ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರ ಬೇಹುಗಾರಿಕೆ ನಡೆಸಿದ ಪ್ರಕರಣದಲ್ಲಿ ಬ್ರಹ್ಮೋಸ್‌ನ ಮಾಜಿ ಇಂಜಿನಿಯರ್ ನಿಶಾಂತ್ ಅಗರ್ವಾಲ್‌ ವಿರುದ್ಧದ ಆರೋಪ ಸಾಬೀತಾಗಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಾಗಪುರದ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರ ಬೇಹುಗಾರಿಕೆ ನಡೆಸಿದ ಪ್ರಕರಣದಲ್ಲಿ ಬ್ರಹ್ಮೋಸ್‌ನ ಮಾಜಿ ಇಂಜಿನಿಯರ್ ನಿಶಾಂತ್ ಅಗರ್ವಾಲ್‌ ವಿರುದ್ಧದ ಆರೋಪ ಸಾಬೀತಾಗಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಾಗಪುರದ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. 2018ರಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ಮಾಜಿ ಇಂಜಿನಿಯರ್ ನಿಶಾಂತ್ ಅಗರ್ವಾಲ್‌ನನ್ನು ಪಾಕಿಸ್ತಾನದ ಪರ ಬೇಗುಗಾರಿಕೆ ನಡೆಸಿದ ಆರೋಪದಡಿ ಬಂಧಿಸಲಾಗಿತ್ತು. ನಿಶಾಂತ್ ಅಗರ್ವಾಲ್‌ ವಿರುದ್ಧ ಬ್ರಹ್ಮೋಸ್ ಕ್ಷಿಪಣಿ ಬಗ್ಗೆ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ನೀಡಿದ ಆರೋಪವಿದೆ. 

Add Asianetnews Kannada as a Preferred SourcegooglePreferred

ನಿಶಾಂತ್ ಅಗರ್ವಾಲ್ ಅವರು ಬ್ರಹ್ಮೋಸ್ ಏರೋಸ್ಪೇಸ್‌ನಲ್ಲಿ ಸಿಸ್ಟಮ್ ಇಂಜಿನಿಯರ್ ಆಗಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಬ್ರಹ್ಮೋಸ್ ಏರೋಸ್ಪೇಸ್‌ ಭಾರತದ ಡಿಆರ್‌ಡಿಒ ಹಾಗೂ ರಷ್ಯಾದ ಎನ್‌ಪಿಒ ಮಶಿನೊಸ್ಟ್ರೊಯೆನಿಯ( NPO Mashinostroyenia) ಜಂಟಿ ಸಹಯೋಗದಲ್ಲಿ ಭಾರತದ ಸೂಪರ್‌ ಸಾನಿಕ್ ಕ್ರೂಸ್ ಕ್ಷಿಪಣಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸ್ಥಾಪಿತವಾದ ಸಂಸ್ಥೆಯಾಗಿತ್ತು. ಸೂಪರ್‌ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ನೆಲ, ವಾಯು, ಸಮುದ್ರ ಮತ್ತು ಜಲಂತರ್ಗಾಮಿಯಾಗಿಯೂ ಪ್ರಯೋಗಿಸಬಹುದಾಗಿದೆ.

ಇನ್ಮುಂದೆ ಬ್ರಹ್ಮೋಸ್‌ ಕ್ಷಿಪಣಿಗೆ ಮೇಡ್‌ ಇನ್‌ ಇಂಡಿಯಾ ಬೂಸ್ಟರ್‌!

ಆದರೆ ಈ ವಿಚಾರಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ನೆರೆಯ ಶತ್ರು ದೇಶಕ್ಕೆ ನೀಡಿದ ಆರೋಪ ನಿಶಾಂತ್ ಅಗರ್ವಾಲ್ ಮೇಲಿದ್ದು, ಅದೀಗ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸೆಷನ್ ಕೋರ್ಟ್ ಜಡ್ಜ್ ಎಂವಿ ದೇಶಪಾಂಡೆ ಅವರು ಈ ಪ್ರಕರಣದಲ್ಲಿ ಐಟಿ ಕಾಯ್ದೆಯ ಸೆಕ್ಷನ್ 66 (F) ಮತ್ತು ಅಧಿಕೃತ ರಹಸ್ಯ ಕಾಯ್ದೆಯ ( OSA)ಹಲವು ಸೆಕ್ಷನ್‌ಗಳನ್ನು ನಿಶಾಂತ್ ಅಗರ್ವಾಲ್ ಉಲ್ಲಂಘಿಸಿದ್ದು, ಹೀಗಾಗಿ ಕ್ರಿಮಿನಲ್ ಪೊಸಿಜರ್ ಕೋಡ್‌ ಸೆಕ್ಷನ್ 235ರ ಪ್ರಕಾರ ಅಗರ್ವಾಲ್ ತಪ್ಪಿತಸ್ಥ ಎಂದು ಘೋಷಿಸಿದ್ದರು.

ಅಧಿಕೃತ ರಹಸ್ಯ ಕಾಯಿದೆಯಡಿ ನಾಗಪುರ ಜಿಲ್ಲಾ ನ್ಯಾಯಾಲಯವು ಅಗರ್ವಾಲ್‌ಗೆ ಜೀವಾವಧಿ ಶಿಕ್ಷೆ ಮತ್ತು 14 ವರ್ಷಗಳ ಕಾಲ ಆರ್‌ಐ ಮತ್ತು 3,000 ರೂ. ದಂಡ ವಿಧಿಸಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಜ್ಯೋತಿ ವಜಾನಿ ಮಾಹಿತಿ ನೀಡಿದ್ದಾರೆ. ಆದರೆ ಕಳೆದ ಏಪ್ರಿಲ್‌ನಲ್ಲಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಅಗರ್ವಾಲ್‌ಗೆ ಜಾಮೀನು ನೀಡಿತ್ತು ಎಂಬುದು ಗಮನಿಸಬೇಕಾದ ವಿಚಾರವಾಗಿದೆ.

ಚೀನಾದ ಮೇಲೆ ಹದ್ದಿನ ಕಣ್ಣು, ಫಿಲಿಪ್ಪಿನ್ಸ್‌ಗೆ ಮೊದಲ ಬ್ಯಾಚ್‌ನ ಬ್ರಹ್ಮೋಸ್‌ ಕ್ಷಿಪಣಿ ರವಾನಿಸಿದ ಭಾರತ!

2018ರಲ್ಲಿ ಬೆಳಕಿಗೆ ಬಂದ ಈ ಪ್ರಕರಣ ಬ್ರಹ್ಮೋಸ್ ಏರೋಸ್ಪೇಸ್‌ ಮೇಲೆ ಪರಿಣಾಮ ಬೀರಿದ ಮೊದಲ ಬೇಹುಗಾರಿಕೆ ಪ್ರಕರಣ ಎನಿಸಿದೆ, ಪಾಕಿಸ್ತಾನದ ಗುಪ್ತಚರ ಏಜೆಂಟರು ಎನ್ನಲಾದ ನೇಹಾ ಶರ್ಮಾ ಮತ್ತು ಪೂಜಾ ರಂಜನ್ ಎಂಬ ಎರಡು ಫೇಸ್‌ಬುಕ್ ಖಾತೆಯೊಂದಿಗೆ ಅಗರ್ವಾಲ್ ಬ್ರಹ್ಮೋಸ್ ಬಗ್ಗೆಗಿನ ಮಾಹಿತಿ ಹಂಚಿಕೊಂಡಿದ್ದರು. ಬಂಧಿತ ನಿಶಾಂತ್ ಅಗರ್ವಾಲ್, ಈ ಹಿಂದೆ ಡಿಆರ್‌ಡಿಒದಿಂದ ಯುವ ವಿಜ್ಞಾನಿ ಪ್ರಶಸ್ತಿ ಪಡೆದಿದ್ದರು. ಆದರೆ ಅವರು ಬೇಹುಗಾರಿಕೆಯಲ್ಲಿ ತೊಡಗಿದ್ದಾರೆ ಎಂಬ ವಿಚಾರ ಅವರ ಸ್ನೇಹಿತರು ಸೇರಿದಂತೆ ಬಹುತೇಕ ಎಲ್ಲರನ್ನು ತೀವ್ರ ಅಚ್ಚರಿ ಆಘಾತಕ್ಕೀಡು ಮಾಡಿತ್ತು. 

ಪ್ರತಿಭಾವಂತ ಇಂಜಿನಿಯರ್ ಎನಿಸಿರುವ ಅಗರ್ವಾಲ್ ಕುರುಕ್ಷೇತ್ರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯಲ್ಲಿ ಶಿಕ್ಷಣ ಪಡೆದಿದ್ದರು. ಆದರೆ ತಾವು ಅತೀ ಗೌಪ್ಯವಾಗಿರಬೇಕಾದಂತಹ ಸೂಕ್ಷ್ಮವಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೂ, ಇಂಟರ್‌ನೆಟ್‌ನಲ್ಲಿ ಅವರ ಸಡಿಲ ಮಾತು ವರ್ತನೆ ಅವರನ್ನು ದುರ್ಬಲ ಮತ್ತು ಸುಲಭವಾಗಿ ತುತ್ತಾಗುವಂತೆ ಮಾಡಿದೆ ಎಂಬುದನ್ನು ತನಿಖಾಧಿಕಾರಿಗಳು ಗುರುತಿಸಿದ್ದಾರೆ ಎಂದು ವರದಿ ಆಗಿದೆ.