ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್‌ ಭೇಟಿಯು ಐತಿಹಾಸಿಕವಾಗಿದ್ದು, ಅವರು ಇಸ್ರೇಲ್‌ ಸಂಸತ್ತಿನಲ್ಲಿ ಭಾಷಣ ಮಾಡಿದ ಮತ್ತು ಅದರ ಅತ್ಯುನ್ನತ ಗೌರವವಾದ ‘ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ’ ಪಡೆದ ಮೊದಲ ಭಾರತದ ಪ್ರಧಾನಿಯಾಗಿದ್ದಾರೆ.  

ಜೆರುಸಲೇಂ: 2 ದಿನಗಳ ಇಸ್ರೇಲ್‌ ಭೇಟಿಗೆ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಇತಿಹಾಸ ರಚನೆಗೆ ಕಾರಣರಾಗಿದ್ದಾರೆ, ಇಸ್ರೇಲ್‌ ಸಂಸತ್ತಿನಲ್ಲಿ ಮೊದಲ ಬಾರಿ ಭಾಷಣ ಮಾಡಿದ ಭಾರತದ ಪ್ರಧಾನಿ ಹಾಗೂ ಇಸ್ರೇಲ್‌ ಸಂಸತ್ತಿನ ಉನ್ನತ ಪ್ರಶಸ್ತಿ ಪಡೆದ ಮೊದಲ ಭಾರತದ ಪ್ರಧಾನಿ ಎಂಬ 2 ಖ್ಯಾತಿಗೆ ಭಾಜನರಾಗಿದ್ದಾರೆ.

Add Asianetnews Kannada as a Preferred SourcegooglePreferred

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹಾಗೂ ಸಂಸದರ ಸಮ್ಮುಖದಲ್ಲಿ ಕರತಾಡನದ ನಡುವೆ ಮೋದಿ ಭಾಷಣ ಮಾಡಿದರು. ಬಳಿಕ ಇಸ್ರೇಲ್ ಸಂಸತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ’ ಪ್ರದಾನ ಮಾಡಿತು. ಇದು ನೆಸ್ಸೆಟ್‌ನ ಅತ್ಯುನ್ನತ ಗೌರವವಾಗಿದ್ದು, ಈ ಗೌರವ ಪಡೆದ ಮೊದಲ ಭಾರತದ ಪ್ರಧಾನಿಯಾಗಿದ್ದಾರೆ.

ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸಲು ಮೋದಿ ಅವರು ತಮ್ಮ ನಾಯಕತ್ವದ ಮೂಲಕ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಈ ಪದಕವನ್ನು ನೀಡಲಾಗಿದೆ.

ಮೋದಿ ಅಪ್ಪುಗೆಗೆ ನೆತನ್ಯಾಹು ಫಿದಾ

ಜೆರುಸಲೇಂ: ಪ್ರಧಾನಿ ಮೋದಿಯವರ ವೈಯಕ್ತಿಕ ಅಪ್ಪುಗೆ ವಿಶೇಷವಾದದ್ದು. ಇದನ್ನು ‘ಮೋದಿ ಹಗ್' ಎಂದು ಕರೆಯಲಾಗುತ್ತದೆ, ಇದು ಜಗತ್ತಿನಲ್ಲಿ ಪ್ರಸಿದ್ಧವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೊಂಡಾಡಿದರು.

ಸಂಸತ್ತಲ್ಲಿ ‘ಮೋದಿ ಮೋದಿ’ ಉದ್ಗಾರ

ಜೆರುಸಲೆಂ: ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ನ ಸಂಸತ್ತು ‘ಕ್ನೆಸೆಟ್‌’ ಪ್ರವೇಶಿಸುತ್ತಿದ್ದಂತೆ ಸಂಸದರೆಲ್ಲ ‘ಮೋದಿ ಮೋದಿ’ ಎಂಬ ಉದ್ಗಾರ ಮೊಳಗಿಸಿದರು. ಬಳಿಕ ಅವರನ್ನು ಪ್ರಶಂಸಿಸುತ್ತಾ ಎಲ್ಲರೂ 6 ಸಲ ಎದ್ದು ನಿಂತು ಚಪ್ಪಾಳೆ ತಟ್ಟಿದ್ದು ವಿಶೇಷವಾಗಿತ್ತು.

ಮೋದಿ ನಿಮಗೆ ಧನ್ಯವಾದ: ನೆತನ್ಯಾಹು

‘ನೀವು ಇಸ್ರೇಲ್ ಪರವಾಗಿ ನಿಂತಿದ್ದೀರಿ, ಧನ್ಯವಾದಗಳು ನನ್ನ ಗೆಳೆಯ..’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಭಾಷಣದಲ್ಲಿ ಹೇಳಿದರು. ಆಗ ಮೋದಿ ಅವರು ನೆತನ್ಯಾಹು ಕೈಕುಲುಕಿ ಧನ್ಯವಾದ ಸಮರ್ಪಿಸಿದರು.

ಮೋದಿ-ನೆತನ್ಯಾಹು ಚುಟುಕು ಮಾತುಕತೆ ಯಶಸ್ವಿ

ಜೆರುಸಲೇಂ: ಇಸ್ರೇಲ್‌ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಜತೆ ವಿಮಾನನಿಲ್ದಾಣದಲ್ಲಿ ಚುಟುಕು ಮಾತುಕತೆ ನಡೆಸಿದರು.

ಈ ಬಗ್ಗೆ ಅವರು ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದು, ‘9 ವರ್ಷಗಳ ನಂತರ ಇಸ್ರೇಲ್‌ಗೆ ಬಂದಿರುವುದು ಸಂತೋಷ ತಂದಿದೆ. ಪ್ರಧಾನಿ ನೆತನ್ಯಾಹು ಅವರೊಂದಿಗೆ ಉತ್ತಮ ಮಾತುಕತೆ ನಡೆಯಿತು. ಉಭಯ ದೇಶಗಳ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ತಂತ್ರಜ್ಞಾನ, ನೀರು ನಿರ್ವಹಣೆ, ಕೃಷಿ, ಪ್ರತಿಭಾ ಪಾಲುದಾರಿಕೆ ಸೇರಿದಂತೆ ಹಲವು ಕ್ಷೇತ್ರಗಳ ಬಗ್ಗೆ ಚರ್ಚಿಸಿದೆವು. ಅಂತೆಯೇ ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ಮಾಡಿದೆವು’ ಎಂದು ಬರೆದಿದ್ದಾರೆ.