CBI arrests teacher NEET: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಮತ್ತೋರ್ವರನ್ನ ಬಂಧನ ಮಾಡಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ್ದ ಪುಣೆಯ ಜೀವಶಾಸ್ತ್ರ ಶಿಕ್ಷಕಿಯನ್ನೇ ಈಗ ಅರೆಸ್ಟ್ ಮಾಡಲಾಗಿದೆ. ತನಿಖೆ ಬೇರೆ ರಾಜ್ಯಗಳಿಗೂ ವಿಸ್ತರಿಸಿದ್ದು, ವಿದ್ಯಾರ್ಥಿಗಳ ಆ*ತ್ಮಹ*ತ್ಯೆ ವಿಚಾರವಾಗಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.   

ಮುಂಬೈ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (NTA) ತೀವ್ರ ಮುಜುಗರ ಉಂಟುಮಾಡಿದೆ. ಈಗ ಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ನೇಮಕಗೊಂಡಿದ್ದ ಪುಣೆಯ ಜೀವಶಾಸ್ತ್ರ ಶಿಕ್ಷಕಿ ಮನಿಷಾ ಗುರುನಾಥ್ ಅವರನ್ನೇ ಸಿಬಿಐ ಬಂಧಿಸಿದೆ. ಈ ಮೂಲಕ ಹಗರಣದ ತನಿಖೆ ಮತ್ತೊಂದು ಹಂತಕ್ಕೆ ತಲುಪಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಸಮಿತಿಯಲ್ಲಿದ್ದ ರಸಾಯನಶಾಸ್ತ್ರ ಶಿಕ್ಷಕ ಪಿ.ವಿ. ಕುಲಕರ್ಣಿ ಅವರನ್ನು ನಿನ್ನೆ ಪುಣೆಯಲ್ಲಿ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ, ಪ್ರಾಣಿಶಾಸ್ತ್ರ (Zoology) ಮತ್ತು ಸಸ್ಯಶಾಸ್ತ್ರ (Botany) ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿದ್ದ ತಂಡದಲ್ಲಿದ್ದ ಮನಿಷಾ ಗುರುನಾಥ್ ಕೂಡ ಸಿಬಿಐ ಬಲೆಗೆ ಬಿದ್ದಿದ್ದಾರೆ.

ಎನ್‌ಟಿಎಯ ಉನ್ನತ ಅಧಿಕಾರಿಗಳಿಗೂ ತನಿಖೆಯ ಬಿಸಿ ತಟ್ಟುವ ಸಾಧ್ಯತೆ 

ಈ ಮೊದಲೇ ಪುಣೆ ಮತ್ತು ನಾಸಿಕ್‌ನಲ್ಲಿ ಬಂಧಿತರಾಗಿದ್ದ ಆರೋಪಿಗಳಿಗೆ ಮನಿಷಾ ಅವರೇ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ. ಪತ್ರಿಕೆ ಸಿದ್ಧಪಡಿಸಿದವರೇ ಬಂಧನಕ್ಕೊಳಗಾಗುತ್ತಿರುವುದು ಎನ್‌ಟಿಎ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ. ಎನ್‌ಟಿಎಯ ಕೆಲವು ಉನ್ನತ ಅಧಿಕಾರಿಗಳಿಗೂ ತನಿಖೆಯ ಬಿಸಿ ತಟ್ಟುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇರಳ ಸೇರಿದಂತೆ ಏಳು ರಾಜ್ಯಗಳಿಗೆ ಸೋರಿಕೆಯ ಜಾಲ ಹಬ್ಬಿದೆ. ಪ್ರಶ್ನೆಪತ್ರಿಕೆಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸಿದವರ ಮೇಲೂ ಸಿಬಿಐ ಕಣ್ಣಿಟ್ಟಿದೆ. ಕೆಲವು ಕೋಚಿಂಗ್ ಸೆಂಟರ್‌ಗಳು ಕೂಡ ಸಿಬಿಐ ರಡಾರ್‌ನಲ್ಲಿವೆ. ಕೇರಳದ ಪತ್ತನಂತಿಟ್ಟದಲ್ಲಿ ರಾಜ್ಯ ಗುಪ್ತಚರ ಇಲಾಖೆ ಕೆಲವು ಕೇಂದ್ರಗಳಲ್ಲಿ ಪರಿಶೀಲನೆ ನಡೆಸಿದೆ.

ವಿದ್ಯಾರ್ಥಿ ಆ*ತ್ಮಹ*ತ್ಯೆ

ಇದೇ ವೇಳೆ, ರಾಜಸ್ಥಾನದ ಸಿಕರ್‌ನಲ್ಲಿ ನೀಟ್ ಪರೀಕ್ಷೆ ಬರೆದಿದ್ದ ಪ್ರದೀಪ್ ಮೇಘ್ವಾಲ್ ಎಂಬ ವಿದ್ಯಾರ್ಥಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಪರೀಕ್ಷೆ ರದ್ದಾದ ಮೇಲೆ ಮನನೊಂದು ಆತ ಈ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆಯನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ರಾಹುಲ್ ಗಾಂಧಿ, "ಇದು ವಿದ್ಯಾರ್ಥಿಗಳ ಕೊ*ಲೆ, ಇದಕ್ಕೆ ಸರ್ಕಾರವೇ ಹೊಣೆ" ಎಂದು ತೀವ್ರವಾಗಿ ಟೀಕಿಸಿದ್ದಾರೆ.

ಪ್ರಶ್ನೆಪತ್ರಿಕೆ ಸಿದ್ಧಪಡಿಸಿದವರೇ ಬಂಧನಕ್ಕೊಳಗಾಗಿರುವುದು ಇದೊಂದು ವ್ಯವಸ್ಥಿತ ಭ್ರಷ್ಟಾಚಾರ ಎಂಬುದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಆರೋಪಿಸಿದೆ. ಇಷ್ಟೆಲ್ಲಾ ಅನಾಹುತವಾದರೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಥವಾ ಕೇಂದ್ರ ಸರ್ಕಾರ ಹೊಣೆ ಹೊತ್ತುಕೊಳ್ಳಲು ಸಿದ್ಧವಿಲ್ಲ ಎಂದು ಕಿಡಿಕಾರಿದೆ.