ಕೊನೆಯ ಕ್ಯಾಬಿನೆಟ್ ಸಭೆ ನಡೆಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ, ಬಿಹಾರದಲ್ಲಿ ಆಗಿರುವ ರಾಜಕೀಯ ಬೆಳವಣಿಗೆಗಳ ಇದೀಗ ಮುಂದಿನ ಸಿಎಂ ರೇಸ್ನಲ್ಲಿ ಕೆಲವರು ಕಾಣಿಸಿಕೊಂಡಿದ್ದಾರೆ.
ಪಾಟ್ನಾ (ಏ.14) ಬಿಹಾರದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಕೊನೆಯ ಕ್ಯಾಬಿನೆಟ್ ಸಭೆ ನಡೆಸಿದ ನಿತೀಶ್ ಕುಮಾರ್, ಇದೀಗ ರಾಜ್ಯಪಾಲ ಸೈಯದ್ ಅತ್ನಾ ಹಸ್ನೈನ್ಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಕೊನೆಯ ಕ್ಯಾಬಿನೆಟ್ ಸಭೆಯಲ್ಲಿ ಸಚಿವ ಸಂಪುಟ ವಿಸರ್ಜನೆ ಮಾಡಿದ ನಿತೀಶ್ ಕುಮಾರ್, ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದಾರೆ.
ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ನಿತೀಶ್ ಕುಮಾರ್ ಏಪ್ರಿಲ್ 9 ರಂದು ರಾಜ್ಯಸಭೆ ಸದಸ್ಯರಾಗಿ ಪ್ರಮಮಾಣವಚನ ಸ್ವೀಕರಿಸಿದ್ದರು. 2 ದಶಕಗಳ ಬಳಿಕ ನಿತೀಶ್ ಕುಮಾರ್ ಮತ್ತೆ ಸಂಸತ್ತು ಪ್ರವೇಶಿಸಿದ್ದಾರೆ. ಇತ್ತ ಬಿಹಾರ ರಾಜಕೀಯದಲ್ಲಿ ನಿತೀಶ್ ಕುಮಾರ್ ಕಾಲ ಅತ್ಯಂತ ಪ್ರಮುಖವಾಗಿದೆ. ಜಿಡಿಯು ಮೂಲಕ ಬಿಹಾರದಲ್ಲಿ ಸುದೀರ್ಘ ಕಾಲಗಳ ಮೂಲಕ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಭಾವುಕ ಕ್ಷಣ
ನಿತೀಶ್ ಕುಮಾರ್ ರಾಜೀನಾಮೆ ನಮಗೆ ಭಾವನಾತ್ಮಕ ಕ್ಷಣವಾಗಿತ್ತು. ಬಿಹಾರದಲ್ಲಿ ಆಡಳಿತದ ಮೂಲಕ ಸುಧಾರಣೆ, ಅಭಿವೃದ್ಧಿ ಹಾಗೂ ನವ ಬಿಹಾರ ಪರಿಕಲ್ಪನೆಯಡಿ ಆಳಿದ ನಿತೀಶ್ ಕುಮಾರ್ ಇಂದು ರಾಜೀನಾಮೆ ನೀಡಿದ್ದಾರೆ. ಸಂಪುಟ ವಿಸರ್ಜನೆ ಮಾಹಿತಿ ನೀಡಿದ್ದ ನಿತೀಶ್ ಕುಮಾರ್, ಔಪಚಾರಿಕ ಮಾತುಕತೆ ನಡೆಸಿದ್ದಾರೆ ಎಂದು ರಾಜ್ಯ ಸಚಿವ ರಾಮ್ ಕೃಪಾಲ್ ಯಾದವ್ ಹೇಳಿದ್ದಾರೆ.
ಇಂದು ಬಿಹಾರ ಹೊಸ ಮುಖ್ಯಮಂತ್ರಿ ಘೋಷಣೆ
ಇಂದು ಸಂಜೆ 4 ಗಂಟೆಗೆ ಎನ್ಡಿಎ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಿಜದೆಪಿ 89 ಶಾಸಕರನ್ನು ಹೊಂದಿದೆ. ಬಿಹಾರದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿದೆ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ವೀಕ್ಷರಾಗಿ ಬಿಜೆಪಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ನೇಮಕ ಮಾಡಿದೆ. ಬಿಹಾರ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಹಲವು ಹೆಸರಗಳು ಕೇಳಿಬರುತ್ತಿದೆ. ಸಾಮ್ರಾಟ್ ಚೌಧರಿ, ನಿತ್ಯಾನಂದ ರೈ, ರೇಣು ದೇವಿ ಸೇರಿದಂತೆ ಕೆಲ ಪ್ರಮುಖ ಹೆಸರು ಮುಂಚೂಣಿಯಲ್ಲಿದೆ. ಇಂದೇ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ವಿಶೇಷ ಅಂದರೆ ಬಿಹಾರದಲ್ಲೂ ರೇಸ್ನಲ್ಲಿರುವ ನಾಯಕರ ಬಿಟ್ಟು, ಅಚ್ಚರಿ ನಾಯಕನನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರ ಅನ್ನೋ ಕುತೂಹಲ ಹೆಚ್ಚಾಗಿದೆ.


