ದೆಹಲಿಯ ಲವ್ ಕುಶ್ ರಾಮಲೀಲಾದಲ್ಲಿ ನಟಿ ಪೂನಂ ಪಾಂಡೆ ಅವರು ಮಂಡೋದರಿಯ ಪಾತ್ರ ನಿರ್ವಹಿಸುತ್ತಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಹಿಂದೂ ಸಂಘಟನೆಗಳು ಈ ಆಯ್ಕೆಯನ್ನು ಸಂಪ್ರದಾಯಕ್ಕೆ ವಿರುದ್ಧ ಎಂದು ವಿರೋಧಿಸಿವೆ

ದೆಹಲಿಯ ಕೆಂಪು ಕೋಟೆ ಮೈದಾನದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 3 ರವರೆಗೆ ನಡೆಯಲಿರುವ ಲವ್ ಕುಶ್ ರಾಮಲೀಲಾ ಈಗ ವಿವಾದಕ್ಕೆ ಕಾರಣವಾಗಿದೆ. ಬಾಲಿವುಡ್ ನಟಿ ಪೂನಂ ಪಾಂಡೆ ಅವರು ರಾಮಲೀಲಾದಲ್ಲಿ ರಾವಣನ ಪತ್ನಿ ಮಂಡೋದರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಘೋಷಣೆಯು ತೀವ್ರ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರಕ್ಕೆ ಹಿಂದೂ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೂನಂ ಪಾಂಡ್ಯ ವಿವಾದಕ್ಕೆ ಕಾರಣವೇನು?

ಇಂದ್ರಪ್ರಸ್ಥ ವಿಶ್ವ ಹಿಂದೂ ಪರಿಷತ್‌ನ ದೆಹಲಿ ರಾಜ್ಯ ಕಾರ್ಯದರ್ಶಿ ಸುರೇಂದ್ರ ಗುಪ್ತಾ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. ರಾಮಲೀಲಾವು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಪವಿತ್ರ ಕಾರ್ಯಕ್ರಮವಾಗಿದೆ. ಇಂತಹ ಗಂಭೀರ ಪಾತ್ರಕ್ಕೆ ಗ್ಲಾಮರ್ ಸೇರಿಸುವುದು ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಗುಪ್ತಾ ಲವ್ ಕುಶ್ ರಾಮಲೀಲಾ ಸಮಿತಿಗೆ ಪತ್ರ ಬರೆದಿದ್ದಾರೆ.

ರಾಮಲೀಲಾ ಸಮಿತಿಯ ಹೇಳೋದೇನು?

ವಿವಾದಕ್ಕೆ ಪ್ರತಿಕ್ರಿಯಿಸಿದ ಲವ್ ಕುಶ್ ರಾಮಲೀಲಾ ಸಮಿತಿಯ ಅಧ್ಯಕ್ಷ ಅರ್ಜುನ್ ಕುಮಾರ್, ನಾವು ಮಹಿಳಾ ಸಬಲೀಕರಣದ ಸಂದೇಶವನ್ನು ಸಾರಲು ಬಯಸುತ್ತೇವೆ. ಮಂಡೋದರಿಯ ಪಾತ್ರವು ರಾವಣನ ದುಷ್ಟತನವನ್ನು ತಡೆಯುವ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಪೂನಂ ಪಾಂಡೆ ಈ ಪಾತ್ರವನ್ನು ನಿರ್ವಹಿಸಿದರೆ, ಅದು ಅವರ ಜೀವನ ಮತ್ತು ಅವರ ಫಾಲೋವರ್ಸ್‌ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಸಮರ್ಥಿಸಿದ್ದಾರೆ. ಈ ವರ್ಷ ರಾವಣನ ಪಾತ್ರವನ್ನು ನಟ ಆರ್ಯ ಬಬ್ಬರ್ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಹಿಂದೆ ಡಕಾಯಿತರೂ ಸಂಸದರಾಗಿದ್ದಾರೆ, ಆ ಪಾತ್ರ ನಿರ್ವಹಿಸಿದವರು ಸಂತರಾಗಿದ್ದಾರೆ. ಬದಲಾವಣೆ ಸಾಧ್ಯವಿದೆ ಎಂದು ಸಮಿತಿಯು ಹೇಳಿದೆ.

ರಾಮಲೀಲಾ ಕಾರ್ಯಕ್ರಮದ ವಿವರ

ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 3 ರವರೆಗೆ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಲವಾರು ಚಲನಚಿತ್ರ ವ್ಯಕ್ತಿಗಳು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಪೂನಂ ಪಾಂಡೆ ಅವರ ಆಯ್ಕೆಯು ಈಗ ವಿವಾದಕ್ಕೆ ಕಾರಣವಾಗಿದೆ. ಈ ವಿವಾದಕ್ಕೆ ರಾಮಲೀಲಾ ಸಮಿತಿ ಹೇಗೆ ಪ್ರತಿಕ್ರಿಯಿಸಲಿದೆ ಮತ್ತು ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮುಂದಿನ ಬೆಳವಣಿಗೆಗಳಿಗಾಗಿ ಕಾಯಿರಿ.