ಹಿರಿಯ ಅಧಿಕಾರಿಗಳು ನೀಡಿದ ಪ್ರಶಂಸಾಪತ್ರಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಪೀಠ ಗಮನಿಸಿತು. ಅವರನ್ನು ಮರುನೇಮಕಕ್ಕೆ ಆದೇಶಿಸುವಾಗ, ಶೇಕಡಾ 50 ರಷ್ಟು ವೇತನವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಆರೋಪದ ಲೋಪಕ್ಕೆ ಸಾಕಷ್ಟು ಶಿಕ್ಷೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ