ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯು ದೇಶದ ಕೇಂದ್ರ ಸರ್ಕಾರಿ ಆಸ್ಪತ್ರೆಯಲ್ಲೇ ಮೊದಲ ಬಾರಿಗೆ ಮಕ್ಕಳ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 11 ವರ್ಷದ ಬಾಲಕನಿಗೆ, ಅವನ ತಾಯಿಯೇ ದಾನ ಮಾಡಿದ ಮೂತ್ರಪಿಂಡ ಉಚಿತವಾಗಿ ಕಸಿ ಮಾಡಿ ಹೊಸ ಜೀವನ ನೀಡಲಾಗಿದೆ.

ನವದೆಹಲಿ (ನ.26): ದೆಹಲಿಯ ವಿಎಂಎಂಸಿ ಮತ್ತು ಸಫ್ದರ್‌ಜಂಗ್ ಆಸ್ಪತ್ರೆಯು ಮೂತ್ರಪಿಂಡ ಕಸಿ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ನವೆಂಬರ್ 19, 2025 ರಂದು ಆಸ್ಪತ್ರೆಯು ಮೊದಲ ಬಾರಿಗೆ ಮಕ್ಕಳ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. ಇದು ಕೇವಲ ಆಸ್ಪತ್ರೆಗೆ ಹೆಮ್ಮೆಯ ವಿಷಯವಲ್ಲ, ಬದಲಿಗೆ ದೇಶದ ಯಾವುದೇ ಕೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಮೊದಲ ಮಕ್ಕಳ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತರ ಪ್ರದೇಶದ ಸುಲ್ತಾನ್‌ಪುರದ 11 ವರ್ಷದ ಬಾಲಕನಿಗೆ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯ ಮೂಲಕ ಹೊಸ ಜೀವನ ಲಭಿಸಿದೆ.

Add Asianetnews Kannada as a Preferred SourcegooglePreferred

ತಾಯಿಯಿಂದ ಕಿಡ್ನಿ ದಾನ:

ಸುಮಾರು ಒಂದೂವರೆ ವರ್ಷದಿಂದ ಎರಡೂ ಕಡೆಯಲ್ಲೂ ಹೈಪೋಡಿಸ್ಪ್ಲಾಸ್ಟಿಕ್ ಮೂತ್ರಪಿಂಡ ಎಂಬ ಅಪರೂಪದ ಸ್ಥಿತಿಯಿಂದ ಬಳಲುತ್ತಿದ್ದ ಈ ಬಾಲಕನನ್ನು ಗಂಭೀರ ಸ್ಥಿತಿಯಲ್ಲಿ ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆಯ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದ ಅವನ ಎರಡೂ ಮೂತ್ರಪಿಂಡಗಳು ಸಂಪೂರ್ಣ ವಿಫಲವಾಗಿದ್ದು ದೃಢಪಟ್ಟಿತ್ತು. ಅಂದಿನಿಂದ ಬಾಲಕ ನಿಯಮಿತ ಡಯಾಲಿಸಿಸ್‌ಗೆ ಒಳಗಾಗಿದ್ದ. ಮಕ್ಕಳಲ್ಲಿ ವಯಸ್ಕರ ಮೂತ್ರಪಿಂಡವನ್ನು ಸಣ್ಣ ದೇಹಕ್ಕೆ ಅಳವಡಿಸುವುದು ಮತ್ತು ಅದನ್ನು ಸೂಕ್ಷ್ಮ ರಕ್ತನಾಳಗಳಿಗೆ ಸಂಪರ್ಕಿಸುವುದು ಅತ್ಯಂತ ಸವಾಲಿನ ಮತ್ತು ಸಂಕೀರ್ಣ ಪ್ರಕ್ರಿಯೆಯಾಗಿದೆ. ಈ ಬಾಲಕನ ತಾಯಿಯೇ ಮಗನಿಗಾಗಿ ಮೂತ್ರಪಿಂಡವನ್ನು ದಾನ ಮಾಡಿದರು. ಶಸ್ತ್ರಚಿಕಿತ್ಸೆಯ ನಂತರ ದಾನ ಮಾಡಿದ ಮೂತ್ರಪಿಂಡವು ತಕ್ಷಣವೇ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ವೈದ್ಯರ ಪ್ರಕಾರ, ಮಗು ಈಗ ಡಯಾಲಿಸಿಸ್‌ನಿಂದ ಸಂಪೂರ್ಣವಾಗಿ ಮುಕ್ತನಾಗಿದ್ದು, ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾನೆ.

ಕಾರ್ಮಿಕನ ಮಗನಿಗೆ ಸರ್ಕಾರಿ ಆಸ್ಪತ್ರೆ ಉಚಿತ ಚಿಕಿತ್ಸೆ:

ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ತಗುಲುತ್ತಿದ್ದ ಈ ಶಸ್ತ್ರಚಿಕಿತ್ಸೆಯನ್ನು ಕಾರ್ಮಿಕನ ಮಗನಿಗೆ ಸರ್ಕಾರಿ ಆಸ್ಪತ್ರೆಯು ಉಚಿತವಾಗಿ ನಿರ್ವಹಿಸಿತು. ಕಸಿ ಪ್ರಕ್ರಿಯೆಯ ವೆಚ್ಚವನ್ನು ಆಸ್ಪತ್ರೆಯೇ ಭರಿಸಿದ್ದಲ್ಲದೆ, ಶಸ್ತ್ರಚಿಕಿತ್ಸೆಯ ನಂತರ ಅಗತ್ಯವಿರುವ ದುಬಾರಿ ಔಷಧಿಗಳ ವೆಚ್ಚವನ್ನು ಸಹ ಭರಿಸುವುದಾಗಿ ಆಸ್ಪತ್ರೆ ಆಡಳಿತ ಘೋಷಿಸಿದೆ. ಆಸ್ಪತ್ರೆಯ ನಿರ್ದೇಶಕ ಡಾ. ಸಂದೀಪ್ ಬನ್ಸಾಲ್ ಅವರು ಈ ಸಾಧನೆಯು ಸರ್ಕಾರಿ ಆರೋಗ್ಯ ಸೇವೆಗಳಲ್ಲಿನ ಸಾಮರ್ಥ್ಯ ಮತ್ತು ನಂಬಿಕೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು. ಮೂತ್ರಶಾಸ್ತ್ರ ವಿಭಾಗದ ಮುಖ್ಯ ನಿರ್ದೇಶಕ ಪ್ರೊ. ಡಾ. ಪವನ್ ವಾಸುದೇವ ನೇತೃತ್ವದಲ್ಲಿ, ಡಾ. ನೀರಜ್ ಕುಮಾರ್, ಮಕ್ಕಳ ವಿಭಾಗದ ಡಾ. ಶೋಭಾ ಶರ್ಮಾ, ಡಾ. ಶ್ರೀನಿವಾಸವರ್ಧನ್, ಡಾ. ಪ್ರದೀಪ್ ಕೆ. ದೇಬಾಟಾ ಮತ್ತು ಅರಿವಳಿಕೆ ತಜ್ಞರ ತಂಡವು (ಡಾ. ಸುಶೀಲ್, ಡಾ. ಮಮತಾ, ಡಾ. ಸೋನಾಲಿ) ಈ ಐತಿಹಾಸಿಕ ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿ ಯಶಸ್ಸು ತಂದಿದೆ.