Asianet Suvarna News Asianet Suvarna News

ಎದೆಗೆ ಗನ್ನಿಟ್ಟು ನಮ್ಮ ಬಳಿ ಇದ್ದುದ್ದನ್ನೆಲ್ಲ ದೋಚಿದ್ರು: ಸೂಡಾನ್‌ನಿಂದ ಪಾರಾದ ಭಾರತೀಯರ ಸಂಕಷ್ಟ ಕಥನ

ಅರೆಸೇನಾ ಸೈನಿಕರು ಒಳಗೆ ಬಂದು ನಮ್ಮನ್ನು ಲೂಟಿ ಮಾಡಿದರು. ಸುಮಾರು 8 ಗಂಟೆಗಳ ಕಾಲ ಅವರು ನಮ್ಮನ್ನು ಬಂಧಿಯಾಗಿಟ್ಟುಕೊಂಡಿದ್ದರು ಎಂದು ಸೂಡಾನ್‌ನಿಂದ ಬಂದವರು ಹೇಳಿದ್ದಾರೆ. 

could die any moment family rescued from sudan recounts trauma ash
Author
First Published Apr 27, 2023, 7:59 AM IST

ನವದೆಹಲಿ (ಏಪ್ರಿಲ್ 27, 2023): ಸೂಡಾನ್‌ನಲ್ಲಿ ನಡೆಯುತ್ತಿರುವ ಘರ್ಷಣೆ ಅತ್ಯಂತ ತೀವ್ರವಾಗಿತ್ತು. ಅಲ್ಲಿ ಅರೆಸೇನಾ ಪಡೆಯವರು ನಮ್ಮ ತಲೆಗೆ ಗನ್‌ ಇಟ್ಟು ಮೊಬೈಲ್‌, ಲ್ಯಾಪ್‌ಟಾಪ್‌ ಸೇರಿ ಅಮೂಲ್ಯ ವಸ್ತುಗಳನ್ನು ಲೂಟಿ ಮಾಡಿದರು ಎಂದು ಅಂತರ್ಯುದ್ಧ ಪೀಡಿತ ದೇಶದಿಂದ ರಕ್ಷಿಸಲ್ಪಟ್ಟ ಭಾರತೀಯರು ಹೇಳಿದ್ದಾರೆ. ಅಲ್ಲದೆ, ಒಂದು ದಿನದ ಆಹಾರ ಹುಡುಕಿಕೊಳ್ಳುವುದು ಸಹ ಕಷ್ಟವಾಗಿತ್ತು ಎಂದಿದ್ದಾರೆ.

ಸೂಡಾನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯರಲ್ಲಿ ಸುಮಾರು 278 ಭಾರತೀಯರನ್ನು ಮಂಗಳವಾರ ‘ಆಪರೇಶನ್‌ ಕಾವೇರಿ’ಯ ಮೂಲಕ ರಕ್ಷಿಸಲಾಯಿತು. ಈ ಪೈಕಿ ಒಬ್ಬರು ಮಾಧ್ಯಮಗಳ ಜತೆ ಮಾತನಾಡಿ, ‘ಸೂಡಾನ್‌ನಲ್ಲಿನ ಪರಿಸ್ಥಿತಿ ಬಹಳ ಭೀಕರವಾಗಿದೆ. ನಾವು ಪ್ರತಿದಿನ ಆಹಾರ ಒದಗಿಸಿಕೊಳ್ಳಲು ಕಷ್ಟಪಡುತ್ತಿದ್ದೆವು. ಇದು ಎರಡು ಮೂರು ದಿನಗಳವರೆಗೆ ಮುಂದುವರೆದಿತ್ತು’ ಎಂದರು.

ಇದನ್ನು ಓದಿ: ಸೂಡಾನ್‌ನಲ್ಲಿ ಸಿಕ್ಕಿಬಿದ್ದ ಕನ್ನಡಿಗರು ಸೇರಿ 3000 ಭಾರತೀಯರ ರಕ್ಷಣೆಗೆ ಏರ್‌ಲಿಫ್ಟ್‌ ಮಾಡಲು ಮೋದಿ ಸೂಚನೆ

‘ಸೂಡಾನ್‌ನ ಅರೆಸೇನಾ ಪಡೆ ನೆಲೆಯ ಪಕ್ಕದಲ್ಲೇ ನಮ್ಮ ಟೆಂಟ್‌ ನಿರ್ಮಾಣ ಮಾಡಿತ್ತು. ನಾವು ಅದರಲ್ಲೇ ಉಳಿದುಕೊಂಡಿದ್ದೆವು. ಸುಮಾರು 9 ಗಂಟೆಗೆ ಅರೆಸೇನಾ ಸೈನಿಕರು ಒಳಗೆ ಬಂದು ನಮ್ಮನ್ನು ಲೂಟಿ ಮಾಡಿದರು. ಸುಮಾರು 8 ಗಂಟೆಗಳ ಕಾಲ ಅವರು ನಮ್ಮನ್ನು ಬಂಧಿಯಾಗಿಟ್ಟುಕೊಂಡಿದ್ದರು. ನಮ್ಮ ಎದೆಗೆ ರೈಫಲ್‌ಗಳನ್ನು ಗುರಿಯಿಟ್ಟು, ಮೊಬೈಲ್‌, ಲ್ಯಾಪ್‌ಟಾಪ್‌ ಸೇರಿದಂತೆ ನಮ್ಮ ಬಳಿ ಇದ್ದ ಎಲ್ಲಾ ವಸ್ತುಗಳನ್ನು ಲೂಟಿ ಮಾಡಿದರು’ ಎಂದು ಮತ್ತೊಬ್ಬರು ಹೇಳಿದರು.

‘ಆದಾಗ್ಯೂ ನಾವು ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆವು. ಸುದೈವವಶಾತ್‌ ನಮ್ಮ ಬಳಿ ಡೀಸೆಲ್‌ ಸಂಗ್ರಹ ಇತ್ತು. ಆದರೆ ಬಸ್‌ ಇರಲಿಲ್ಲ. ಹೀಗಾಗಿ ಇಲ್ಲಿಂದ ಹೊರ ಹೋಗಲು ನಮಗೆ ಬಸ್‌ ವ್ಯವಸ್ಥೆ ಮಾಡುವಂತೆ ರಾಯಭಾರ ಕಚೇರಿಗೆ ಕೋರಿದ್ದೆವು. ಅದರಂತೆ ಬಸ್‌ ಕಳಿಸಿದರು. ಬಳಿಕ ಆಗಮಿಸಿದ ಭಾರತೀಯ ನೌಕಾಪಡೆ, ನಮ್ಮನ್ನು ಚೆನ್ನಾಗಿ ನೋಡಿಕೊಂಡಿತು’ ಎಂದು ಬದುಕಿ ಬಂದವರು ತಮ್ಮ ಕಥಾನಕ ವಿವರಿಸಿದರು.

ಇದನ್ನೂ ಓದಿ: Operation Kaveri: ಸೂಡಾನ್‌ನಿಂದ ಕರ್ನಾಟಕದ 210 ಹಕ್ಕಿಪಿಕ್ಕಿಗಳ ರಕ್ಷಣೆ ಶುರು..!

ಸೂಡಾನ್‌ನಿಂದ ಈವರೆಗೆ 561 ಭಾರತೀಯರ ರಕ್ಷಣೆ
ಜೆಡ್ಡಾ: ಆಂತರಿಕ ಸಂಘರ್ಷ ಪೀಡಿತ ಸೂಡಾನ್‌ನಲ್ಲಿ ಸಿಕ್ಕಿಬಿದ್ದ 3000ಕ್ಕೂ ಹೆಚ್ಚು ಭಾರತೀಯರ ಪೈಕಿ ಇದುವರೆಗೂ 561 ಜನರನ್ನು ‘ಆಪರೇಶನ್‌ ಕಾವೇರಿ’ ಕಾರ್ಯಾಚರಣೆ ಮೂಲಕ ರಕ್ಷಿಸಿ ಸೌದಿ ಅರೇಬಿಯಾದ ಜೆಡ್ಡಾಗೆ ಕರೆ ತರಲಾಗಿದೆ. ಅಲ್ಲಿಂದ ಇವರನ್ನು ಶೀಘ್ರವೇ ನವದೆಹಲಿಗೆ ಕರೆ ತರಲಾಗುತ್ತದೆ.

ಮೊದಲ ಬ್ಯಾಚ್‌ನಲ್ಲಿ 278 ಜನರನ್ನು ರಕ್ಷಣೆ ಮಾಡಿ ಪೋರ್ಟ್‌ ಸೂಡಾನ್‌ ಬಂದರಿನಿಂದ ಹೊರಟಿದ್ದ ಐಎನ್‌ಎಸ್‌ ಸುಮೇಧ ನೌಕೆ ಬುಧವಾರ ಜೆಡ್ಡಾಗೆ ಬಂದಿಳಿದಿದೆ. ಎರಡನೇ ಬ್ಯಾಚ್‌ನಲ್ಲಿ 148 ಜನರನ್ನು ಐಎಎಫ್‌ ಸಿ-130ಜೆ ವಿಮಾನದ ಮೂಲಕ ರಕ್ಷಿಸಿ ಅವರನ್ನೂ ಜೆಡ್ಡಾಗೆ ಕರೆತರಲಾಗಿದೆ. ಬುಧವಾರ ಮೂರನೇ ತಂಡದಲ್ಲಿ 135 ಜನರನ್ನು ರಕ್ಷಣೆ ಮಾಡಿ ವಿಮಾನದ ಮೂಲಕ ಜೆಡ್ಡಾಗೆ ಕರೆತರಲಾಗಿದೆ.ಜೆಡ್ಡಾಗೆ ಬಂದಿಳಿದ ಭಾರತೀಯರನ್ನು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್‌ ಸ್ವಾಗತಿಸಿದರು.

ಇದನ್ನೂ ಓದಿ: ಸೂಡಾನ್‌ ಹಿಂಸಾಚಾರಕ್ಕೆ ಭಾರತೀಯ ಸೇರಿ 56 ನಾಗರಿಕರು ಬಲಿ

‘ಆಪರೇಷನ್‌ ಕಾವೇರಿ ಅತ್ಯಂತ ಭರವಾಗಿ ಸಾಗಿದೆ. ಇದುವರೆಗೆ ಮೂರು ಬ್ಯಾಚ್‌ಗಳಲ್ಲಿ ಒಟ್ಟು 561 ಜನರನ್ನು ರಕ್ಷಣೆ ಮಾಡಲಾಗಿದೆ’ ಎಂದು ವಿದೇಶಾಂಗ ಸಚಿವಾಲಯ ಟ್ವೀಟ್‌ ಮೂಲಕ ಮಾಹಿತಿ ನೀಡಿದೆ. ಆಪರೇಷನ್‌ ಕಾವೇರಿ ಕಾರ್ಯಾಚರಣೆಗಾಗಿ ಭಾರತೀಯ ವಾಯುಪಡೆಯ ಸಿ-130ಜೆ ವಿಮಾನ, ಐಎನ್‌ಎಸ್‌ ಸುಮೇಧ, ಐಎನ್‌ಎಸ್‌ ತೇಗ್‌ ನೌಕೆಗಳನ್ನು ಬಳಸಿಕೊಳ್ಳಲಾಗುತ್ತಿದೆ.

360 ಭಾರತೀಯರ ಮೊದಲ ತಂಡ ದಿಲ್ಲಿಗೆ
ನವದೆಹಲಿ: ಆಂತರಿಕ ಯುದ್ಧಪೀಡಿತ ಸೂಡಾನ್‌ನಿಂದ 360 ಭಾರತೀಯರನ್ನು ಹೊತ್ತ ವಿಮಾನ ದೆಹಲಿಗೆ ಬುಧವಾರ ರಾತ್ರಿ ಆಗಮಿಸಿದೆ. ಇದು ರಕ್ಷಣೆಗೆ ಒಳಗಾದ ಮೊದಲ ಬಾರತೀಯರ ತಂಡವಾಗಿದೆ. ‘ಆಪರೇಶನ್‌ ಕಾವೇರಿ’ ಹೆಸರಿನ ರಕ್ಷಣಾ ಕಾರ್ಯಾಚರಣೆ ಅಂಗವಾಗಿ ಸೂಡಾನ್‌ನಿಂದ ಸೌದಿಯ ಜೆಡ್ಡಾಗೆ ಹಡಗಿನಲ್ಲಿ ಬಂದಿದ್ದ ಈ ತಂಡವನ್ನು ವಾಯುಪಡೆ ವಿಮಾನದ ಮೂಲಕ ದಿಲ್ಲಿಗೆ ಕರೆತರಲಾಗಿದೆ.

Follow Us:
Download App:
  • android
  • ios