Padma Shri Nanda Prusty: ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ನಂದ ಪೃಸ್ಟಿ ಇನ್ನಿಲ್ಲ, ಪ್ರಧಾನಿ ಮೋದಿ ಸಂತಾಪ!
- 7 ದಶಕಗಳಿಂದ ವಿದ್ಯಾದಾನ ಮಾಡುತ್ತಿದ್ದ ಅಕ್ಷರ ಸಂತ ನಂದ ಪೃಸ್ಟಿ
- ಪದ್ಮಶ್ರೀ ಪುರಸ್ಕೃತ ಓಡಿಶಾದ ನಂದ ಪೃಸ್ಟಿ ನಿಧನ
- ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ(ಡಿ.07): ಕಳೆದ 7 ದಶಕಗಳಿಂದ ವಿದ್ಯಾದಾನ ಮೂಲಕ ತಮ್ಮ ಹಳ್ಳಿಯಲ್ಲಿ ಅನಕ್ಷರತೆ ಹೋಗಲಾಡಿಸಲು ಅವಿರತ ಶ್ರಮವಹಿಸಿದ ಅಕ್ಷರ ಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ(Padma Shri awardee) ನಂದ ಪೃಸ್ಟಿ (Nanda Prusty)ನಿಧನರಾಗಿದ್ದಾರೆ. 102 ವರ್ಷದ ನಂದ ಪೃಸ್ಟಿ ಆರೋಗ್ಯ ಸಮಸ್ಯೆಯಿಂದ ಇತ್ತೀಚೆಗೆ ಆಸ್ಪತ್ರೆ ದಾಖಲಾಗಿದ್ದರು. ಇದೀಗ ಜ್ವರ, ಕೆಮ್ಮು ಹಾಗೂ ವಯೋಸಹಜ ಕಾಯಿಲೆಯಿಂದ ನಂದ ಪೃಸ್ಟಿ ನಿಧನರಾಗಿದ್ದಾರೆ(dies).
ನಂದ ಪೃಸ್ಟಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ(PM Narendra modi) ಸಂತಾಪ ಸೂಚಿಸಿದ್ದಾರೆ. ನಂದ ಪೃಸ್ಟಿ ಜೀ ಅವರ ನಿಧನದಿಂದ ತೀವ್ರ ನೋವಾಗಿದೆ. ಒಡಿಶಾದಲ್ಲಿ(Odisha) ಶಿಕ್ಷಣ ಉಣಬಡಿಸಿ ಸಾಕ್ಷರತೆ ಬೆಳಕು ಚೆಲ್ಲಿದ ಗೌರವಾನ್ವಿತ ನಂದ ಸರ್ ನೆನೆಪು ಅಚ್ಚಳಿಯದೇ ಉಳಿಯಲಿದೆ. ಇತ್ತೀಚೆಗೆ ಪದ್ಮಶ್ರೀ ಪಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ನಂದಾ ಪೃಸ್ಟಿ ದೇಶದ ಗಮನ ಸೆಳೆದಿದ್ದರು. ಓ ಶಾಂತಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿರುವ ನಂದಾ ಪೃಸ್ಟಿ ಒಡಿಶಾದ ಜಿಲ್ಲಾ ಆಸ್ಪತ್ರೆಗೆ(Hospital) ತೆರಳಿ ಔಷಧಿ ಪಡೆದುಕೊಂಡಿದ್ದರು. ಆದರೆ ಎರಡು ವಾರದ ಹಿಂದೆ ನಂದಾ ಪೃಸ್ಟಿ ಆರೋಗ್ಯ ಕ್ಷೀಣಿಸಿದೆ. ಹೀಗಾಗಿ ನವೆಂಬರ್ 29 ರಂದು ಕಾಂತಿರಾ ಹಳ್ಳಿಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಆದರೆ ಆರೋಗ್ಯ ಹದಗೆಟ್ಟ ಕಾರಣ ನಂದಾ ಪೃಸ್ಟಿಯನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನವೆಂಬರ್ 30 ರಂದು ನಂದಾ ಪೃಸ್ಟಿ ಕೋವಿಡ್ ವರದಿ ಪಾಸಿಟೀವ್ ಬಂದಿತ್ತು. ತೀವ್ರ ಜ್ವರ, ಕೆಮ್ಮುನಿಂದ ಬಳಲಿದ ನಂದಾ ಪೃಶ್ಟಿ ಇಂದು(ಡಿ.07) ನಿಧನರಾಗಿದ್ದಾರೆ. ಇಬ್ಬರು ಪುತ್ರರು, ಕುಟುಂಬ ವರ್ಗ ಹಾಗೂ ಅಪಾರ ವಿದ್ಯಾರ್ಥಿಗಳನ್ನು ಅಗಲಿದ್ದಾರೆ.
Dr Sharada Menon No More: ಭಾರತದ ಮೊದಲ ಮನೋವೈದ್ಯೆ ಶಾರದಾ ಮೆನನ್ ನಿಧನ
ನಂದ ಪೃಸ್ಟಿ ಓದಿದ್ದು 7ನೇ ತರಗತಿ. ಆದರೆ ಓಡಿಶಾದ ಜೈಪುರ ಜಿಲ್ಲೆಯ ಕಾಂತಿರಾ ಎಂಬ ಪುಟ್ಟ ಹಳ್ಳಿಯಲ್ಲಿ ಅನಕ್ಷರತೆಯನ್ನು ಹೋಗಲಾಡಿಸಲು ನಂದಾ ಪೃಸ್ಟಿ ಕೈಗೊಂಡ ಕಾರ್ಯಕ್ಕೆ ದೇಶವೇ ಸಲಾಂ ಹೇಳಿದೆ. ನಂದ ಪೃಸ್ಟಿ ತಮ್ಮ ಹಳ್ಳಿಯಲ್ಲಿ ಮಾತ್ರವಲ್ಲ, ದೇಶದಲ್ಲಿ ನಂದ ಮಾಸ್ಟರ್ ಎಂದೇ ಜನಪ್ರಿಯರಾಗಿದ್ದಾರೆ. ನಂದ ಮಾಸ್ಟರ್ ಸಾಧನೆ ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿತ್ತು. ಕಳೆದ ತಿಂಗಳು ಅಂದರೆ ನವೆಂಬರ್ 9 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್, ನಂದ ಪೃಸ್ಟಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು.
ನಂದಾ ಮಾಸ್ಟರ್ ಹಳ್ಳಿಯ ಮಕ್ಕಳಿಗೆ ಮಾತ್ರವಲ್ಲ, ವಯಸ್ಕರಿಗೆ, ಹಿರಿಯರಿಗೆ, ಮಹಿಳೆಯರಿಗೆ ಸೇರಿದಂತೆ ಎಲ್ಲರಿಗೂ ಅಕ್ಷರ ಕಲಿಸಿದ್ದಾರೆ. ಶಾಲೆಯಿಂದ ವಂಚಿತರಾದ ಹಲವರು ನಂದಾ ಸರ್ ಬಳಿಯಿಂದ ಅಕ್ಷರ ಕಲಿತಿದ್ದಾರೆ. ನಂದಾ ಪೃಸ್ಟಿ ಉಚಿತವಾಗಿ ವಿದ್ಯಾಭ್ಯಾಸ(Free Education) ನೀಡುತ್ತಿದ್ದರು. ಸ್ವತಂತ್ರ ಭಾರತದಲ್ಲಿ ಇಷ್ಟು ಸುದೀರ್ಘವಾಗಿ ಉಚಿತ ಶಿಕ್ಷಣ ನೀಡಿದ ಏಕೈಕ ವ್ಯಕ್ತಿ ನಂದಾ ಪೃಸ್ಟಿ ಅನ್ನೋ ಹೆಗ್ಗಳಿಕಗೆ ಪಾತ್ರರಾಗಿದ್ದಾರೆ. ಇವರ ಸಾಧನೆಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
Lyricist Death: ಖ್ಯಾತ ಚಿತ್ರಸಾಹಿತಿ ಸಿರಿವೆನ್ನಲ ಸೀತಾರಾಮಶಾಸ್ತ್ರಿ ಇನ್ನಿಲ್ಲ
ಕೇಂದ್ರ ಗೃಹ ಸಚಿವ ಅಮಿತ್ ಶಾ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಒಡಿಶಾ ರಾಜ್ಯಪಾಲ ಗಣೇಶಿ ಲಾಲ್ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಅಕ್ಷರ ಸಂತ ಎಂದೇ ಗುರುತಿಸಿಕೊಂಡಿರುವ ನಂದಾ ಸರ್ಗೆ ದೇಶಾದ್ಯಂತ ಸಂತಾಪ ಸೂಚಿಸಲಾಗುತ್ತಿದೆ. ಕಳೆದ ತಿಂಗಳು ಅಕ್ಷರ ಸಂತನ ಸಾಧನೆಯನ್ನು ದೇಶ ಕೊಂಡಾಡಿತ್ತು. ಪ್ರಶಸ್ತಿ ಸ್ವೀಕರಿಸುವಾಗ ರಾಮನಾಥ್ ಕೋವಿಂದ್ ಅವರಿಗೆ ಎರಡು ಕೈಗಳಿಂದ ಆಶೀರ್ವದಿಸಿ ಪ್ರಶಸ್ತಿ ಸ್ವೀಕರಿಸಿದ್ದರು.