ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನೆಲೆಯಲ್ಲಿ ಇಂದು ಉದ್ಘಾಟನೆಯಾಗಬೇಕಿದ್ದ ಗೋವಾ-ಮುಂಬೈ ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಚಾಲನೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

ಬಾಲಸೋರ್‌: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನೆಲೆಯಲ್ಲಿ ಇಂದು ಉದ್ಘಾಟನೆಯಾಗಬೇಕಿದ್ದ ಗೋವಾ-ಮುಂಬೈ ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಚಾಲನೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲಿಗೆ ಚಾಲನೆ ನೀಡಬೇಕಿತ್ತು. ಆದರೆ ಭೀಕರ ದುರಂತದ ಹಿನ್ನೆಲೆಯಲ್ಲಿ ಈ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. 

Add Asianetnews Kannada as a Preferred SourcegooglePreferred

ಕಣ್ಣೆದುರೇ ತುಂಡಾಗಿ ಬಿದ್ದ ದೇಹ

ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ತ್ರಿವಳಿ ರೈಲು ದುರಂತದಲ್ಲಿ ಬದುಕುಳಿದ ಪ್ರತ್ಯಕ್ಷದರ್ಶಿಗಳು, ಅಪಘಾತದ ಭೀಕರತೆಯನ್ನು ವಿವರಿಸಿದ್ದಾರೆ. 'ಸಂಜೆ ನಾವು ಹರಟೆ ಹೊಡೆಯುತ್ತ ಪ್ರಯಾಣಿಸುತ್ತಿದ್ದೆವು. ಆಗ ಇದ್ದಕ್ಕಿದ್ದಂತೆ ಭಾರಿ ಶಬ್ದ ಕೇಳಿತು. ಭೂಕಂಪ ಸಂಭವಿಸಿದ ರೀತಿ ರೈಲು ಕಂಪಿಸಿ ಉಳಿದು ಬಿತ್ತು. ನನ್ನ ಮೈ ಮೇಲೆ 10-15 ಜನ ಉರುಳಿ ಬಿದ್ದರು. ಇದರಿಂದ ನನ್ನ ಕತ್ತು ಹಾಗೂ ಬೆನ್ನಿಗೆ ಏಟಾಯಿತು. ಆದರೆ ಅದ್ಹೇಗೋ ನಾನು ಬಚಾವಾದೆ. ರಕ್ಷಣಾ ತಂಡದಿಂದ ರಕ್ಷಿಸಲ್ಪಟ್ಟೆ' ಎಂದು ಪ್ರತ್ಯಕ್ಷದರ್ಶಿ ರೂಪಂ ಬ್ಯಾನರ್ಜಿ ಎಂಬುವವರು ಹೇಳಿದ್ದಾರೆ. ಆದರೆ ರಕ್ಷಣೆ ಆದ ಬಳಿಕ ನನ್ನ ಎದುರೇ ತುಂಡಾಗಿ ಬಿದ್ದ ದೇಹಗಳನ್ನು ನೋಡಿದೆ. ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಗಾಯಗೊಂಡವರು ನರಳುತ್ತಿದ್ದರು. ಎದೆ ಝಲ್ಲೆಂದಿತು ಎಂದು ಅವರು ಹೇಳಿದ್ದಾರೆ.

ಒಡಿಶಾದಲ್ಲಿ ಕೋರಮಂಡಲ್ ರೈಲು ದುರಂತ: ಮೃತರ ಸಂಖ್ಯೆ 233ಕ್ಕೆ ಏರಿಕೆ

ಸ್ಥಳಕ್ಕೆ ರೈಲ್ವೆ ಸಚಿವ ವೈಷ್ಣವ್‌ ರಾತ್ರೋರಾತ್ರಿ ದೌಡು

ಒಡಿಶಾದ ಬಾಲಸೋರ್‌ ಬಳಿ 3 ರೈಲುಗಳು ಅಪಘಾತಕ್ಕೆ ಈಡಾದ ಬೆನ್ನಲ್ಲೇ ತಮ್ಮೆಲ್ಲಾ ಅಧಿಕೃತ ಪ್ರವಾಸ ರದ್ದುಗೊಳಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಘಟನಾ ಸ್ಥಳಕ್ಕೆ ಶುಕ್ರವಾರ ತಡರಾತ್ರಿಯೇ ದೌಡಾಯಿಸಿದ್ದರು. ಜೊತೆಗ ಇಂದು ಉದ್ಘಾಟನೆಯಾಗಬೇಕಿದ್ದ ಗೋವಾ-ಮುಂಬೈ ವಂದೇ ಭಾರತ್‌ ರೈಲು (Vande Bharat Train) ಉದ್ಘಾಟನಾ ಕಾರ್ಯಕ್ರಮವನ್ನೂ ಅವರು ರದ್ದುಗೊಳಿಸಿದ್ದಾರೆ.

ಕಂಟ್ರೋಲ್‌ ರೂಂಗೆ ಪಟ್ನಾಯಕ್‌

ಈ ಬಗ್ಗೆ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಕೂಡ ಸಂಬಂಧಪಟ್ಟಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ ಹಾಗೂ ಕಂಟ್ರೋಲ್‌ ರೂಮ್‌ಗೆ ಧಾವಿಸಿ ರಕ್ಷಣಾ ಕಾರ್ಯದ ಮೇಲುಸ್ತುವಾರಿ ನಡೆಸಿದ್ದು ಇಂದು ಘಟನಾ ಸ್ಥಳ ಬಾಲಸೋರ್‌ಗೆ ಭೇಟಿ ನೀಡಿದ್ದಾರೆ. 

ಯಶವಂತಪುರ- ಕೊರೊಮಂಡೆಲ್ ಎಕ್ಸ್‌ಪ್ರೆಸ್ ರೈಲು ಭೀಕರ ಅಪಘಾತ, ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಸಾವಿನ ಸಂಖ್ಯೆ!

ರೈಲ್ವೆ ಸಚಿವರ ರಾಜೀನಾಮೆಗೆ ವಿಪಕ್ಷ ಪಟ್ಟು

ಒಡಿಶಾದಲ್ಲಿ ರೈಲು ಅಪಘಾತ ಸಂಭವಿಸಿದ ಬೆನ್ನಲ್ಲೇ ರಾಜಕೀಯ ಕೆಸರೆರಚಾಟ ಆರಂಭವಾಗಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ (Ashwin vaishnav) ರಾಜೀನಾಮೆಗೆ ವಿಪಕ್ಷ ಸಿಪಿಎಂ ಆಗ್ರಹಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಪಿಎಂ ಸಂಸದ ಬಿನೋಯ್‌ ವಿಶ್ವಂ (Binoy vishwam), ಸರ್ಕಾರವು ಕೇವಲ ಐಷಾರಾಮಿ ರೈಲುಗಳತ್ತ ಗಮನ ಹರಿಸುತ್ತಿದೆ. ಸಾಮಾನ್ಯ ರೈಲುಗಳು ಹಾಗೂ ಜನಸಾಮಾನ್ಯರ ಬಗ್ಗೆ ರೈಲ್ವೆ ಇಲಾಖೆ ನಿರ್ಲಕ್ಷ್ಯ ತಾಳಿದೆ. ಒಡಿಶಾದ ಇಂದಿನ ದುರಂತವೇ ಇದಕ್ಕೆ ಸ್ಪಷ್ಟ ನಿದರ್ಶನ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.