ಪುಣೆಯ ಇಂದ್ರಯಾಣಿ ನದಿ ಸೇತುವೆ ಕುಸಿತದಿಂದ 6 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಪಡೆಗಳು ಸ್ಥಳದಲ್ಲಿದ್ದು, ಹಲವರನ್ನು ರಕ್ಷಿಸಲಾಗಿದೆ. ಭಾರಿ ಮಳೆಯಿಂದ ನದಿ ಉಕ್ಕಿ ಹರಿಯುತ್ತಿದ್ದ ಕಾರಣ ಈ ದುರಂತ ಸಂಭವಿಸಿದೆ.

ಮಹಾರಾಷ್ಟ್ರ: ಪುಣೆಯಲ್ಲಿ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಬ್ಬಿಣದ ಸೇತುವೆ ಕುಸಿದು 6 ಪ್ರವಾಸಿಗರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚು ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

Add Asianetnews Kannada as a Preferred SourcegooglePreferred

ಭಾನುವಾರವಾದ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿದ್ದರು ಘಟನೆ ಸಂಭವಿಸಿದ ಸಮಯದಲ್ಲಿ ಸೇತುವೆ ಮೇಲೆ ಸುಮಾರು 25 ರಿಂದ 30 ಮಂದಿ ಪ್ರವಾಸಿಗರು ಇದ್ದರು ಎಂದು ವರದಿ ತಿಳಿಸಿದೆ. ಸೇತುವೆ ಕುಸಿದ ತಕ್ಷಣ ಪ್ರವಾಹದ ನೀರಿನಲ್ಲಿ ಹಲವರು ಕೊಚ್ಚಿ ಹೋಗಿದ್ದಾರೆ.

ರಕ್ಷಣಾ ಕಾರ್ಯಾಚರಣೆಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಪೊಲೀಸರು ಹಾಗೂ ಸ್ಥಳೀಯ ವಿಪತ್ತು ನಿರ್ವಹಣಾ ಸಿಬ್ಬಂದಿ ತ್ವರಿತವಾಗಿ ತಲುಪಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೆ ಎಂಟು ಮಂದಿಯನ್ನು ಜೀವಂತವಾಗಿ ರಕ್ಷಿಸಲಾಗಿದ್ದು, ಇಬ್ಬರು ಮಹಿಳೆಯರು ಇನ್ನೂ ಸೇತುವೆಯ ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದೆ.

ಘಟನೆ ಸಂಭವಿಸಿದ ಸ್ಥಳವು ಜನಪ್ರಿಯ ಕುಂಡ್ಮಾಲಾ ಎಂಬ ಘಾಟ್ ಪ್ರದೇಶವಾಗಿದ್ದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಭಾರಿ ಮಳೆಯ ಕಾರಣದಿಂದಾಗಿ ನದಿಯಲ್ಲಿ ಪ್ರವಾಹ ಉಲ್ಬಣಗೊಂಡಿತ್ತು. ಹೀಗಾಗಿ ಈ ದುರ್ಘಟನೆ ನಡೆದಿದೆ. ಪುಣೆ ಮತ್ತು ಪಿಂಪ್ರಿ-ಚಿಂಚ್‌ವಾಡ್‌ಗಳಿಗೆ ಆರೆಂಜ್ ಎಲರ್ಟ್ ಜಾರಿಯಲ್ಲಿದ್ದರೂ, ಗ್ರಾಮೀಣ ಭಾಗವಾದ ಮಾವಲ್ ಪ್ರದೇಶದಲ್ಲಿಯೇ ಈ ದುರ್ಘಟನೆ ಸಂಭವಿಸಿದೆ. ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ನಿರಂತರವಾಗಿ ಭಾರಿ ಮಳೆ ಸುರಿಯುತ್ತಿದೆ.

4-5 ವರ್ಷಗಳ ಹಿಂದೆ ನವೀಕರಿಸಲಾದ ಸೇತುವೆಯ ರಚನಾತ್ಮಕ ಸುರಕ್ಷತೆಯ ಬಗ್ಗೆ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು. ಆದರೆ ಪ್ರವಾಸಿಗರಿಗೆ ಈ ಅಪಾಯದ ಬಗ್ಗೆ ಪೂರ್ವ ಮಾಹಿತಿ ಇರಲಿಲ್ಲ ಎಂದು ಹೇಳಲಾಗಿದೆ.

ಪವಿತ್ರ ಸ್ಥಳವಾಗಿತ್ತು

ಮಧ್ಯಾಹ್ನ 3:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಪವಿತ್ರ ಸಂತ ತುಕಾರಾಮರಿಗೆ ಸಂಬಂಧಿಸಿದ ಯಾತ್ರಾ ಸ್ಥಳ ದೇಹುನಲ್ಲಿರುವ ಈ ಸೇತುವೆ ಭಕ್ತರು ಮತ್ತು ಪ್ರವಾಸಿಗರಿಬ್ಬರಿಗೂ ಜನಪ್ರಿಯ ಸ್ಥಳವಾಗಿತ್ತು. ವಾರಾಂತ್ಯದ ಕಾರಣ ಹೆಚ್ಚಿನ ಜನಸಂದಣಿ ಸೇರಿದ್ದರಿಂದ, ಸೇತುವೆ ಕುಸಿದ ಸಮಯದಲ್ಲಿ ಜನಸಂದಣಿಯಿಂದ ತುಂಬಿತ್ತು.

ಸ್ಥಳೀಯ ಶಾಸಕ ಸುನಿಲ್ ಶೆಲ್ಕೆ ಅವರು ಹೇಳಿದಂತೆ, ಸೇತುವೆ ಕುಸಿದಾಗ ಸುಮಾರು 100 ಜನರು ಅದರ ಮೇಲೆ ಅಥವಾ ಸಮೀಪದಲ್ಲಿದ್ದರು. ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ, ಸೇತುವೆ ಏಕಾಏಕಿ ಕುಸಿದ ಕಾರಣ, ಜನರಿಗೆ ತಪ್ಪಿಸಿಕೊಳ್ಳಲು ಅವಕಾಶವೇ ಸಿಗಲಿಲ್ಲ. ಹಲವರು ನದಿಗೆ ಬಿದ್ದು, ಅದರ ರಭಸದ ಹರಿವಿಗೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಅಂದಾಜುಗಳ ಪ್ರಕಾರ, 20 ರಿಂದ 25 ಜನರು ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ ಎಂದಿದ್ದಾರೆ.

ಪ್ರಾಥಮಿಕ ತನಿಖೆಗಳು ಸೇತುವೆ ಈಗಾಗಲೇ ಶಿಥಿಲಾವಸ್ಥೆಯಲ್ಲಿದ್ದುದನ್ನು ಸೂಚಿಸುತ್ತವೆ, ಇದು ನಿರ್ವಹಣೆಯ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಘಟನೆ ಸಂಭವಿಸಿದ ವೇಳೆ ಸೇತುವೆಯ ಮೇಲೆ ಹಲವು ಮೋಟಾರ್ ಸೈಕಲ್‌ಗಳು ಹಾಗೂ ಜನಸಂದಣಿ ಜಾಸ್ತಿ ಇತ್ತು. ಇದರಿಂದಾಗಿ ಹೆಚ್ಚಿನ ಭಾರದಿಂದ ಸೇತುವೆ ಮುರಿಯಿತು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಸೇತುವೆಯು ಇಷ್ಟೊಂದು ಭಾರವನ್ನು ತಾಳುವಂತಿಲ್ಲ. ಮೋಟಾರ್ ಸೈಕಲ್‌ಗಳು ಮತ್ತು ಭಾರೀ ಜನಸಂಖ್ಯೆ ಇದ್ದವು. ಇದು ದುರಂತಕ್ಕೆ ಆಹ್ವಾನ ನೀಡಿದಂತಾಯಿತು ಎಂದು ಸ್ಥಳೀಯ ನಿವಾಸಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.