ಭಾರತಕ್ಕೆ ಹೋರಾಡಿದವರ ಪಾಠ ಇತಿಹಾಸದಲ್ಲಿ ಇಲ್ಲ: ಇತಿಹಾಸ ಪುನ: ಬರೆಯಿರಿ ಎಂದ ಅಮಿತ್ ಶಾ
ಭಾರತಕ್ಕೆ ಹೋರಾಡಿದವರ ಪಾಠಗಳು ಇತಿಹಾಸದಲ್ಲಿ ಇಲ್ಲ. 30 ಸಾಮ್ರಾಜ್ಯ, 300 ವೀರ ಯೋಧರ ಜೀವನದ ಬಗ್ಗೆ ಬರಹ ಅಗತ್ಯ. ಈ ಹಿನ್ನೆಲೆ ಇತಿಹಾಸ ಪುನಃ ಬರೆಯಿರಿ ಎಂದು ಇತಿಹಾಸಕಾರರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.
ನವದೆಹಲಿ: ವಿರೂಪಗೊಂಡ ದೇಶದ (Country) ಇತಿಹಾಸವನ್ನು (History) ಪುನಃ ಬರೆಯುವಂತೆ ಇತಿಹಾಸಕಾರರಿಗೆ (Historians) ಕೇಂದ್ರ ಗೃಹ ಸಚಿವ (Home Minister) ಅಮಿತ್ ಶಾ (Amit Shah) ಕರೆ ನೀಡಿದ್ದಾರೆ. ಇತಿಹಾಸಕಾರರಿಗೆ 30 ಶ್ರೇಷ್ಠ ಭಾರತೀಯ ಸಾಮ್ರಾಜ್ಯಗಳು ಹಾಗೂ ಮಾತೃಭೂಮಿ ರಕ್ಷಣೆಗಾಗಿ ಹೋರಾಡಿದ 300 ವೀರರ ಬಗ್ಗೆ ಅಧ್ಯಯನ ಮಾಡಿ ಅವರ ಇತಿಹಾಸವನ್ನು ಪುನಃ ಬರೆಯಲು ಆಗ್ರಹಿಸಿದ್ದಾರೆ.
ಮೊಘಲರ (Mughals) ವಿರುದ್ಧ ಹೋರಾಡಿದ್ದ ಅಸ್ಸಾಂನ ದಂಡನಾಯಕ ಲಚಿತ್ ಬರ್ಪುಕಾನ್ (Lachit Barphukan) ಅವರ 400ನೇ ಜಯಂತಿ ಕಾರ್ಯಕ್ರಮದ ಸಮಗ್ರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತದ ಇತಿಹಾಸವನ್ನು (Indian History) ತಿರುಚಲಾಗಿದೆ, ವಿರೂಪಗೊಳಿಸಲಾಗಿದೆ ಎಂಬ ಬಗ್ಗೆ ಕೇಳಿ ಬರುವ ಆರೋಪಗಳು ನಿಜವಾಗಿರಬಹುದು. ಆದರೆ ಈಗ ದೇಶ ಸ್ವತಂತ್ರವಾದ ಬಳಿಕ ಇತಿಹಾಸವನ್ನು ಸರಿಪಡಿಸದಂತೆ ನಮ್ಮನ್ನು ಯಾರಾದರೂ ತಡೆದಿದ್ದಾರೆಯೇ?’ ಎಂದು ಪ್ರಶ್ನಿಸಿದರು.
ಇದನ್ನು ಓದಿ: ಬಿಜೆಪಿ ಮೋದಿ ಹೆಸರಲ್ಲಿ ವೋಟು ಕೇಳೋದೇಕೆ?: ಅಮಿತ್ ಶಾ
‘ಮೋದಿ ಸರ್ಕಾರ ದೇಶದ ಭವ್ಯ ಪರಂಪರೆ ಮರುಸೃಷ್ಟಿಗಾಗಿ ಕೆಲಸ ಮಾಡುತ್ತಿದ್ದು, ಇತಿಹಾಸಕಾರರು ಹಾಗೂ ವಿದ್ಯಾರ್ಥಿಗಳಿಗೆ ದೇಶದ ಯಾವುದೇ ಭಾಗವನ್ನು 150 ವರ್ಷಕ್ಕೂ ಹೆಚ್ಚು ಕಾಲ ಆಳ್ವಿಕೆ ನಡೆಸಿದ 30 ಶ್ರೇಷ್ಠ ಸಾಮಾಜ್ಯಗಳನ್ನು ಗುರುತಿಸಿ, ಅವುಗಳ 300 ವೀರ ಯೋಧರ ಜೀವನ, ಸಾಧನೆ ಬಗ್ಗೆ ಆಳವಾದ ಅಧ್ಯಯನ ನಡೆಸಿ ಅವುಗಳ ಬಗ್ಗೆ ಬರೆಯಬೇಕು’ ಎಂದು ಕರೆ ನೀಡಿದರು.
2002ರ ಬಳಿಕ ಗುಜರಾತಲ್ಲಿ ಶಾಶ್ವತ ಶಾಂತಿ: ಅಮಿತ್ ಶಾ
ಅಹಮದಾಬಾದ್: ‘ಕಾಂಗ್ರೆಸ್ ಬೆಂಬಲದಿಂದಾಗಿ ಸಮಾಜ ವಿರೋಧಿ ಶಕ್ತಿಗಳು ಗುಜರಾತ್ನಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದರು. ಆದರೆ 2002ರಲ್ಲಿ ಸಮಾಜಘಾತಕರಿಗೆ ಬಿಜೆಪಿ ಪಾಠ ಕಲಿಸಿದ ಬಳಿಕ ರಾಜ್ಯದಲ್ಲಿ ಶಾಶ್ವತ ಶಾಂತಿ ನೆಲೆಸಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸೇರಿಕೊಳ್ತಾರ ಧೋನಿ? ಅಮಿತ್ ಶಾ ಜೊತೆ ಕಾಣಿಸಿಕೊಂಡ ಕ್ಯಾಪ್ಟನ್ ಕೂಲ್!
ಖೇಡಾ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ರ್ಯಾಲಿಯಲ್ಲಿ ಭಾಗಿಯಾಗಿದ್ದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ (1995ಕ್ಕೂ ಮೊದಲು) ಕೋಮು ಗಲಭೆಗಳು ತಾಂಡವಾಡುತ್ತಿದ್ದವು. ಕಾಂಗ್ರೆಸ್ ವಿವಿಧ ಸಮುದಾಯಗಳ ಜನರ ನಡುವೆ ಜಗಳ ತಂದಿಟ್ಟು ಕೋಮುಗಲಭೆ ಉಂಟು ಮಾಡುತ್ತಿತ್ತು. ಈ ಗಲಭೆಗಳ ಮೂಲಕ ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳುತ್ತಿತ್ತು. ಈ ಮೂಲಕ ಸಮಾಜಕ್ಕೆ ದ್ರೋಹ ಮಾಡುತ್ತಿತ್ತು. ಆದರೆ ಅವರೆಲ್ಲರಿಗೂ 2002ರಲ್ಲಿ ಪಾಠ ಕಲಿಸಿದ ಬಳಿಕ ಹಿಂಸಾಚಾರದ ಹಾದಿಯನ್ನು ಅವರು ತೊರೆದರು. 2002ರಿಂದ 2022ರವರೆಗೆ ಹಿಂಸಾಚಾರದಲ್ಲಿ ತೊಡಗಿಕೊಳ್ಳುವುದನ್ನು ಬಿಟ್ಟುಬಿಟ್ಟರು. ಗುಜರಾತ್ನಲ್ಲಿ ಗಲಭೆ ಮಾಡುತ್ತಿದ್ದವರ ವಿರುದ್ಧ ಬಿಜೆಪಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಶಾಶ್ವತ ಶಾಂತಿ ನೆಲೆಸುವಂತೆ ಮಾಡಿದೆ’ ಎಂದರು.
ಇದನ್ನೂ ಓದಿ: ಪತ್ನಿಗೆ ಬಿಜೆಪಿ ಟಿಕೆಟ್: ಪ್ರಧಾನಿ ಮೋದಿ, ಅಮಿತ್ ಶಾಗೆ ರವೀಂದ್ರ ಜಡೇಜಾ ಧನ್ಯವಾದ