ಜನರ ಆಶೋತ್ತರಗಳನ್ನು ಈಡೇರಿಸುವ ಯೋಜನೆಗಳನ್ನು ರೂಪಿಸುವಾಗ ರಾಜ್ಯಗಳು ‘ಆರ್ಥಿಕವಾಗಿ ಕಾರ್ಯಸಾಧುವಾದ’ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಆಗ ರಾಜ್ಯಗಳ ಆರ್ಥಿಕತೆಯೂ ಬಲಿಷ್ಠವಾಗುತ್ತದೆ, ಜೊತೆಗೆ ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೊಳಿಸುವ ಶಕ್ತಿಯೂ ಬರುತ್ತದೆ ಎಂದು ಮೋದಿ ತಿಳಿಸಿದರು.

ನವದೆಹಲಿ (ಮೇ 28, 2023): 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಾಣ ಮಾಡಲು ರಾಜ್ಯಗಳು ಸಮಾನ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ, ಜನರ ಕನಸುಗಳನ್ನು ನನಸಾಗಿಸುವ ಹಾಗೂ ಆರ್ಥಿಕವಾಗಿ ದಕ್ಷವಾಗಿರುವ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗವರ್ನರ್‌ಗಳು ಪಾಲ್ಗೊಂಡಿದ್ದ ನೀತಿ ಆಯೋಗದ ಎಂಟನೇ ಆಡಳಿತ ಮಂಡಳಿ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ರಾಜ್ಯಗಳು ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿಯಾಗುತ್ತದೆ. ಇದಕ್ಕಾಗಿ ಎಲ್ಲಾ ರಾಜ್ಯಗಳು ಸಮಾನ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕು. ಆಗ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣವಾಗುತ್ತದೆ ಎಂದು ಹೇಳಿದರು.

Add Asianetnews Kannada as a Preferred SourcegooglePreferred

ಜನರ ಆಶೋತ್ತರಗಳನ್ನು ಈಡೇರಿಸುವ ಯೋಜನೆಗಳನ್ನು ರೂಪಿಸುವಾಗ ರಾಜ್ಯಗಳು ‘ಆರ್ಥಿಕವಾಗಿ ಕಾರ್ಯಸಾಧುವಾದ’ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಆಗ ರಾಜ್ಯಗಳ ಆರ್ಥಿಕತೆಯೂ ಬಲಿಷ್ಠವಾಗುತ್ತದೆ, ಜೊತೆಗೆ ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೊಳಿಸುವ ಶಕ್ತಿಯೂ ಬರುತ್ತದೆ ಎಂದು ತಿಳಿಸಿದರು.

ಇದನ್ನು ಓದಿ: ನೀತಿ ಆಯೋಗ ಸಭೆಗೆ ಗೈರಾಗಲಿರುವ ನಿತೀಶ್‌ ಕುಮಾರ್‌, ಕೆಸಿಆರ್‌: ಕೇಂದ್ರದ ವಿರುದ್ಧ ತೆಲಂಗಾಣ ಸಿಎಂ ಪತ್ರ ಬರೆದು ಆಕ್ರೋಶ

ನೀತಿ ಆಯೋಗದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಿದ್ದರು. ಸಭೆಯಲ್ಲಿ ಆರೋಗ್ಯ, ಕೌಶಲ್ಯಾಭಿವೃದ್ಧಿ, ಮಹಿಳಾ ಸಬಲೀಕರಣ, ಮೂಲಸೌಕರ್ಯ ಅಭಿವೃದ್ಧಿ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಕೇಂದ್ರ ಸಚಿವರಾದ ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌, ಪೀಯೂಷ್‌ ಗೋಯಲ್‌, ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ಜಾರ್ಖಂಡ್ ಮುಂತಾದ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ವರ್ಷಕ್ಕೊಮ್ಮೆ ನೀತಿ ಆಯೋಗದ ಪೂರ್ಣ ಆಡಳಿತ ಮಂಡಳಿ ಸಭೆ ನಡೆಯುತ್ತದೆ.

11 ಮುಖ್ಯಮಂತ್ರಿಗಳು ಗೈರು, ಬಿಜೆಪಿ ಆಕ್ರೋಶ
ನೀತಿ ಆಯೋಗದ ಸಭೆಗೆ 11 ರಾಜ್ಯಗಳ ಮುಖ್ಯಮಂತ್ರಿಗಳು ಗೈರಾಗಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ‘ಬೇಜವಾಬ್ದಾರಿ ಮುಖ್ಯಮಂತ್ರಿಗಳ ಜನವಿರೋಧಿ ನಡೆಯಿದು’ ಎಂದು ಕಿಡಿಕಾರಿದೆ. ಪ್ರಧಾನಿ ಅಧ್ಯಕ್ಷತೆಯ ಸಭೆಗೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಕೇರಳದ ಪಿಣರಾಯಿ ವಿಜಯನ್‌, ದೆಹಲಿಯ ಅರವಿಂದ ಕೇಜ್ರಿವಾಲ್‌, ಪಂಜಾಬ್‌ನ ಭಗವಂತ್‌ ಮಾನ್‌, ತೆಲಂಗಾಣದ ಕೆ.ಚಂದ್ರಶೇಖರ ರಾವ್‌, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಒಡಿಶಾದ ನವೀನ್‌ ಪಟ್ನಾಯಕ್‌, ತಮಿಳುನಾಡಿನ ಎಂ.ಕೆ.ಸ್ಟಾಲಿನ್‌ ಹಾಗೂ ಬಿಹಾರದ ನಿತೀಶ್‌ ಕುಮಾರ್‌ ಗೈರಾಗಿದ್ದರು. ಇದಕ್ಕೆ ಎಲ್ಲರೂ ಪ್ರತ್ಯೇಕ ಕಾರಣಗಳನ್ನು ನೀಡಿದ್ದಾರೆ.

ಇದನ್ನೂ ಓದಿ: Maternity Leave: ರಜಾ ಅವಧಿಯನ್ನು 6 ರಿಂದ 9 ತಿಂಗಳಿಗೆ ವಿಸ್ತರಿಸುವಂತೆ ನೀತಿ ಆಯೋಗದ ಸದಸ್ಯರ ಸಲಹೆ!

ಮುಖ್ಯಮಂತ್ರಿಗಳ ಗೈರುಹಾಜರಿ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಹಿರಿಯ ನಾಯಕ ರವಿಶಂಕರ್‌ ಪ್ರಸಾದ್‌, ‘ನೀತಿ ಆಯೋಗವು ದೇಶದ ಅಭಿವೃದ್ಧಿಗೆ ನೀಲನಕ್ಷೆಯನ್ನು ರೂಪಿಸುವ ಬಹಳ ಮುಖ್ಯವಾದ ಸಂಸ್ಥೆಯಾಗಿದೆ. 100ಕ್ಕೂ ಹೆಚ್ಚು ವಿಷಯಗಳು ಶನಿವಾರದ ಸಭೆಯಲ್ಲಿ ಚರ್ಚೆಯಾಗಿವೆ. ಇಂತಹ ಮಹತ್ವದ ಸಭೆಗೆ ಗೈರಾಗುವ ಮೂಲಕ ಕೆಲ ಮುಖ್ಯಮಂತ್ರಿಗಳು ತಮ್ಮ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಅವರ ಜನವಿರೋಧಿ ಮನಸ್ಥಿತಿ ಇಲ್ಲಿ ಅನಾವರಣಗೊಂಡಿದೆ’ ಎಂದು ಹೇಳಿದರು.

ಇದನ್ನೂ ಓದಿ: ನೀತಿ ಆಯೋಗ ಸಭೆ ಬಹಿಷ್ಕಾರ, ರಾಜ್ಯದ ಅಭಿವದ್ಧಿ ಬಹಿಷ್ಕರಿಸಿದಂತೆ, ಕೇಜ್ರಿವಾಲ್, ಬ್ಯಾನರ್ಜಿಗೆ ಖಡಕ್ ಸಂದೇಶ ರವಾನೆ!