ತಮಿಳುನಾಡಿನ ಕಜುಗುಮಲೈ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನವವಿವಾಹಿತೆ ಅನಿತಾ, ಮಂಗಗಳಿಗೆ ಹಣ್ಣು ನೀಡುವಾಗ ಆಯತಪ್ಪಿ ಗುಡ್ಡದಿಂದ ಬಿದ್ದು ಪತಿಯೆದುರೇ ಸಾವನ್ನಪ್ಪಿದ್ದಾರೆ. ಕೋತಿಗಳ ಹಿಂಡು ಸುತ್ತುವರೆದಾಗ ಭಯಭೀತಳಾಗಿ ಹಿಂದೆ ಸರಿದಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಾವು ಹೇಗೆ ಬರುತ್ತದೆ ಎಂದು ಹೇಳುವುದೇ ಕಷ್ಟ. ಕೆಲವೊಮ್ಮೆ ಯಾರಿಗೋ ಸಹಾಯಮಾಡಲು ಹೋಗಿ ಆಪತ್ತು ತಂದುಕೊಳ್ಳುವುದು ಇದೆ. ಅಂಥದ್ದೇ ಒಂದು ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ.ತೂತುಕುಡಿಯ ದಕ್ಷಿಣ ತಿಟ್ಟಂಕುಳಂ ಪ್ರದೇಶದ ಅನಿತಾ ಎನ್ನುವ ನವವಿವಾಹಿತೆ ಕಜುಗುಮಲೈನಲ್ಲಿರುವ ಕಲುಗಸಲಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಪೂಜೆ- ಪುನಸ್ಕಾರದ ಬಳಿಕ ಅಲ್ಲಿಯೇ ಇದ್ದ ಮಂಗಗಳಿಗೆ ಹಣ್ಣು ತಿನ್ನಿಸಲು ಅನಿತಾ (24 ವರ್ಷ) ಮುಂದಾದರು. ಅದನ್ನು ನೋಡಿ ಕೋತಿಗಳ ಹಿಂಡು ಅವರನ್ನು ಸುತ್ತುವರೆಯಿತು. ಮಂಗಗಳ ಗುಂಪು ಸುತ್ತುವರೆದಾಗ ಗಾಬರಿಗೊಂಡು ಹಿಂದೆ ಸರಿದಿದ್ದಾರೆ. ಅದು ಗುಡ್ಡದ ಇಳಿಜಾರು ಪ್ರದೇಶ ಆಗಿದ್ದರಿಂದ ಪತಿಯ ಎದುರೇ ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ತಿಂಗಳಷ್ಟೇ ಮದುವೆ

ಕಳೆದ ತಿಂಗಳಷ್ಟೇ ಸುರೇಶ್ ಎನ್ನುವವರು ಅನಿತಾ ಮದುವೆಯಾಗಿದ್ದರು. ವಿದೇಶದಲ್ಲಿ ಕೆಲಸ ಮಾಡುತ್ತಿರುವ ಸುರೇಶ್ ಇತ್ತೀಚೆಗೆ ಮನೆಗೆ ಮರಳಿದ್ದರು, ಮತ್ತು ದಂಪತಿಗಳು ಕಜುಗುಮಲೈನಲ್ಲಿರುವ ಕಲುಗಸಲಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮುಖ್ಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ, ದಂಪತಿ ಬೆಟ್ಟದ ತುದಿಯ ಉಚಿಪಿಳ್ಳೈಯರ್ ದೇವಾಲಯಕ್ಕೆ ಹತ್ತಿದರು. ದಂಪತಿ ಕೋತಿಗಳಿಗೆ ಹಣ್ಣುಗಳನ್ನು ತಿನ್ನಿಸುತ್ತಿದ್ದಾಗ ಹಲವಾರು ಕೋತಿಗಳು ಇದ್ದಕ್ಕಿದ್ದಂತೆ ಅವರ ಸುತ್ತಲೂ ಒಟ್ಟುಗೂಡಿದವು ಎಂದು ಪೊಲೀಸರು ತಿಳಿಸಿದ್ದಾರೆ.

"ಮಂಗಗಳು ಅವಳಲ್ಲಿ ಭಯವನ್ನು ಉಂಟುಮಾಡಿದಂತೆ ತೋರುತ್ತದೆ. ನಾವು ತನಿಖೆ ನಡೆಸುತ್ತಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು NDTV ಗೆ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಅನಿತಾ ಭಯಭೀತಳಾಗಿ ತನ್ನ ಸಮತೋಲನವನ್ನು ಕಳೆದುಕೊಂಡು ಬೆಟ್ಟದ ತುದಿಯಿಂದ ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದರು.

ಎಲ್ಲಾ ಆಯಾಮಗಳಿಂದ ತನಿಖೆ

ಮೊದಲು ಆಕೆಯ ಪತಿ ಕಣ್ಣೆದುರೇ ಆದ ಈ ಘಟನೆ ಕಂಡು ಭಯಭೀತರಾದರು. ಪತ್ನಿಯ ದೇಹದ ಪಕ್ಕದಲ್ಲಿ ದುಃಖಿಸುತ್ತಿರುವ ಅವರ ನೋವು ಎಂಥವರನ್ನೂ ಕರಗಿಸುವಂತಿತ್ತು. ಕಜುಗುಮಲೈನ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ, ಪೊಲೀಸರೊಂದಿಗೆ, ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಸದ್ಯ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಕೋತಿ ನೋಡಿ ಕಾಲು ಜಾರಿ ಬಿದ್ದದ್ದಾ ಅಥವಾ ಇದರ ಹಿಂದೆ ಇನ್ನೇನಾದರೂ ಘಟನೆ ಇದೆಯಾ ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.