Asianet Suvarna News Asianet Suvarna News

ಸೂಡಾನ್‌ನಲ್ಲಿ ವಾಯುಪಡೆ ರಾತ್ರಿ ಸಾಹಸ: ವಿಮಾನ ಇಳಿಯಲೂ ಕಷ್ಟವಾದ ಸ್ಥಳದಲ್ಲಿ ಲ್ಯಾಂಡಿಂಗ್ ಮಾಡಿ 121 ಜನರ ರಕ್ಷಣೆ

ಸೂಡಾನ್‌ನಲ್ಲಿ ಸಿಕ್ಕಿಬಿದ್ದ ಭಾರತೀಯರ ರಕ್ಷಣೆಗಾಗಿ ಭಾರತ ಸರ್ಕಾರ ಆಪರೇಷನ್‌ ಕಾವೇರಿ ಹೆಸರಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಇದರ ಭಾಗವಾಗಿ ರಕ್ಷಿಸಿದವರನ್ನು ಹಡಗು ಮತ್ತು ವಿಮಾನದ ಮೂಲಕ ಸೂಡಾನ್‌ನಿಂದ ಸೌದಿ ಅರೇಬಿಯಾದ ಜೆಡ್ಡಾಗೆ ಕರೆತಂದು, ಅಲ್ಲಿಂದ ಭಾರತಕ್ಕೆ ಕರೆ ತರಲಾಗುತ್ತಿದೆ.

small airstrip with no landing lights how iaf rescued 121 indians in daring night mission in sudan ash
Author
First Published Apr 29, 2023, 9:30 AM IST

ನವದೆಹಲಿ (ಏಪ್ರಿಲ್ 29, 2023): ಸೂಡಾನ್‌ನಲ್ಲಿ ಸಿಕ್ಕಿಬಿದ್ದ ಭಾರತೀಯರ ತೆರವಿಗೆ ಕಳೆದ 4 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ವಾಯುಪಡೆ, ಗುರುವಾರ ತಡರಾತ್ರಿ ಅತ್ಯಂತ ಸಾಹಸಮಯ ಕಾರ್ಯಾಚರಣೆ ಮೂಲಕ 121 ಜನರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಹೀಗೆ ರಕ್ಷಣೆಗೆ ಒಳಗಾದವರಲ್ಲಿ ವೈದ್ಯರು, ಗರ್ಭಿಣಿ ಕೂಡಾ ಸೇರಿದ್ದಾರೆ. ವಾಯುಪಡೆ ಸಿಬ್ಬಂದಿ ಈ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಹಾಲಿ ಸೂಡಾನ್‌ ರಾಜಧಾನಿ ಖಾರ್ಟೋಮ್‌ನಲ್ಲಿ ಭಾರೀ ಕಾಳಗ ನಡೆಯುತ್ತಿರುವ ಕಾರಣ ಅಲ್ಲಿನ ವಾಯುಸೀಮೆ ಮುಚ್ಚಲಾಗಿದೆ. ಹೀಗಾಗಿ ಸುತ್ತಮುತ್ತಲ ಪ್ರದೇಶಗಳ ಜನರ ರಕ್ಷಣೆಗೆ ವಾಯುಪಡೆ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಅದರನ್ವಯ ಖಾರ್ಟೋಮ್‌ನಿಂದ 40 ಕಿ.ಮೀ ದೂರದಲ್ಲಿರುವ ವಾಡಿ ಸಯಿದ್ನಾ ಎಂಬಲ್ಲಿ ಸಣ್ಣದೊಂದು ಏರ್‌ಸ್ಟ್ರಿಪ್‌ನಲ್ಲಿ ವಿಮಾನ ಇಳಿಸಲು ನಿರ್ಧರಿಸಲಾಗಿತ್ತು. ಆದರೆ ಈ ಏರ್‌ಸ್ಟ್ರಿಪ್‌ನಲ್ಲಿ ವಿಮಾನ ರನ್‌ವೇ ಸಣ್ಣಪುಟ್ ಟಗುಂಡಿಗಳಿಂದ ಕೂಡಿದ್ದು ಇಳಿಸಲು ಸೂಕ್ತವಾಗಿರಲ್ಲ. ಜೊತೆಗೆ ವಿಮಾನ ಇಳಿಸಲು ನೆರವಾಗುವ ನ್ಯಾವಿಗೇಷನ್‌ ನೆರವೂ ಇರಲಿಲ್ಲ, ಅಗತ್ಯ ಬಿದ್ದರೆ ಯಾವುದೇ ಇಂಧನವೂ ಸಿಗದಂಥ ಪರಿಸ್ಥಿತಿ. ಎಲ್ಲಕ್ಕಿಂತ ಹೆಚ್ಚಾಗಿ ವಿಮಾನ ಇಳಿಯುವಾಗ ರನ್‌ವೇನಲ್ಲಿ ನೆರವಾಗುವ ಲ್ಯಾಂಡಿಂಗ್‌ ಲೈಟ್‌ ಸೌಲಭ್ಯವೂ ಇರಲಿಲ್ಲ.

ಇದನ್ನು ಓದಿ: ಎದೆಗೆ ಗನ್ನಿಟ್ಟು ನಮ್ಮ ಬಳಿ ಇದ್ದುದ್ದನ್ನೆಲ್ಲ ದೋಚಿದ್ರು: ಸೂಡಾನ್‌ನಿಂದ ಪಾರಾದ ಭಾರತೀಯರ ಸಂಕಷ್ಟ ಕಥನ

ಇದೆಲ್ಲದರ ಹೊರತಾಗಿಯೂ ಭಾರತೀಯ ವಾಯುಪಡೆಯ ಸಿ-130ಜೆ ವಿಮಾನದ ಪೈಲಟ್‌ಗಳು ವಿಮಾನದಲ್ಲಿನ ಎಲೆಕ್ಟ್ರೋ- ಆಪ್ಟಿಕಲ್‌/ ಇನ್ಫ್ರಾ ರೆಡ್‌ ಸೆನ್ಸರ್‌ಗಳನ್ನು ಬಳಸಿಕೊಂಡು, ರನ್‌ವೇನಲ್ಲಿ ವಿಮಾನಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಖಚಿತಪಡಿಸಿಕೊಂಡು ವಿಮಾನ ಇಳಿಸಿದ್ದಾರೆ. ಈ ವೇಳೆ ನೈಟ್‌ ವಿಷನ್‌ ಕನ್ನಡಕ ಹಾಕಿಕೊಂಡು ಸರಾಗವಾಗಿ ವಿಮಾನ ಸಂಚಾರ ನಡೆಸಿದ್ದಾರೆ.

ಹೀಗೆ ವಿಮಾನ ಇಳಿದ ಕೂಡಲೇ ವಾಯುಪಡೆಯ 8 ಗರುಡಾ ಕಮಾಂಡೋಗಳು ಎಲ್ಲಾ 121 ಭಾರತೀಯರನ್ನು ವಿಮಾನಕ್ಕೆ ಹತ್ತಿಸಿಕೊಂಡು ಅವರ ಲಗೇಜ್‌ಗಳನ್ನು ವಿಮಾನ ತುಂಬಿ ಸಾಧ್ಯವಾದಷ್ಟು ಶೀಘ್ರವೇ ವಿಮಾನ ಸ್ಥಳದಿಂದ ತೆರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ಎರಡೂವರೆ ಗಂಟೆಯಲ್ಲಿ ಇಡೀ ಕಾರ್ಯಾಚರಣೆ ಮುಗಿಸಿ 121 ಜನರನ್ನು ಜೆಡ್ಡಾಕ್ಕೆ ಸುರಕ್ಷಿತವಾಗಿ ಕರೆತಂದಿದ್ದಾರೆ.

ಇದನ್ನೂ ಓದಿ: ಸೂಡಾನ್‌ನಲ್ಲಿ ಸಿಕ್ಕಿಬಿದ್ದ ಕನ್ನಡಿಗರು ಸೇರಿ 3000 ಭಾರತೀಯರ ರಕ್ಷಣೆಗೆ ಏರ್‌ಲಿಫ್ಟ್‌ ಮಾಡಲು ಮೋದಿ ಸೂಚನೆ

ಸೂಡಾನ್‌ನಿಂದ 1360 ಭಾರತೀಯರ ರಕ್ಷಣೆ
ಆಂತರಿಕ ಯುದ್ಧಪೀಡಿತ ಸೂಡಾನ್‌ನಲ್ಲಿ ಸಿಕ್ಕಿಬಿದ್ದಿದ್ದ ಮತ್ತೆ 754 ಭಾರತೀಯರನ್ನು ರಕ್ಷಿಸಿ, ಶುಕ್ರವಾರ ಸುರಕ್ಷಿತವಾಗಿ ತವರಿಗೆ ಕರೆ ತರಲಾಗಿದೆ. ಈ ಪೈಕಿ 392 ಜನರ ಹೊತ್ತ ಒಂದು ವಿಮಾನ ದೆಹಲಿಗೆ ಬಂದಿಳಿದಿರೆ, 392 ಜನರ ಹೊತ್ತ ಮತ್ತೊಂದು ವಿಮಾನ ಬೆಂಗಳೂರಿಗೆ ಬಂದಿಳಿಸಿದೆ.

ಇದರೊಂದಿಗೆ ಕಳೆದ ಮೂರು ದಿನಗಳಲ್ಲಿ ಭಾರತಕ್ಕೆ ಕರೆತಂದವರ ಸಂಖ್ಯೆ 1360ಕ್ಕೆ ಏರಿದೆ. ಬುಧವಾರ ಮೊದಲ ಹಂತದಲ್ಲಿ 360 ಜನರನ್ನ ಕರೆತರಲಾಗಿತ್ತು. ಗುರುವಾರ ಮತ್ತೆ 246 ಜನರನ್ನು ತವರಿಗೆ ತರಲಾಗಿತ್ತು.

ಇದನ್ನೂ ಓದಿ: ಸುಡಾನ್‌ನಲ್ಲಿ ಸಿಲುಕಿದ ಭಾರತೀಯರ ರಕ್ಷಣಾ ಕಾರ್ಯಾಚರಣೆ, ಐಎಎಫ್‌ನ ಏಕೈಕ C-17 ಮಹಿಳಾ ಪೈಲಟ್ ಭಾಗಿ

ಸೂಡಾನ್‌ನಲ್ಲಿ ಸಿಕ್ಕಿಬಿದ್ದ ಭಾರತೀಯರ ರಕ್ಷಣೆಗಾಗಿ ಭಾರತ ಸರ್ಕಾರ ಆಪರೇಷನ್‌ ಕಾವೇರಿ ಹೆಸರಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಇದರ ಭಾಗವಾಗಿ ರಕ್ಷಿಸಿದವರನ್ನು ಹಡಗು ಮತ್ತು ವಿಮಾನದ ಮೂಲಕ ಸೂಡಾನ್‌ನಿಂದ ಸೌದಿ ಅರೇಬಿಯಾದ ಜೆಡ್ಡಾಗೆ ಕರೆತಂದು, ಅಲ್ಲಿಂದ ಭಾರತಕ್ಕೆ ಕರೆ ತರಲಾಗುತ್ತಿದೆ. ಸೂಡಾನ್‌ನಲ್ಲಿ ಕನಿಷ್ಠ 3500 ಭಾರತೀಯರು ಮತ್ತು 1000ಕ್ಕೂ ಹೆಚ್ಚು ಭಾರತೀಯ ಮೂಲದ ಸೂಡಾನ್‌ ಪ್ರಜೆಗಳಿದ್ದಾರೆ.

ಅಧಿಕಾರಕ್ಕಾಗಿ ಸೂಡಾನ್‌ನಲ್ಲಿ ಸೇನೆ ಹಾಗು ಅರೆಸೇನಾಪಡೆಗಳ ಮಧ್ಯೆ ಏರ್ಪಟ್ಟಿರುವ ಕಾಳಗದಲ್ಲಿ ಈಗಾಗಲೇ 400 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಇನ್ನೆಂದೂ ಸೂಡಾನ್‌ಗೆ ಹೋಗಲ್ಲ: ಭಾರತದಲ್ಲೇ ಬದುಕುವೆ ಎಂದ ತವರಿಗೆ ಮರಳಿದ ವ್ಯಕ್ತಿ

Follow Us:
Download App:
  • android
  • ios