ಪತ್ನಿ ದಾಖಲಿಸಿದ ಕ್ರಿಮಿನಲ್ ಪ್ರಕರಣಗಳಿಂದಾಗಿ ಪತಿ 109 ದಿನಗಳು ಮತ್ತು ಅವರ ತಂದೆ 103 ದಿನಗಳು ಜೈಲಿನಲ್ಲಿ ಕಳೆಯಬೇಕಾಯಿತು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. 

ನವದೆಹಲಿ (ಜು.23): ವೈವಾಹಿಕ ವಿವಾದದ (marital dispute) ಸಂದರ್ಭದಲ್ಲಿ ತಮ್ಮ ಮಾಜಿ ಪತಿ ಮತ್ತು ಅತ್ತೆ ಮಾವಂದಿರ ವಿರುದ್ಧ ಹಲವಾರು ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಕ್ಕಾಗಿ ಐಪಿಎಸ್‌ ಅಧಿಕಾರಿಯೊಬ್ಬರಿಗೆ ಸುಪ್ರೀಂ ಕೋರ್ಟ್‌ ಬೇಷರತ್ತಾಗಿ ಸಾರ್ವಜನಿಕ ಕ್ಷಮೆಯಾಚಿಸುವಂತೆ ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಅವರು ಅನುಭವಿಸಿದ ದೈಹಿಕ ಹಾಗೂ ಮಾನಸಿಕ ಯಾತನೆಗೆ ನೀವು ಕ್ಷಮೆ ಕೇಳುವುದು ಅನಿವಾರ್ಯ ಎಂದು ಕೋರ್ಟ್‌ ತಿಳಿಸಿದ್ದು, ಅದರೊಂದಿಗೆ ಐಪಿಎಸ್‌ ಅಧಿಕಾರಿ (IPS Officer) ದಾಖಲಿಸಿರುವ ಎಲ್ಲಾ ಪ್ರಕರಣವನ್ನೂ ರದ್ದು ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2018 ರಿಂದ ದಂಪತಿಗಳು ಬೇರ್ಪಟ್ಟಿದ್ದರಿಂದ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರ ಪೀಠವು ಮದುವೆಯನ್ನು ರದ್ದುಗೊಳಿಸಿತು. ಇವರ ಮಗಳು ತಾಯಿಯ ಜೊತೆಯಲ್ಲಿಯೇ ವಾಸ ಮಾಡಲಿದ್ದಾರೆ. ಅವರ ಮಾಜಿ ಪತಿ ಮತ್ತು ಕುಟುಂಬ ಸದಸ್ಯರು ಅವಳನ್ನು ಭೇಟಿಯಾಗಲು ಸಾಧ್ಯವಾಗುತ್ತದೆ ಎಂದು ಕೋರ್ಟ್‌ ಹೇಳಿದೆ.

ಪತ್ನಿ ದಾಖಲಿಸಿದ ಕ್ರಿಮಿನಲ್ ಪ್ರಕರಣಗಳಿಂದಾಗಿ ಪತಿ 109 ದಿನಗಳು ಮತ್ತು ಅವರ ತಂದೆ 103 ದಿನಗಳು ಜೈಲಿನಲ್ಲಿ ಕಳೆಯಬೇಕಾಯಿತು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. "ಅವರು ಅನುಭವಿಸಿದ್ದನ್ನು ಯಾವುದೇ ರೀತಿಯಲ್ಲಿ ಸರಿದೂಗಿಸಲು ಸಾಧ್ಯವಿಲ್ಲ" ಎಂದು ನ್ಯಾಯಾಲಯವು ಅಧಿಕಾರಿಗೆ ಸಾರ್ವಜನಿಕ ಕ್ಷಮೆಯಾಚಿಸುವಂತೆ ಆದೇಶಿಸಿತು.

"ಮಹಿಳೆ ಮತ್ತು ಆಕೆಯ ಪೋಷಕರು ತಮ್ಮ ಪತಿ ಮತ್ತು ಅವರ ಕುಟುಂಬ ಸದಸ್ಯರಿಗೆ ಬೇಷರತ್ತಾದ ಕ್ಷಮೆಯಾಚಿಸಬೇಕು, ಇದನ್ನು ಪ್ರಸಿದ್ಧ ಇಂಗ್ಲಿಷ್ ಮತ್ತು ಹಿಂದಿ ಪತ್ರಿಕೆಯ ರಾಷ್ಟ್ರೀಯ ಆವೃತ್ತಿಯಲ್ಲಿ ಪ್ರಕಟಿಸಬೇಕು" ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಈ ಕ್ಷಮೆಯಾಚನೆಯನ್ನು ಆದೇಶದ 3 ದಿನಗಳ ಒಳಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ಇತರ ರೀತಿಯ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಕಟಿಸಬೇಕು ಮತ್ತು ಪ್ರಸಾರ ಮಾಡಬೇಕು ಎಂದು ನ್ಯಾಯಾಧೀಶರು ಹೇಳಿದರು. ಇದನ್ನು ಹೊಣೆಗಾರಿಕೆಯ ಸ್ವೀಕಾರ ಎಂದು ಅರ್ಥೈಸಿಕೊಳ್ಳಲಾಗುವುದಿಲ್ಲ ಮತ್ತು ಕಾನೂನಿನ ಅಡಿಯಲ್ಲಿ ಉದ್ಭವಿಸುವ ಕಾನೂನು ಹಕ್ಕುಗಳು, ಬಾಧ್ಯತೆಗಳು ಅಥವಾ ಪರಿಣಾಮಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಪತಿ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು "ತನ್ನ ಸ್ಥಾನ ಮತ್ತು ಅಧಿಕಾರವನ್ನು ಬಳಸಬೇಡಿ" ಅಥವಾ ಅವರ ಸಹೋದ್ಯೋಗಿಗಳ ಅಧಿಕಾರವನ್ನು ಬಳಸಬೇಡಿ ಎಂದು ನ್ಯಾಯಾಲಯವು ಮಹಿಳೆಗೆ ಸೂಚಿಸಿದೆ. ಯಾವುದೇ ರೀತಿಯಲ್ಲಿ ಮಹಿಳೆಯ ಕ್ಷಮೆಯಾಚನೆಯನ್ನು ಬಳಸದಂತೆ ಪತಿಗೆ ಕೂಡ ಎಚ್ಚರಿಕೆ ನೀಡಲಾಗಿದೆ.

ಮಹಿಳೆ ಪತಿ ಮತ್ತು ಅವರ ಕುಟುಂಬದ ವಿರುದ್ಧ ಪ್ರತ್ಯೇಕ ಕ್ರಿಮಿನಲ್ ಮೊಕದ್ದಮೆಗಳನ್ನು ಮತ್ತು ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಮತ್ತೊಂದು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿದ್ದರು. ಆಕೆಯ ಪತಿ ಕೂಡ ಟ್ಯಾಟ್-ಫಾರ್-ಟ್ಯಾಟ್ ಮೊಕದ್ದಮೆಗಳನ್ನು ಹೂಡಿದ್ದರು. ಇದಲ್ಲದೆ, ಮೂರನೇ ವ್ಯಕ್ತಿಗಳು ಸಹ ಪ್ರಕರಣಗಳನ್ನು ಹೂಡಿದ್ದರು. ಪ್ರಕರಣಗಳನ್ನು ತಮ್ಮ ತಮ್ಮ ವ್ಯಾಪ್ತಿಗೆ ವರ್ಗಾಯಿಸುವಂತೆ ಕೋರಿ ಪತಿ-ಪತ್ನಿ ಇಬ್ಬರೂ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.