ಅಧಿಕಾರಿಗಳ ಎಡವಟ್ಟು: ಪ್ರಶ್ನೋತ್ತರ ವಿವಾದ ಪೇಚಿಗೆ ಸಿಲುಕಿದ ಸಚಿವೆ ಮೀನಾಕ್ಷಿ ಲೇಖಿ
ಲೇಖಿ ಹೆಸರಿನಲ್ಲಿ ಲೋಕಸಭೆ ಮತ್ತು ವಿದೇಶಾಂಗ ಸಚಿವಾಲಯದ ವೆಬ್ಸೈಟ್ನಲ್ಲಿ ಉತ್ತರ ಪ್ರಕಟವಾಗಿದೆ. ಉತ್ತರಕ್ಕೆ ಸಹಿ ಹಾಕಿದವರ ಜಾಗದಲ್ಲಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರ ಹಸ್ತಾಕ್ಷರ ಇದೆ.
ನವದೆಹಲಿ (ಡಿಸೆಂಬರ್ 10, 2023): ಪ್ರಶ್ನೆಗಾಗಿ ಲಂಚ ಹಗರಣದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ವಜಾ ಮಾಡಿದ ಬೆನ್ನಲ್ಲೇ, ವಿದೇಶಾಂಗ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಲೋಕಸಭೆಯಲ್ಲಿ ಪ್ರಶ್ನೆ ವಿವಾದಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಕುರಿತು ತನಿಖೆಗೆ ವಿಪಕ್ಷಗಳು ಒತ್ತಾಯಿಸಿದ್ದಾರೆ, ತನಿಖೆ ಬಳಿಕ ದೋಷಿಗಳು ಯಾರು ಎಂಬುದು ತಿಳಿದುಬರಲಿದೆ ಎಂದು ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.
ಕೇರಳದ ಕಣ್ಣೂರು ಲೋಕಸಭಾ ಕ್ಷೇತ್ರದ ಸಂಸದ ಸುಧಾಕರನ್, ‘ಭಾರತದಲ್ಲಿ ಹಮಾಸ್ ಸಂಘಟನೆಯನ್ನು ಉಗ್ರ ಸಂಘಟನೆಯೆಂದು ಘೋಷಿಸುವ ಪ್ರಸ್ತಾಪ ಇದೆಯೇ? ಇದ್ದರೆ ಅದರ ಕುರಿತ ಮಾಹಿತಿ ಏನಿದೆ? ಇಲ್ಲವೆಂದಾದಲ್ಲಿ ಅದಕ್ಕೆ ಕಾರಣವೇನು? ಹಮಾಸ್ ಅನ್ನು ಉಗ್ರ ಸಂಘಟನೆ ಎಂದು ಘೋಷಿಸುವ ಕುರಿತು ಇಸ್ರೇಲ್ ಸರ್ಕಾರಕ್ಕೆ ಮನವಿ ಮಾಡಿದೆಯೇ? ಮಾಡಿದ್ದರೆ ಅದರ ವಿವರಗಳೇನು? ಎಂದು ಪ್ರಶ್ನಿಸಿದ್ದರು.
ಇದನ್ನು ಓದಿ: ಪಕ್ಷ ವಿರೋಧಿ ಚಟುವಟಿಕೆ ಆರೋಪ: ದಾನಿಶ್ ಅಲಿ ಬಿಎಸ್ಪಿಯಿಂದ ಅಮಾನತು
ಇದಕ್ಕೆ ಶುಕ್ರವಾರ ಮೀನಾಕ್ಷಿ ಲೇಖಿ ಹೆಸರಿನಲ್ಲಿ ಲೋಕಸಭೆ ಮತ್ತು ವಿದೇಶಾಂಗ ಸಚಿವಾಲಯದ ವೆಬ್ಸೈಟ್ನಲ್ಲಿ ಉತ್ತರ ಪ್ರಕಟವಾಗಿದೆ. ‘ಯಾವುದೇ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಘೋಷಿಸುವುದು ಕಾನೂನು ಬಾಹಿರಗಳ ಚಟುವಟಿಕೆ ತಡೆ ಕಾಯ್ದೆಯಡಿ ಮತ್ತು ಇಂಥ ಘೋಷಣೆ ಮಾಡುವುದು ಸಂಬಂಧಪಟ್ಟ ಇಲಾಖೆಗಳು ಎಂದು ಉತ್ತರಿಸಲಾಗಿದ್ದು, ಉತ್ತರಕ್ಕೆ ಸಹಿ ಹಾಕಿದವರ ಜಾಗದಲ್ಲಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರ ಹಸ್ತಾಕ್ಷರ ಇದೆ.
ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಮೀನಾಕ್ಷಿ ಲೇಖಿ, ‘ಈ ಪ್ರಶ್ನೆ ಮತ್ತು ಅದಕ್ಕೆ ನೀಡಿರುವ ಉತ್ತರಕ್ಕೆ ನಾನು ಸಹಿ ಹಾಕಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು’ ಎಂದಿದ್ದಾರೆ.
ಇಂದು ರಾಜಸ್ಥಾನ, ಛತ್ತೀಸ್ಗಢ ಸಿಎಂ ಘೋಷಣೆ? ನಾಳೆ ಮಧ್ಯಪ್ರದೇಶ ಸಿಎಂ ಆಯ್ಕೆ ಸಾಧ್ಯತೆ
ವಿಪಕ್ಷ ಟೀಕೆ:
ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆಯ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚರ್ತುವೇದಿ, ‘ಬೇರೆಯವರು ಪ್ರಸ್ತಾಪಿಸಿದ ಪ್ರಶ್ನೆಯನ್ನು ಕೇಳಿದ್ದಕ್ಕೆ ಶುಕ್ರವಾರ ಸಂಸದೆಯೊಬ್ಬರ ವಜಾ ಆಗಿದೆ. ಇಂದು ಸಚಿವೆಯೊಬ್ಬರು, ತಾವು ಪ್ರಶ್ನೆಗೆ ಉತ್ತರವನ್ನೇ ನೀಡಿಲ್ಲ ಎನ್ನುತ್ತಿದ್ದಾರೆ. ಅದು ತಿರುಚಿದ ಉತ್ತರ ಎನ್ನುತ್ತಿದ್ದಾರೆ. ಅದು ನಿಜವೇ ಆಗಿದ್ದಲ್ಲಿ ನಿಯಮಗಳ ಸ್ಪಷ್ಟ ಉಲ್ಲಂಘನೆ. ಹಾಗಿದ್ದರೆ ಈ ಕುರಿತು ತನಿಖೆ ಆಗಬೇಡವೇ? ಇದಕ್ಕೆ ಯಾರಾದರೂ ಹೊಣೆ ಹೊರಬೇಕಲ್ಲವೇ? ಎಂದು ಟ್ವಿಟ್ಟರ್ನಲ್ಲಿ ಪ್ರಶ್ನಿಸಿದ್ದಾರೆ.
‘ಮತ್ತೊಂದೆಡೆ ನಿಮ್ಮ ಹೆಸರಲ್ಲಿ ಯಾರು ನಿಮ್ಮ ಖಾತೆಗೆ ಲಾಗಿನ್ ಆಗಿದ್ದರು?’ ಎಂದು ಕಾಂಗ್ರೆಸ್ ನಾಯಕ ಅಮಿತಾಭ್ ದುಬೆ ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿ: ಲೋಕ ಚುನಾವಣೆ ಗೆಲ್ಲಲು ‘ಕೈ’ ಪಣ: 4 ರಾಜ್ಯಗಳಲ್ಲಿನ ಸೋಲಿನ ಪರಾಮರ್ಶೆ ನಡೆಸಿದ ಕಾಂಗ್ರೆಸ್ ನಾಯಕರು