ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು ಅಪಘಾತ ಇಡೀ ದೇಶವನ್ನೇ ಕದಡಿದೆ. ಸಾವು ನೋವು, ಆಕ್ರಂದನ ಕಲ್ಲು ಹೃಹಯವನ್ನು ಕರಗಿಸುತ್ತಿದೆ. ಬರೋಬ್ಬರಿ 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರೆ, 261 ಮಂದಿ ಮೃತಪಟ್ಟಿದ್ದಾರೆ. ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು ಇದುವರೆಗೆ 5 ಬಾರಿ ಅಪಘಾತಕ್ಕೆ ತುತ್ತಾಗಿದೆ. 2002ರಿಂದ ಇಲ್ಲೀವರೆಗೆ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು ಹಲವು ಜೀವಗಳನ್ನು ಬಲಿಪಡೆದಿದೆ. 

ಒಡಿಶಾ(ಜೂನ್ 03): ಒಡಿಶಾ ರೈಲು ದುರಂತಲ್ಲಿ ಮಡಿದವರ ಸಂಖ್ಯೆ 261ಕ್ಕೂ ಹೆಚ್ಚು. ಗಾಯಗೊಂಡವರ ಸಂಖ್ಯೆ 900ಕ್ಕೂ ಅಧಿಕ. ಮೂರ ರೈಲು ಅಪಘಾತ, 21ಕ್ಕೂ ಹೆಚ್ಚು ಬೋಗಿಗಳು ಈ ಅಪಘಾತದಲ್ಲಿ ನಜ್ಜು ನುಜ್ಜಾಗಿದೆ. ಭೀಕರ ದೃಶ್ಯ ಮನಕಲುಕುತ್ತಿದೆ. ಘಟನಾ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಮತ್ತೊಂದೆಡೆ ತನಿಖೆ ನಡೆಯುತ್ತಿದೆ. ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು ದುರಂತ ಭಾರತದ ರೈಲ್ವೇ ಇತಿಹಾಸದಲ್ಲಿ ಘನಘೋರ ಅಪಘಾತಗಳಲ್ಲಿ ಒಂದು. ಈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಇದಕ್ಕೂ ಮೊದಲು ಹಲವು ಬಾರಿ ಅಪಘಾತವಾಗಿದೆ. ಹಲವು ಜೀವನಗಳನ್ನು ಬಲಿಪಡೆದುಕೊಂಡಿದೆ.

Add Asianetnews Kannada as a Preferred SourcegooglePreferred

ಚೆನ್ನೈ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು ಆರಂಭಗೊಂಡಿದ್ದು 46 ವರ್ಷಗಳ ಹಿಂದೆ. ಅಂದರೆ 1977ರಲ್ಲಿ. 1,662 ಕಿಲೋಮೀಟರ್ ದೂರದ ಪ್ರಯಾಣದ ಎಕ್ಸ್‌ಪ್ರೆಸ್ ರೈಲು 14 ನಿಲುಗಡೆ ಹೊಂದಿದೆ. ಒಟ್ಟು 25 ಗಂಟೆ 30 ನಿಮಿಷ ಪ್ರಯಾಣ. ಪ್ರತಿ ದಿನ ಓಡಾಡುವ ಈ ರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತದೆ. 2002ರಲ್ಲಿ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು ಮೊದಲ ಬಾರಿಗೆ ಅಪಘಾತವಾಗಿತ್ತು. ತಮಿಳುನಾಡಿನ ಪಾಡುಗುಪಾಡು ಬಳಿ ಹಳಿ ತಪ್ಪಿತ್ತು. ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸರಿಲ್ಲ. ಕೆಲವರು ಗಾಯಗೊಂಡಿದ್ದರು.

ರೈಲು ದುರಂತದ ಗಾಯಾಳು ಭೇಟಿ ಬಳಿಕ ಪ್ರಧಾನಿ ಮೋದಿ ಮಹತ್ವದ ಸೂಚನೆ, ಜೊತೆಗೊಂದು ಎಚ್ಚರಿಕೆ!

ಫೆಬ್ರವರಿ13, 2009ರಲ್ಲಿ ಚೆನ್ನೈ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು ಒಡಿಶಾದ ಜಾಜ್‌ಪುರ್ ಬಳಿ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ 15 ಪ್ರಯಾಣಿಕರು ಮೃತಪಟ್ಟಿದ್ದರು. ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಡಿಸೆಂಬರ್ 6, 2011ರಲ್ಲಿ ಇದೇ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು ಆಂಧ್ರಪ್ರದೇಶದ ನೆಲ್ಲೂರು ಬಳಿಯಲ್ಲಿ ಅಪಘಾತವಾಗಿತ್ತು. ಈ ದುರಂತದಲ್ಲಿ 32 ಮಂದಿ ಮೃತಪಟ್ಟಿದ್ದರು. ಗಾಯಗೊಂಡವರ ಸಂಖ್ಯೆ 100ಕ್ಕೂ ಅಧಿಕವಾಗಿತ್ತು. ಇನ್ನು ಜನವರಿ 14, 2012ರಲ್ಲಿ ಒಡಿಶಾದ ಲಿಂಗರಾಜ್ ರೈಲು ನಿಲ್ದಾಣದಲ್ಲಿ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು, ಜನರನ್ನು ಸುರಕ್ಷಿತವಾಗಿ ಹೊರತಂದಿದ್ದರು. ಅದೃಷ್ಠವಶಾತ್ ಯಾವುದೇ ಸಾವು ನೋವು ಸಂಭವಿಸರಿಲ್ಲ.

2012ರ ಬಳಿಕ ಅಂದರೆ 11 ವರ್ಷಗಳ ಬಳಿಕ ಇದೀಗ ಇದೇ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೀಡಾಗಿದೆ. ಈ ಬಾರಿ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು, ಯಶವಂತಪುರ-ಹೌರ ರೈಲು ಹಾಗೂ ಗೂಡ್ಸ್ ರೈಲು ಡಿಕ್ಕಿಯಾಗಿದೆ. ಹೀಗಾಗಿ ಸಾವು ಸೋವಿನ ಪ್ರಮಾಣ ಕೂಡ ಅಧಿಕವಾಗಿದೆ. ಈಗಾಗಲೇ ರಕ್ಷಣಾ ಕಾರ್ಯಗಳು ಅಂತ್ಯಗೊಂಡಿದೆ. ಇದೀಗ ರೈಲು ಬೋಗಿಗಳನ್ನು ಜಸಿಬಿ ಹಾಗೂ ಕ್ರೇನ್ ಮೂಲಕ ಎತ್ತಲಾಗಿದೆ. ರೈಲು ಹಳಿಗಳ ದುರಸ್ತಿ ಕಾರ್ಯಗಳು ನಡೆಯತ್ತಿದೆ.

ಇತ್ತ ಗಾಯಾಗಳುಗಳಿಗೆ ಎಲ್ಲಾ ನೆರವನ್ನು ಸರ್ಕಾರ ನೀಡಲಿದೆ. ಮೃತರ ಕುಟಂಬಕ್ಕೂ ಸರ್ಕಾರ ನೆರವು ಘೋಷಿಸಿದೆ. ಪ್ರಧಾನಿ ಮೋದಿ ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ತನಿಖೆಗೆ ಆದೇಶ ನೀಡಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿದೆ ಎಂದಿದ್ದಾರೆ.