ಬಿಜೆಪಿ ಯುವ ಮೋರ್ಚಾ ಮುಖಂಡನ ಹತ್ಯೆಯಾಗಿದೆ. ಮನೆಗೆ ನುಗ್ಗಿ ಅನ್ಯಕೋಮಿನ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿದೆ. ಈ ದಾಳಿಯಲ್ಲಿ ಮುಖಂಡನ ಸಹೋದರ,ಸಹೋದರಿ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಡೆಹ್ರಡೂನ್ (ಜೂ.14) ಬಿಜೆಪಿ ಯುವ ಮೋರ್ಚಾ ಘಟಕದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ಯುವ ಮುಖಂಡನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಉತ್ತರಖಂಡದಲ್ಲಿ ನಡೆದಿದೆ. ಮುಖಂಡನ ಮನೆಗೆ ನುಗ್ಗಿದ ಅನ್ಯ ಕೋಮಿನ ಗುಂಪು ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ. ಈ ಮೇಳೆ ಅಡ್ಡ ಬಂದ ಮುಖಂಡನ ಕುಟುಂಬಸ್ಥರ ಮೇಲೂ ದಾಳಿ ಮಾಡಲಾಗಿದೆ. ಬಿಜೆಪಿ ಮುಖಂಡನ ಹತ್ಯೆ ಮಾಹಿತಿ ತಿಳಿಯುತ್ತಿದ್ದಂತೆ ಬಿಜೆಪಿ ನಾಯಕರು, ಹಿಂದೂ ಸಂಘಟನೆಗಳ ಮುಖಂಡರು ಸ್ಥಳಕ್ಕೆ ಧಾವಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಇತ್ತ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಇದೇ ವೇಳೆ 12 ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ. ಇತ್ತ ಪ್ರತಿಭಟನಾ ನಿರತರ ಗುಂಪು ಆರೋಪಿಗಳ ಮನೆ ಮೇಲೆ ಕಲ್ಲೆಸೆದ ಘಟನೆಯೂ ನಡೆದಿದೆ.
ಮನೆಗೆ ನುಗ್ಗಿ ದಾಳಿ ನಡೆಸಿದ ಅನ್ಯಕೋಮಿನ ಗುಂಪು
ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಸಹಸಪುರ ವ್ಯಾಪ್ತಿಯ ಬೈರಾಗಿವಾಲಾ ಎಂಬ ಗ್ರಾಮದಲ್ಲಿ 44 ವರ್ಷದ ಸ್ಥಳೀಯ ಬಿಜೆಪಿ ಪದಾಧಿಕಾರಿ ವಿನೋದ್ ಕಶ್ಯಪ್ ಅವರನ್ನು ಶನಿವಾರ ತೀವ್ರವಾಗಿ ಥಳಿಸಿ ಕೊಲೆ ಮಾಡಲಾಗಿದೆ. ಜಮೀನಿಗೆ ನೀರು ಹರಿಸುವ ವಿಚಾರದಲ್ಲಿ ಆರಂಭವಾದ ಸಣ್ಣ ಜಗಳವು ಕೆಲವೇ ನಿಮಿಷಗಳಲ್ಲಿ ವಿಕೋಪಕ್ಕೆ ತಿರುಗಿ, ದೊಡ್ಡ ಹಿಂಸಾಚಾರವಾಗಿ ಮಾರ್ಪಟ್ಟಿದೆ. ಕೃತ್ಯದ ವೇಳೆ ವಿನೋದ್ ಅವರ ಕುಟುಂಬದ ಮೂವರು ಸದಸ್ಯರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ.
40 ಜನರಿಂದ ದಾಳಿ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಶನಿವಾರ ಸಾಯಂಕಾಲ ಸುಮಾರು 6 ರಿಂದ 6:30 ರ ಅವಧಿಯಲ್ಲಿ ವಿನೋದ್ ಅವರು ತಮ್ಮ ಜಮೀನಿಗೆ ನೀರು ಹಾಯಿಸುತ್ತಿದ್ದರು. ಈ ವೇಳೆ ಪಕ್ಕದ ಜಮೀನಿನ ಮಾಲೀಕ ಇಮ್ತಿಯಾಜ್ ಎಂಬಾತನೊಂದಿಗೆ ನೀರು ಹರಿಸುವ ವಿಚಾರದಲ್ಲಿ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ಜಗಳ ಅಲ್ಲಿಗೇ ನಿಲ್ಲದೆ, ಕೆಲವೇ ಹೊತ್ತಿನಲ್ಲಿ ಇಮ್ತಿಯಾಜ್ ಬೆಂಬಲಕ್ಕೆ ನಿಂತ 40 ಕ್ಕೂ ಹೆಚ್ಚು ಜನರ ಹಿಂಸಾತ್ಮಕ ಗುಂಪೊಂದು ಲೂಟಿ ಮತ್ತು ಆಯುಧಗಳೊಂದಿಗೆ ವಿನೋದ್ ಅವರ ಮನೆಗೆ ನುಗ್ಗಿದೆ.
ಇಮ್ತಿಯಾಜ್ ಸೇರಿ 12 ಮಂದಿ ವಿರುದ್ಧ ಪ್ರಕರಣ
ಘಟನೆಗೆ ಸಂಬಂಧಿಸಿದಂತೆ ಮೃತರ ಸಹೋದರ ಅಶೋಕ್ ನೀಡಿದ ದೂರಿನ ಮೇರೆಗೆ ಪೊಲೀಸರು ಒಟ್ಟು 12 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ. ಇಮ್ತಿಯಾಜ್, ರಜಾಕ್, ಯೂನಸ್, ಶಹಬ್ಬಾಜ್, ಶರಾಫತ್ ಆಲಿ, ಮಾಸೂಮ್, ಆದಿಲ್, ಶಮೂನ್, ಸಲ್ಮಾನ್, ಜಾವೇದ್ ಹಾಗೂ ಇಂತಿಜಾರ್ ವಿರುದ್ದ ಪ್ರಕರಣ ದಾಲಾಗಿದೆ.
ಬುಲ್ಡೋಜರ್ ಕ್ರಮಕ್ಕೆ ಆಗ್ರಹ
ವಿನೋದ್ ಕಶ್ಯಪ್ ಅವರ ಹತ್ಯೆಯ ಸುದ್ದಿ ಹರಡುತ್ತಿದ್ದಂತೆ ಗ್ರಾಮದಲ್ಲಿ ತೀವ್ರ ಕೋಮು ಉದ್ವಿಗ್ನತೆ ಸೃಷ್ಟಿಯಾಗಿದೆ. ಭಾನುವಾರ ಮುಂಜಾನೆಯೇ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ನೂರಾರು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಆಕ್ರೋಶಿತ ಜನಸಮೂಹ, ಹಂತಕರ ಅಕ್ರಮ ಆಸ್ತಿಗಳನ್ನು ತಕ್ಷಣವೇ ಧ್ವಂಸಗೊಳಿಸಬೇಕೆಂದು ಒತ್ತಾಯಿಸಿದೆ.


