ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಎಳೆದುತಂದು ಇದೀಗ ಜನರ ಆಕ್ರೋಶಕ್ಕೆ ಕೆಲ ಮುಖ್ಯಮಂತ್ರಿಗಳು ಗುರಿಯಾಗಿದ್ದಾರೆ. ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧದ ದ್ವೇಷದ ಕಾರಣದಿಂದ ನೀತಿ ಆಯೋಗ ಸಭೆ  ಬಹಿಷ್ಕರಿಸುವುದಾಗಿ ಘೋಷಿಸಿರುವ ಮುಖ್ಯಮಂತ್ರಿಗೆ ಖಡಕ್ ಸಂದೇಶ ರವಾನಿಸಲಾಗಿದೆ.

ನವದೆಹಲಿ(ಮೇ.27): ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರೋಧಿಸುವ ಕಾರಣದಿಂದ ಹಲವು ಕಾರ್ಯಕ್ರಮಗಳಿಗೆ ಬಹಿಷ್ಕಾರ ಹಾಕುವ ಟ್ರೆಂಡ್ ಇದೀಗ ಹೆಚ್ಚಾಗುತ್ತಿದೆ. ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭಕ್ಕೆ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಬಹಿಷ್ಕಾರ ಹಾಕಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಹಾಗೂ ದೇಶದ ಅಭಿವೃದ್ಧಿಗಾಗಿ ನಡೆಯುವ ಮಹತ್ವದ ನೀತಿ ಆಯೋಗದ ಸಭೆಗೂ ಕೆಲ ಮುಖ್ಯಮಂತ್ರಿಗಳು ಬಹಿಷ್ಕಾರ ಹಾಕಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ , ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ತೆಲಂಗಾಣ ಸಿಎಂ ಕೆಸಿಆರ್ ನೀತಿ ಆಯೋಗ ಸಭೆಗೆ ಬಹಿಷ್ಕಾರ ಹಾಕಿದ್ದಾರೆ. ರಾಜಕೀಯ ಕಾರಣಕ್ಕಾಗಿ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುವುದು ರಾಜ್ಯದ ಅಭಿವೃದ್ಧಿಯನ್ನೇ ಬಹಿಷ್ಕರಿಸಿದಂತೆ ಅನ್ನೋ ಸಂದೇಶ ರವಾನೆಯಾಗಿದೆ. 

ನೀತಿ ಆಯೋಗ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ರೂಪಿಸುವ ನೀಲನಕ್ಷೆ ಸಭೆಯಾಗಿದೆ. ಇದರ ಜೊತೆಗೆ ಈಗಾಗಲೇ ರೂಪಿಸಿರುವ ಯೋಜನೆಗಳ ಅನುಷ್ಠಾಣ, ಪ್ರಗತಿ ಕುರಿತು ಚರ್ಚೆ ನಡೆಯುತ್ತದೆ. ಪ್ರಮುಖವಾಗಿ 2047ರ ವೇಳೆ ಭಾರತದ ವಿಕ್ಷಿತ್ ಅಭಿವೃದ್ಧಿ ನೀಲ ನಕ್ಷೆ, MSMEಗಳಿಗೆ ಒತ್ತು, ಮೂಲಸೌಕರ್ಯ, ಹೂಡಿಕೆ, ಮಹಿಳಾ ಸಬಲೀಕರಣ, ಆರೋಗ್ಯ, ಪೋಷಣೆ, ಕೌಶಲ್ಯ ಅಭಿವೃದ್ಧಿ, ಪ್ರದೇಶಾಭಿವೃದ್ಧಿ ಹಾಗೂ ಸಾಮಾಜಿಕ ಮೂಲಸೌಕರ್ಯ ಗತಿಶಕ್ತಿ ಸೇರಿದಂತೆ 40ಕ್ಕೂ ಪ್ರಮುಖ ಕ್ಷೇತ್ರಗಳ ಅಭಿವೃದ್ಧಿ ನೀಲನಕ್ಷೆ ತಯಾರಿಸಿ ಕಾರ್ಯರೂಪದ ಕುರಿತು ಚರ್ಚೆ ನಡೆಯಲಿದೆ. ಇಂತಹ ಮಹತ್ವದ ಸಭೆಗೆ ಮುಖ್ಯಮಂತ್ರಿಗಳು ಗೈರಾದರೆ ಆಯಾ ರಾಜ್ಯದ ಅಭಿವೃದ್ಧಿಯೂ ಕುಂಠಿತವಾಗಲಿದೆ.

ಐಬಿ, ನೀತಿ ಆಯೋಗಕ್ಕೆ ಹೊಸ ಚೀಫ್, RAW ಕಾರ್ಯದರ್ಶಿ ಅವಧಿ ಇನ್ನೊಂದು ವರ್ಷ ವಿಸ್ತರಣೆ!

ಇಂದು(ಮೇ.27) ನಡೆಯಲಿರುವ 8ನೇ ನೀತಿ ಆಯೋಗ ಸಭೆಯಲ್ಲಿ 100ಕ್ಕೂ ಹೆಚ್ಚು ವಿಷಗಳು, ಅಭಿವೃದ್ಧಿ ಕ್ಷೇತ್ರಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜೊತೆಯಾಗಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಕಟ್ಟಕಡೆಯ ನಾಗರೀಕನಿಗೆ ತಲುಪಿಸುವ ಪ್ರಯತ್ನ ಈ ಸಭೆಯಲ್ಲಿ ನಡೆಯುತ್ತದೆ. ಈ ಹಿಂದೆ ನಡೆದ ನೀತಿ ಆಯೋಗ ಸಭೆಯಲ್ಲಿ ಚರ್ಚಿಸಲಾದ ಅಂಶಗಳು, ಯೋಜನೆಗಳು, ಬಳಿಕ ಅದನ್ನು ಕಾರ್ಯರೂಪಕ್ಕೆ ತಂದಿರುವ ಕುರಿತು ಚರ್ಚಿಸಲಾಗುತ್ತದೆ. ಈ ವಿಚಾರದಲ್ಲಿ ಈ ಹಿಂದಿನ ನೀತಿ ಆಯೋಗದಲ್ಲಿ ಚರ್ಚಿಸಿರುವ ಬಹುತೇಕ ಯೋಜನೆಗಳು ಅನುಷ್ಠಾನಗೊಂಡಿದೆ. ಇನ್ನು ಕೆಲವು ಅಂತಿಮ ಹಂತದಲ್ಲಿದೆ.

ರಾಜ್ಯಸಭೆಯಲ್ಲಿ ದಿಲ್ಲಿ ಸುಗ್ರೀವಾಜ್ಞೆ ವಿರುದ್ಧ ಮತ: ಕೇಜ್ರಿಗೆ ಶಿವಸೇನೆ ಭರವಸೆ

ಪ್ರಗತಿ ಮೈದಾನದಲ್ಲಿ ಆಯೋಜಿಸಿರುವ ಈ ಬಾರಿಯ ನೀತಿ ಆಯೋಗದ ಸಭೆಗೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ. ಮೋದಿ ವಿರೋಧಿಸುವ ಹಲವು ನಾಯಕರು ಇದೀಗ ರಾಜ್ಯದ ಅಭಿವೃದ್ಧಿಯನ್ನೇ ಕಡೆಗಣಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆಗೆ ಅರವಿಂದ್‌ ಕೇಜ್ರಿವಾಲ್‌, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಸಿಂಗ್‌ , ಮಮತಾ ಬ್ಯಾನರ್ಜಿ, ನೀತಿಶ್ ಕುಮಾರ್, ಕೆಸಿಆರ್ ಬಹಿಷ್ಕಾರ ಘೋಷಣೆ ಮಾಡಿದ್ದಾರೆ. ದಿಲ್ಲಿ ಸರ್ಕಾರದ ಅಧಿಕಾರ ಮೊಟಕುಗೊಳಿಸುವ ನಿರ್ಧಾರ ಖಂಡಿಸಿ ಕೇಜ್ರಿವಾಲ್‌ ಹಾಗೂ ಮಾನ್‌ ಸಭೆ ಬಹಿಷ್ಕರಿಸುತ್ತಿದ್ದಾರೆ. ಇನ್ನು ಕೇಂದ್ರದ ಜತೆ ಒಂದಿಲ್ಲೊಂದು ವಿಷಯಕ್ಕೆ ಸಂಘರ್ಷಕ್ಕೆ ಇಳಿದಿರುವ ಮಮತಾ ಬ್ಯಾನರ್ಜಿ ಕೂಡ ಸಭೆಯಿಂದ ದೂರ ಉಳಿಯಲಿದ್ದಾರೆ. ಆದರೆ ಅದಕ್ಕೆ ಅವರು ಕಾರಣ ತಿಳಿಸಿಲ್ಲ.