ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದೆ ಹಾವು, 10 ದಿನದಲ್ಲಿ 7 ಸಾವು, 60 ಮಂದಿ ಆಸ್ಪತ್ರೆ ದಾಖಲು , ಎಲ್ಲೆಂದರಲ್ಲಿ ಹಾವು ಕಾಣಿಸಿಕೊಳ್ಳುತ್ತಿದೆ. ದಿಢೀರ್ ಹಾವಿನ ಸಂಕಷ್ಟ ಕಾಣಿಸಿಕೊಳ್ಳಲು ಕಾರಣವೇನು? 

ತಿರುವನಂತಪುರಂ (ಮೇ.01) ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಬೆಚ್ಚಿ ಬೀಳುತ್ತೇವೆ. ಇನ್ನು ಪಕ್ಕದಲ್ಲೇ ಪ್ರತ್ಯಕ್ಷವಾದರೆ ಜೀವ ಕೈಗೆ ಬರುತ್ತೆ. ಇದೀಗ ಎಲ್ಲೆಡೆಗಳು ಹಾವು ಕಾಣಿಸಿಕೊಳ್ಳುತ್ತಿದೆ. ಹಾವಿನ ಕಡಿತ ಕೇಸ್ ಹೆಚ್ಚಾಗುತ್ತಿದೆ. ಕೇರಳದಲ್ಲಿ ಹಾವಿನಿಂದ ಸಾಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾವು ಕಡಿತ ಹಾಗೂ ಸರಣಿ ಸಾವಿನಿಂದ ಕೇರಳ ಕಂಗಾಲಾಗಿದೆ. ಕಳೆದ 10 ದಿನಗಳಲ್ಲಿ 60 ಹಾವು ಕಡಿತ ಪ್ರಕರಣ ದಾಖಲಾಗಿದೆ. ಈ ಪೈಕಿ 7 ಮಂದಿ ಮೃತಪಟ್ಟಿದ್ದಾರೆ. ಕೇರಳಕ್ಕೆ ಹಾವಿನ ಸಂಕಷ್ಟ ಎದುರಾಗಿದ್ದು ಹೇಗೆ?

ಕಂಗಾಲಾದ ಕೇರಳ

ಭಾರತದಲ್ಲಿ ಬೇಸಿಗೆ ಕಾಲ ಜನರನ್ನು ಹೈರಾಣು ಮಾಡುತ್ತಿದೆ. ಹಾವುಗಳಿಗೂ ವಿಪರಿತ ಬಿಸಿಲು ತಡೆಯಲು ಸಾಧ್ಯವಾಗುತ್ತಿಲ್ಲ. ತಣ್ಣನೆ ಪ್ರದೇಶ ಹುಡುಕಿ ಹಾವುಗಳು ಮನೆಯೊಳಗೆ ಸೇರಿಕೊಳ್ಳುತ್ತಿದೆ. ಬೆಡ್ ಒಳಗೆ, ತಲೆದಿಂಬು, ಬಾತ್‌ರೂಂ ಸೇರಿದಂತೆ ಎಲ್ಲೆಡೆ ಹಾವುಗಳು ಸೇರಿಕೊಳ್ಳುತ್ತಿದೆ. ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹಾವು ಕಡಿತ ಪ್ರಕರಣ ಹೆಚ್ಚು. ಇದೀಗ ಕೇರಳ ಈ ಸಮಸ್ಯೆಯಿಂದ ಕಂಗಾಲಾಗಿದೆ.

ಎಪ್ರಿಲ್ 20ರಂದು 8ರ ಬಾಲಕ ಸಾವು

ತಿರುವನಂತಪುರದಲ್ಲಿ ಎಪ್ರಿಲ್ 20 ರಂದು 8 ವರ್ಷದ ದೀಕ್ಷಾಲ್ ದಿಲೀಪ್ ಹಾವು ಕಚ್ಚಿ ಮೃತಪಟ್ಟಿದ್ದ. ಮನೆಯ ಬೆಡ್ ಅಡಿಯಲ್ಲಿ ಸೇರಿಕೊಂಡಿದ್ದ ಹಾವು ಇಬ್ಬರು ಮಕ್ಕಳನ್ನು ಕಚ್ಚಿತ್ತು. ಅದೇ ದಿನ ಕಿಲಿಮಾನೂರ್ ಪ್ರದೇಶದ 75 ವರ್ಷದ ಸುಧಾರ್ಮ ಹಾವು ಕಚ್ಚಿ ಸಾವು ಕಂಡಿದ್ದರು.

ಎಪ್ರಿಲ್ 22ರಂದು ತ್ರಿಶೂರ್ ಜಿಲ್ಲೆಯ 8 ವರ್ಷದ ಅಲ್ಜೋ ಸಿಲ್ಡೋ, ಅನೂಶ್ ಎಂಬ ಬಾಲಕರು ಹಾವು ಕಚ್ಚಿ ಸಾವು ಕಂಡಿದ್ದಾರೆ. ಮನೆಯಲ್ಲಿ ಪರಿಶೀಲಿಸಿದಾಗ 5 ಹಾವುಗಳು ಮನೆಯಲ್ಲಿ ಪತ್ತೆಯಾಗಿತ್ತು. ಆಲಪುಝಾ ಜಿಲ್ಲೆಯ 42ರ ಹರೆಯ ಸಲೀನಾ, 65 ವರ್ಷದ ಇಂದಿರಾ ರಘು, ಕಣ್ಣೂರು ಜಿಲ್ಲೆಯ 70 ವರ್ಷಧ ನಫೀಸಾ, ಇಡುಕ್ಕಿ ಜಿಲ್ಲೆಯ 75 ವರ್ಷ ವಿಶಾಲಾಕ್ಷಿ ಹಾವು ಕಚ್ಚಿ ಸಾವು ಕಂಡಿದ್ದಾರೆ.

ಹಾವು ತಜ್ಞರ ಎಚ್ಚರಿಕೆ

ಭಾರಿ ಬಿಸಿಲು, ತಾಪಮಾನ ಹೆಚ್ಚಳದಿಂದ ಹಾವುಗಳು ತಣ್ಣನೆ ಪ್ರದೇಶ ಅರಸಿ ಬರುತ್ತದೆ. ಇದೇ ವೇಳೆ ಹಾವುಗಳಿಗೆ ಈ ಸಮಯದಲ್ಲಿ ಆಹಾರಗಳ ಕೊರತೆ ಕಾಣುತ್ತದೆ. ಹೀಗಾಗಿ ಹಾವುಗಳು ಮನೆ ಒಳಗೆ ಸೇರಿಕೊಳ್ಳುತ್ತದೆ. ಹೀಗಾಗಿ ಮನೆಯಲ್ಲಿ ಬೆಡ್, ದಿಂಬು, ಶೌಚಾಲಯ ಸೇರಿದಂತೆ ಎಲ್ಲಾ ಪ್ರದೇಶಗಳನ್ನು ಪರಿಶೀಲಿಸುವುದು ಅಗತ್ಯ ಎಂದಿದ್ದಾರೆ.