ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಪ್ರಯಾಣಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ನವದೆಹಲಿ (ಫೆಬ್ರವರಿ 4, 2023): ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸದ್ಯ ದೇಶದ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಹಾಗೂ ಅತಿ ವೇಗದ ಭಾರತೀಯ ರೈಲುಗಳಲ್ಲಿ ಒಂದಾಗಿದೆ. ಈಗಾಗಲೇ ಹಲವು ವಂದೇ ಭಾರತ್‌ ರೈಲುಗಳನ್ನು ದೇಶದ ವಿವಿಧ ಭಾಗಗಳಲ್ಲಿ ಉದ್ಘಾಟನೆ ಮಾಡಲಾಗಿದ್ದು, ಈ ಪೈಕಿ ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ತೆಲಮಗಾಣದ ಸಿಕಂದರಾಬಾದ್‌ ನಡುವಿನ ರೈಲೂ ಸಹ ಒಂದು. ಈ ರೈಲಿನಲ್ಲಿ ಇತ್ತೀಚೆಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿಯೊಬ್ಬರು ನೂರಾರು ಕಿ.ಮೀ. ಸುತ್ತುವಂತಾಗಿದ್ದ ಸುದ್ದಿಯಾಗಿತ್ತು. 

ಈಗ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರಾರಂಭವಾದ ಸುಮಾರು ಒಂದು ತಿಂಗಳ ನಂತರ, ರೈಲಿನಲ್ಲಿ (Train) ಕಳಪೆ ಗುಣಮಟ್ಟದ ಆಹಾರ (Food) ನೀಡುತ್ತಿರುವುದನ್ನು ತೋರಿಸುವ ವಿಡಿಯೋವನ್ನು (Video) ಪ್ರಯಾಣಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ (Social Media) ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್ ಪ್ರಕಾರ, ವಿಶಾಖಪಟ್ಟಣದಿಂದ ಹೈದರಾಬಾದ್ ಕಡೆಗೆ ಸಾಗುವ ವಂದೇ ಭಾರತ್ ರೈಲಿನಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ.

ಇದನ್ನು ಓದಿ: ಬರಲಿದೆ 220 ಕಿಮೀ ವೇಗದ ವಂದೇ ಭಾರತ್‌ ರೈಲು: ಭಾರತದ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆ

ಈ ವಿಡಿಯೋ ಕ್ಲಿಪ್‌ನಲ್ಲಿ, ಪ್ರಯಾಣಿಕನು ತಾನು ರೈಲಿನಲ್ಲಿ ಸೇವಿಸಿದ ಆಹಾರದಿಂದ ಎಣ್ಣೆಯನ್ನು (Oil) ಹಿಂಡುತ್ತಿರುವುದನ್ನು ಕಾಣಬಹುದು. ಕೇಂದ್ರ ಸರ್ಕಾರವು ಮಹತ್ವಾಕಾಂಕ್ಷೆಯಿಂದ ಪರಿಚಯಿಸಿದ ವಂದೇ ಭಾರತ್ ರೈಲಿನಲ್ಲಿ ಆಹಾರದ ಬೆಲೆ ತುಂಬಾ ಹೆಚ್ಚಾಗಿದೆ, ಆದರೆ ಗುಣಮಟ್ಟ ತುಂಬಾ ಕಳಪೆಯಾಗಿದೆ ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ತಿಳಿಸಲಾಗಿದೆ.

ಈ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:

Scroll to load tweet…

ಇನ್ನು, ಈ ವಿಡಿಯೋವನ್ನು ಹಲವಾರು ಬಳಕೆದಾರರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಹಲವು ನೆಟ್ಟಿಗರು ಐಆರ್‌ಸಿಟಿಸಿ ವಿರುದ್ಧ ತರಾಟೆಗೆ ತೆಗೆದುಕೊಂಡಿದ್ದಾರೆ. ತಮಗೂ ಇದೇ ರೀತಿಯ ಅನುಭವ ಆಗಿದೆ ಎಂದು ಇನ್ನು ಕೆಲವರು ಐಆರ್‌ಸಿಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ವಂದೇ ಭಾರತ್‌ ಟ್ರೈನ್‌ನಲ್ಲಿ ಸೆಲ್ಫಿ ತೆಗೆಯಲು ಹೋಗಿ ರೈಲಿನೊಳಗೆ ಸಿಲುಕಿದ ಭೂಪ..!

ಈ ಹಿನ್ನೆಲೆ ಈ ವಿಡಿಯೋ ಕ್ಲಿಪ್‌ಗೆ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಸಹ ಪ್ರತಿಕ್ರಿಯೆ ನೀಡಿದೆ. "ಸರ್, ಸರಿಪಡಿಸುವ ಕ್ರಮಗಳಿಗಾಗಿ ಸಂಬಂಧಪಟ್ಟ ಅಧಿಕಾರಿಗೆ ತಿಳಿಸಲಾಗಿದೆ" ಎಂದು ಐಆರ್‌ಸಿಟಿಸಿ ತಮ್ಮ ಟ್ವಿಟ್ಟರ್‌ ಖಾತೆಯಿಂದ ಟ್ವೀಟ್‌ ಮಾಡಿದೆ. 

Scroll to load tweet…

ಈ ಮಧ್ಯೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ನೆಲದ ಮೇಲೆ ಕಸ ಹರಡಿರುವುದನ್ನು ತೋರಿಸುವ ಮತ್ತೊಂದು ಫೋಟೋ, ವಿಡಿಯೋ ಇತ್ತೀಚೆಗೆ ವೈರಲ್‌ ಆದ ನಂತರ ಈ ವಿಡಿಯೋ ವೈರಲ್‌ ಆಗುತ್ತಿದೆ. ಭಾರತೀಯ ಆಡಳಿತ ಸೇವೆಗಳ (ಐಎಎಸ್) ಅಧಿಕಾರಿ ಅವನೀಶ್ ಶರಣ್ ಅವರು ಹಂಚಿಕೊಂಡಿದ್ದ ಫೋಟೋದಲ್ಲಿ ರೈಲಿನೊಳಗೆ ಅಲ್ಲಲ್ಲಿ ಖಾಲಿ ಬಾಟಲಿಗಳು, ಬಳಸಿದ ಆಹಾರದ ಕಂಟೇನರ್‌ಗಳು ಮತ್ತು ಪ್ಲಾಸ್ಟಿಕ್ ಕವರ್‌ಗಳನ್ನು ತೋರಿಸಿದೆ. ಹಾಗೆ, ಕಾರ್ಮಿಕರೊಬ್ಬರು ನೆಲವನ್ನು ಸ್ವಚ್ಛಗೊಳಿಸಲು ಪೊರಕೆ ಹಿಡಿದುಕೊಂಡಿರುವುದು ಕಂಡುಬಂದಿದೆ.

ಇದನ್ನೂ ಓದಿ: ಉದ್ಘಾಟನೆಗೂ ಮುನ್ನವೇ ವಿಶಾಖಪಟ್ಟಣದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲೆಸೆದ ಕಿಡಿಗೇಡಿಗಳು..!

ಈ ಫೋಟೋ ಟ್ವಿಟ್ಟರ್‌ನಲ್ಲಿ ಹಲವಾರು ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಎಕ್ಸ್‌ಪ್ರೆಸ್ ರೈಲಿನೊಳಗೆ ಕಸ ಎಸೆಯುತ್ತಿರುವುದನ್ನು ಖಂಡಿಸಿರುವ ನೆಟ್ಟಿಗರು ದೇಶವನ್ನು ಸ್ವಚ್ಛವಾಗಿಡಲು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಇನ್ನು, ಈ ಫೋಟೋಗೆ ಪ್ರತಿಕ್ರಿಯೆ ನೀಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಈ ರೈಲುಗಳಲ್ಲಿ ಸ್ವಚ್ಛತಾ ಅಭ್ಯಾಸವನ್ನು ಬದಲಾಯಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಮಾನಗಳಲ್ಲಿ ಸ್ವಚ್ಛತಾ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ರೀತಿ ಸ್ವಚ್ಛತಾ ಪ್ರಕ್ರಿಯೆಯನ್ನು ಅಳವಿಡಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ವಂದೇ ಭಾರತ್ ರೈಲುಗಳಲ್ಲಿ ಶುಚಿಗೊಳಿಸುವ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ ಎಂದು ಹೇಳಿದ ಅವರು, ರೈಲುಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಲು ಜನರ ಸಹಕಾರವನ್ನು ಸಹ ಕೋರಿ ಅಶ್ವಿನಿ ವೈಷ್ಣವ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ವಂದೇ ಭಾರತ್‌ಗೆ ಕಲ್ಲೆಸೆದ ಮೂವರು ಬಾಲಕರ ಬಂಧನ