ಅಸ್ಸಾಂ ವಿಮಾನ ದುರಂತದಲ್ಲಿ ಹುತಾತ್ಮರಾದ ಪೈಲಟ್ ಶುಭಂ ಕುಮಾರ್ ಅವರ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿದೆ. ಅವರಿಗೆ ಸಿಗಬೇಕಿದ್ದ 21 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು, ತಮ್ಮನ್ನು ಪತ್ನಿ ಎಂದು ಹೇಳಿಕೊಂಡ ಅವರ ಸ್ನೇಹಿತೆ ಪಡೆದು ಪರಾರಿಯಾಗಿದ್ದಾರೆ ಎಂದು ಕುಟುಂಬ ಆರೋಪಿಸಿದೆ.

ಅಸ್ಸಾಂನಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಹುತಾತ್ಮರಾಗಿರುವ ಭಾರತೀಯ ವಾಯುಪಡೆಯ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಶುಭಂ ಕುಮಾರ್ ಅವರ ಕುಟುಂಬವೀಗ ಭಾರಿ ಆರ್ಥಿಕ ಸಂಕಷ್ಟದಲ್ಲಿ ಮುಳುಗಿದೆ. ಇದಕ್ಕೆ ಕಾರಣ, ಅವರಿಗೆ ಸಿಕ್ಕ 21 ಲಕ್ಷ ರೂಪಾಯಿಗಳ ಪರಿಹಾರದ ಮೊತ್ತವನ್ನು ಅವರ ಸ್ನೇಹಿತೆ ಪಡೆದು ಪರಾರಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಶುಭಂ ಕುಟುಂಬದಲ್ಲಿ ಒಬ್ಬರೇ ಸಂಪಾದಿಸುತ್ತಿದ್ದರು, ಅವರ ಹಠಾತ್ ಸಾವು ಈಗ ಕುಟುಂಬಕ್ಕೆ ದುಃಖದಲ್ಲಿ ಮುಳುಗಿರುವುದಾಗಿ ತಂದೆ ಅಮರೇಂದ್ರ ಶರ್ಮಾ ಹೇಳಿದ್ದಾರೆ. ಶುಭಂ ಕುಮಾರ್ ಅವರ ಸ್ನೇಹಿತೆ ಪರಿಹಾರವಾಗಿ ಬಂದ 21 ಲಕ್ಷ ರೂಪಾಯಿ ಚೆಕ್ ಜೊತೆ ಓಡಿಹೋಗಿದ್ದರಿಂದ ಕುಟುಂಬ ಆಘಾತದಲ್ಲಿದೆ. ಅವರು ಪತ್ನಿಯೆಂದು ಬಂದಿದ್ದು, ಇವರು ಮದುವೆಯಾಗಿಲ್ಲ ಎನ್ನುವುದು ಕುಟುಂಬಸ್ಥರ ಆರೋಪ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಗಿದ್ದೇನು?

ಶುಭಂ ಕುಮಾರ್ ಅವರ ಕುಟುಂಬ ನೀಡಿದ ಮಾಹಿತಿಯ ಪ್ರಕಾರ, ಶುಭಂ ಮತ್ತು ಶ್ರೇಯಾ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬಗಳು ಅವರ ಮದುವೆಗೆ ಅನುಮತಿ ನೀಡಿದ್ದವು. ಈ ವರ್ಷ ನವೆಂಬರ್‌ನಲ್ಲಿ ಅವರು ಮದುವೆಯಾಗಬೇಕಿತ್ತು. ಆದಾಗ್ಯೂ, ಶುಭಂ ಅವರ ಅಜ್ಜಿಯ ಮರಣದಿಂದಾಗಿ, ಮದುವೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಯಿತು. ಇದರ ಅರ್ಥ ಅವರು ಇನ್ನೂ ಮದುವೆಯಾಗಿರಲಿಲ್ಲ. ಅವರು ಮದುವೆಯಾಗಿ ಒಟ್ಟಿಗೇ ಇದ್ದರೋ ನಮಗೆ ಗೊತ್ತಿಲ್ಲ ಎಂದಿದ್ದಾರೆ ಕುಟುಂಬದವರು. "ನನ್ನ ಮಗ ಶ್ರೇಯಾಳನ್ನು ಮದುವೆಯಾಗಿದ್ದರೂ ಅವಳು ಚೆಕ್​ ತೆಗೆದುಕೊಂಡು ಹೋಗಿದ್ದರೆ ನಮಗೆ ಯಾವುದೇ ಅಭ್ಯಂತರವಿರಲಿಲ್ಲ. ಆದರೆ ಚೆಕ್ ಸಿಕ್ಕ ತಕ್ಷಣ ಅವಳು ಹೊರಟುಹೋದಳು. ಅವಳು ನಮ್ಮೊಂದಿಗೆ ಇದ್ದು ನಮಗೆ ಧೈರ್ಯ ತುಂಬಬಹುದಿತ್ತು. ಆದರೆ 21 ಲಕ್ಷ ಪಡೆದು ಹೊರಟು ಹೋಗಿಬಿಟ್ಟಿದ್ದಾಳೆ ಎಂದಿದ್ದಾರೆ.

ಬಿಹಾರಕ್ಕೆ ಬಂದಿದ್ದ ಶ್ರೇಯಾ

ಶುಭಂ ಕುಮಾರ್ ಅವರ ಸಾವಿನ ಸುದ್ದಿ ತಿಳಿದ ನಂತರ, ಅವರ ಪತ್ನಿ ಎಂದು ಹೇಳಿಕೊಂಡು ಶ್ರೇಯಾ ರೈ ಅಜಂಗಢದಿಂದ ಬಿಹಾರಕ್ಕೆ ಬಂದರು. ಅವರು ಶುಭಂ ಕುಮಾರ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಆದರೆ ಮುಂದೆ ನಡೆದದ್ದು ಶುಭಂ ಅವರ ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟು ಮಾಡಿತು. ಸುದ್ದಿ ವೆಬ್‌ಸೈಟ್ ಜಾಗರಣ್ ಪ್ರಕಾರ, ಹುಲಸ್‌ಗಂಜ್‌ನ ಸಿಒ ಶ್ರೇಯಾ ರೈ ಅವರಿಗೆ 21 ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದ್ದರು.

ಶುಭಂ ಅವರ ತಂದೆ ಅಮರೇಂದ್ರ ಶರ್ಮಾ ಅವರಿಗೆ ಈ ವಿಷಯ ತಿಳಿದಾಗ, ಅವರು ಸಿಒ ಅವರನ್ನು ಈ ಬಗ್ಗೆ ಕೇಳಿದಾಗ ಅವರು ಚೆಕ್ ಅನ್ನು ತಮ್ಮ ಪತ್ನಿಗೆ ನೀಡಿರುವುದಾಗಿ ಹೇಳಿದರು. ಆದರೆ ಆಕೆ ಮದುವೆಯಾಗಿದ್ದಾಳೋ ಇಲ್ಲವೋ ಗೊತ್ತಿಲ್ಲದೇ ಇರುವುದು ಒಂದೆಡೆಯಾದರೆ, 21 ಲಕ್ಷ ಪಡೆದು ಸದ್ದಿಲ್ಲದೇ ಹೊರಟು ಹೋಗಿರುವುದರಿಂದ ಕುಟುಂಬಕ್ಕೆ ದಿಕ್ಕೇ ತೋಚದಾಗಿದೆ.