ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂನ್ಯಾಸಿ ಕಾರ್ತಿಕ್ ಮಹಾರಾಜ್ ತನ್ನ ಮೇಲೆ 2013 ರಲ್ಲಿ ಶಾಲೆಯಲ್ಲಿ ಕೆಲಸ ನೀಡುವ ನೆಪದಲ್ಲಿ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.  

ನವದೆಹಲಿ (ಜೂ.28): ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂನ್ಯಾಸಿ ಕಾರ್ತಿಕ್ ಮಹಾರಾಜ್ 2013 ರಲ್ಲಿ ಶಾಲೆಯಲ್ಲಿ ಕೆಲಸ ನೀಡುವ ನೆಪದಲ್ಲಿ ತನ್ನ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿಗೆ ಆಪ್ತರಾಗಿರುವ ಕಾರ್ತಿಕ್ ಮಹಾರಾಜ್ ಆರೋಪಗಳನ್ನು ನಿರಾಕರಿಸಿದ್ದಾರೆ.

Add Asianetnews Kannada as a Preferred SourcegooglePreferred

ಭಾರತ್ ಸೇವಾಶ್ರಮ ಸಂಘದ ಸಂನ್ಯಾಸಿ ಮಹಾರಾಜ್ ಅವರು ಮುರ್ಷಿದಾಬಾದ್‌ನಲ್ಲಿರುವ ಆಶ್ರಮಕ್ಕೆ ತನ್ನನ್ನು ಕರೆದೊಯ್ದು, ಅದರ ಆವರಣದಲ್ಲಿರುವ ಶಾಲೆಯಲ್ಲಿ ಶಿಕ್ಷಕಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು ಮತ್ತು ಆಶ್ರಮದಲ್ಲಿ ವಸತಿಯನ್ನೂ ನೀಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

ಆದರೆ, ಒಂದು ರಾತ್ರಿ, ಆ ಸಂನ್ಯಾಸಿ ತನ್ನ ಕೋಣೆಗೆ ನುಗ್ಗಿ ತನ್ನ ಮೇಲೆ ಬಲವಂತವಾಗಿ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಜನವರಿ-ಜೂನ್ 2013 ರ ನಡುವೆ ಆರು ತಿಂಗಳ ಅವಧಿಯಲ್ಲಿ ಆ ಸನ್ಯಾಸಿ ಕನಿಷ್ಠ 12 ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆಕೆ ಹೇಳಿಕೊಂಡಿದ್ದಾಳೆ.

ಭಯ ಮತ್ತು ಅಸಹಾಯಕತೆಯಿಂದ ಇಷ್ಟು ವರ್ಷಗಳ ಕಾಲ ಘಟನೆಯ ಬಗ್ಗೆ ಮೌನವಾಗಿದ್ದಾಗಿ ಅವರು ಹೇಳಿದರು. ಪೊಲೀಸರನ್ನು ಸಂಪರ್ಕಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂನ್ಯಾಸಿ ಬೆದರಿಕೆ ಹಾಕಿದ್ದರು ಎಂದು ದೂರುದಾರ ಮಹಿಳೆ ತಿಳಿಸಿದ್ದಾರೆ.

ಪೊಲೀಸ್ ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದು, ಕಾರ್ತಿಕ್ ಮಹಾರಾಜ್ ವಿರುದ್ಧ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದೃಢಪಡಿಸಿವೆ. ಪ್ರಸ್ತುತ ತನಿಖೆ ನಡೆಯುತ್ತಿದೆ.

ಆರೋಪ ನಿರಾಕರಿಸಿದ ಕಾರ್ತಿಕ್ ಮಹಾರಾಜ್

ಈ ವರ್ಷ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಕಾರ್ತಿಕ್‌ ಮಹಾರಾಜ್, ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಮಹಿಳೆ ಉಲ್ಲೇಖಿಸಿದ ಆಶ್ರಮದಲ್ಲಿ ವಸತಿ ಸೌಲಭ್ಯವಿದೆ ಎಂದು ಅವರು ಹೇಳಿದರು.

"ನಾನು ಸಂನ್ಯಾಸಿ. ಸಂನ್ಯಾಸಿಯ ಜೀವನದಲ್ಲಿ ಇಂತಹ ಅಡೆತಡೆಗಳು ನೋಡದೇ ಇರುವಂಥದ್ದಲ್ಲ" ಎಂದು ಅವರು ಹೇಳಿದರು. ತಮ್ಮ ಕಾನೂನು ತಂಡವು ನ್ಯಾಯಾಲಯದಲ್ಲಿ ಈ ವಿಷಯಕ್ಕೆ ಪ್ರತಿಕ್ರಿಯಿಸುತ್ತದೆ ಎಂದು ಮಹಾರಾಜ್ ಹೇಳಿದರು.

ಬಿಜೆಪಿ ಜೊತೆಗಿನ ನಿಕಟ ಸಂಬಂಧದಿಂದಾಗಿ ಈ ಪ್ರಕರಣವು ಗಮನ ಸೆಳೆದಿದೆ. ಈ ಹಿಂದೆ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾರ್ತಿಕ್‌ ಮಹಾರಾಜ್‌, ಚುನಾವಣೆಯಲ್ಲಿ ಕೇಸರಿ ಪಕ್ಷಕ್ಕೆ ಸಹಾಯ ಮಾಡುತ್ತಿದ್ದಾರೆ ಮತ್ತು ತೃಣಮೂಲ ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ತಮ್ಮ ಆಶ್ರಮದ ಪ್ರತಿಷ್ಠೆಗೆ ಕಳಂಕ ತಂದಿದ್ದಕ್ಕಾಗಿ ಬ್ಯಾನರ್ಜಿ ಅವರಿಂದ ಬೇಷರತ್ತಾದ ಕ್ಷಮೆಯಾಚನೆಯನ್ನು ಕೋರಿ ಮಹಾರಾಜ್ 2024 ರಲ್ಲಿ ಕಾನೂನು ನೋಟಿಸ್ ಕಳುಹಿಸಿದ್ದರು.

ಕೋಲ್ಕತ್ತಾ ಕಾಲೇಜು ಕ್ಯಾಂಪಸ್‌ನಲ್ಲಿ ಕಾನೂನು ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಹಳೆಯ ವಿದ್ಯಾರ್ಥಿ ಮತ್ತು ಇಬ್ಬರು ಹಿರಿಯ ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ ನಂತರ ಆಡಳಿತಾರೂಢ ತೃಣಮೂಲ ಸರ್ಕಾರ ಪ್ರತಿಭಟನೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.