ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಬಿಹಾರದ ಬಕ್ಸರ್‌ನಲ್ಲಿ ಮೂವರು ಯುವಕರನ್ನು ಬಂಧಿಸಲಾಗಿದೆ. ಪ್ರಧಾನಿ ಭದ್ರತೆಯನ್ನು ಭೇದಿಸಿ ಹತ್ಯೆ ಮಾಡುವುದಾಗಿ ಅಮೆರಿಕದ ಸಿಐಎಗೆ ಇ-ಮೇಲ್ ಕಳುಹಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪಟನಾ (ಏ.11): ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದ 3 ಯುವಕರನ್ನು ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಪ್ರಧಾನಿ ಕಚೇರಿಯಿಂದ ಗೌಪ್ಯ ಮಾಹಿತಿಯನ್ನು ಪಡೆಯಲು ಯತ್ನಿಸಿದ್ದ ಮೂವರು, ಹಣ ಕೊಟ್ಟರೆ ಮೋದಿ ಕುರಿತ ರಹಸ್ಯ ಮಾಹಿತಿ ನೀಡುವುದಾಗಿ ಅಮೆರಿಕ ಗುಪ್ತಚರ ಸಂಸ್ಥೆ ಸಿಐಎಗೆ ಸಂದೇಶ ರವಾನಿಸಿದ್ದರು ಎನ್ನಲಾಗಿದೆ. ಬಂಧಿತರಲ್ಲಿ ಒಬ್ಬನಾದ ಅಮನ್‌ ಕುಮಾರ್‌ ಸಿಐಎಗೆ ಇ-ಮೇಲ್‌ ಮೂಲಕ ಕಳಿಸಿದ್ದ ಸಂದೇಶದಲ್ಲಿ, ‘ಪ್ರಧಾನಿ ಮೋದಿಯವರ ಭದ್ರತೆಯನ್ನು ಭೇದಿಸುತ್ತೇವೆ ಇಲ್ಲವೇ ನೇರವಾಗಿ ಕೊಲ್ಲುತ್ತೇವೆ. ಇದಕ್ಕೆ ಬದಲಾಗಿ ನಮಗೆ ಹಣ ಕೊಡಬೇಕು’ ಎಂದು ಬೇಡಿಕೆ ಇಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಜತೆಗೆ 3 ವಾರಗಳಲ್ಲಿ ಈ ಕೆಲಸ ಮುಗಿಸುವ ಗುರಿಯನ್ನೂ ಇಟ್ಟುಕೊಂಡಿದ್ದರು ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಂಕಿತರ ಮನೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು, ಅವರಿಗೆ ಸೇರಿದ ಲ್ಯಾಪ್‌ಟಾಪ್‌ ಹಾಗೂ ಇತರೆ ಎಲೆಕ್ಟ್ರಾನಿಕ್‌ ಸಾಧನಗಳನ್ನು ವಶಕ್ಕೆ ಪಡೆದು ಪರಿಶೀಲನೆಗೆ ಒಳಪಡಿಸಿದ್ದಾರೆ. ಜತೆಗೆ ಬಂಧಿತರನ್ನೂ ವಿಚಾರಣೆಯೂ ನಡೆಯುತ್ತಿದೆ. ಸೈಬರ್‌ ಕೆಫೆಯೊಂದನ್ನು ಹೊಂದಿರುವ ಅಮನ್‌, 2022ರಲ್ಲಿ ಕೋಲ್ಕತಾ ವಿಮಾನ ನಿಲ್ದಾಣದ ಕಂಪ್ಯೂಟರ್‌ಗಳನ್ನು ಹ್ಯಾಕ್‌ ಮಾಡುವುದಾಗಿ ಬೆದರಿಕೆ ಒಡ್ಡಿ ಬಂಧಿಸಲ್ಪಟ್ಟಿದ್ದ.