ವಿಪಕ್ಷಗಳ ಜೊತೆ ರಾಹುಲ್ ಗಾಂಧಿ ವಿಶೇಷ ಸಭೆ, ಉಪಹಾರ ಕೂಟ ರಾಹುಲ್ ಸಭೆಯಲ್ಲಿ ಶರದ್ ಪವಾರ್ ಪುತ್ರಿ ಭಾಗಿ ಈ ಸಭೆ ಬಳಿಕ ಇದೀಗ ಶರದ್ ಪವಾರ್ ದಿಢೀರ್ ಅಮಿತ್ ಶಾ ಭೇಟಿಗೆ ರೆಡಿ

ನವದೆಹಲಿ(ಆ.03): ಕೇಂದ್ರದಲ್ಲಿ ರಾಜಕೀಯ ಬೆಳವಣಿಗೆಗಳು ಚುರುಕಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ದೆಹಲಿ ಪ್ರವಾಸದ ಬಳಿಕ ವಿಪಕ್ಷಗಳು ಒಂದಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಡಲು ಸಜ್ಜಾಗುತ್ತಿದೆ. ಇದಕ್ಕೆ ಪೂರಕವಾಗಿ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಪಕ್ಷ ನಾಯಕರ ಜೊತೆ ಉಪಹಾರ ಕೂಟ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಪಾಲ್ಗೊಂಡಿದ್ದರು. ಇದೀಗ ಶರದ್ ಪವಾರ್, ಗೃಹ ಸಚಿವ ಅಮಿತ್ ಶಾ ಭೇಟಿಗೆ ಮುಂದಾಗಿದ್ದಾರೆ. ಈ ಮೂಲಕ ಕೇಂದ್ರದಲ್ಲಿ ರಾಜಕೀಯ ರಣತಂತ್ರ ಸದ್ದಿಲ್ಲದೆ ಜೋರಾಗುತ್ತಿದೆ.

ಪ್ರಧಾನಿ ಮೋದಿ ಭೇಟಿಯಾದ ಶರದ್ ಪವಾರ್, ರಾಷ್ಟ್ರ ರಾಜಕಾರಣದಲ್ಲಿ ಸಂಚಲನ!

ಜುಲೈ 17 ರಂದು ಶರದ್ ಪವಾರ್ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದರು. ಈ ಭೇಟಿಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಪವಾರ್ ಸ್ಪಷ್ಟಡಿಸಿದ್ದರು. ಇದೀಗ 17 ದಿನದ ಬಳಿಕ ಪವಾರ್ ಅಮಿತ್ ಶಾ ಭೇಟಿಯಾಗುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಮಹಾರಾಷ್ಟ್ರದ ಕೊರೋನಾ ವೈರಸ್ ಹಾಗೂ ಪ್ರವಾಹ, ಭೂಕುಸಿತ ಪರಿಹಾರ ಕ್ರಮಗಳ ಕುರಿತು ಚರ್ಚಿಸಲು ಶರದ್ ಪವಾರ್, ಅಮಿತ್ ಶಾ ಭೇಟಿಯಾಗುತ್ತಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಆದರೆ ಅಸಲಿಗೆ ಇದೇ ಕಾರಣವೇ ಅನ್ನೋದು ಮಾತ್ರ ಗೌಪ್ಯವಾಗಿಯೇ ಇರಲಿದೆ. 

2024ರ ಚುನಾವಣೆ ಹೋರಾಡಲು ಎಡರಂಗ ಮಾತ್ರ ಸಾಲದು, ಕಾಂಗ್ರೆಸ್ ಬೇಕು: ಶರದ್ ಪವಾರ್!

ಜುಲೈನಲ್ಲಿ ಪ್ರಧಾನಿ ಮೋದಿ ಭೇಟಿಯಾಗಿದ್ದ ಶರದವ್ ಪವಾರ್ ಹೊಸದಾಗಿ ರಚಿಸಿದ್ದ ಸಹಕಾರ ಸಚಿವಾಲಯದ ಕುರಿತು ಚರ್ಚಿಸಿದ್ದರು. ಈ ವೇಳೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದೀಗ ಶರದ್ ಪವಾರ್ ಭೇಟಿಯಲ್ಲಿ ಮಹಾರಾಷ್ಟ್ರದ ಮಹಾ ವಿಕಾಸ್ ಅಘಡಿ ಸರ್ಕಾರ ಹಾಗೂ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸುವ ಸಾಧ್ಯತೆ ಇದೆ ಎಂದ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.