ಕೇರಳದಲ್ಲಿ ತನ್ನ ಮಗಳನ್ನು ಮದ್ರಸಾಗೆ ಕರೆದುಕೊಂಡು ಹೋಗಲು ವ್ಯಕ್ತಿಯೊಬ್ಬರು ಲೋಡ್‌ ಆಗಿರುವ ಏರ್‌ ಗನ್‌ ಹಿಡಿದುಕೊಂಡು ಹೋಗಿದ್ದಾರೆ. ಬೀದಿ ನಾಯಿ ಹಾವಳಿ ತಡೆಯಲು ಅವರು ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಕೇರಳ ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ (Street Dog Scare) ಹೆಚ್ಚಾಗಿದೆ. ಈ ಬಗ್ಗೆ ಹಲವರು ಪಿಣರಾಯಿ ವಿಜಯನ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಹಾಗೂ ಹಲವರು ಭಯದಲ್ಲೇ ಬದುಕುತ್ತಿದ್ದಾರೆ. ಈ ಮಧ್ಯೆ, ವ್ಯಕ್ತಿಯೊಬ್ಬ ತನ್ನ ಮಗಳನ್ನು ಇತರ ಮಕ್ಕಳೊಂದಿಗೆ ಕಾಸರಗೋಡಿನ ಮದರಸಾವೊಂದಕ್ಕೆ ಲೋಡ್ ಮಾಡಿದ ಏರ್ ಗನ್ (Loaded Air Gun) ಹಿಡಿದುಕೊಂಡು ಹೋಗಿದ್ದಾರೆ. ಈ ಘಟನೆಯ ವಿಡಿಯೋ ವೈರಲ್‌ ಆಗಿದೆ. ಕಾಸರಗೋಡಿನ (Kasaragod) ಪಳ್ಳಿಕೆರೆ ಪಂಚಾಯಿತಿಯ ಬೇಕಲ್‌ನ (Bekal) ಹಡದ ನಗರದ ಸಮೀರ್. ಟಿ ಎಂಬಾತ ತನ್ನ ಮಗಳು ರಿಫಾ ಸುಲ್ತಾನಾ (9) ಸೇರಿದಂತೆ ಹತ್ತಾರು ವಿದ್ಯಾರ್ಥಿಗಳೊಂದಿಗೆ ಏರ್ ಗನ್ ಹಿಡಿದುಕೊಂಡು ಮಕ್ಕಳ ಮುಂಭಾಗದಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಅಲ್ಲದೆ, ಬೀದಿ ನಾಯಿ ಮಕ್ಕಳ ಮೇಲೆ ದಾಳಿ ಮಾಡಲು ಮುಂದಾದರೆ ಶೂಟ್ ಮಾಡುತ್ತೇನೆ ಎಂದು ಸಮೀರ್ ಜೋರಾಗಿ ಹೇಳುತ್ತಿರುವುದು ಕೇಳಿಬರುತ್ತಿದೆ. ಈ ಬಗ್ಗೆ ಅವರ ಮಗ ವಿಡಿಯೋ ಚಿತ್ರೀಕರಿಸಿ ವಾಟ್ಸಾಪ್‌ನಲ್ಲಿ ಶೇರ್ ಮಾಡಿದ್ದು, ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Add Asianetnews Kannada as a Preferred SourcegooglePreferred

ಬೀದಿನಾಯಿಗಳಿಗೆ ಹೆದರಿ ಮದರಸಾಕ್ಕೆ ಹೋಗುತ್ತಿಲ್ಲ ಎಂದು ಗುರುವಾರ ಬೆಳಗ್ಗೆ ರಿಫಾ ಹೇಳಿದ ಬಳಿಕ ತಾನು ಮಕ್ಕಳ ಜೊತೆ ಹೋಗಿದ್ದೆ ಎಂದು ಸಮೀರ್ ಹೇಳಿದ್ದಾರೆ. "ಮದರಸಾವು ನನ್ನ ಮನೆಯಿಂದ 60 ಮೀ ದೂರದಲ್ಲಿದೆ ಮತ್ತು ಆ ಪ್ರದೇಶದಲ್ಲಿ ಸಾಕಷ್ಟು ಬೀದಿ ನಾಯಿಗಳಿವೆ. ಇತರ ಮಕ್ಕಳು ಸಹ ಹೊರಗೆ ಹೋಗಲು ಹೆದರುತ್ತಾರೆ ಎಂದು ಹೇಳಿದರು. ನಂತರ ನಾನು ನನ್ನ ಹೆಂಡತಿಗೆ ಏರ್ ಗನ್ ತರಲು ಹೇಳಿದೆ ಮತ್ತು ಅವರಿಗೆ ಧೈರ್ಯ ತುಂಬಲು ನಾನು ಮುಂದೆ ನಡೆದೆ" ಎಂದು ಅವರು ಹೇಳಿದರು.

ಇದನ್ನು ಓದಿ: ನೀವು ಶ್ವಾನಗಳ ಮಾಲೀಕರ: ಹಾಗಿದ್ರೆ ನಿಮಗೂ ಈ ಅನುಭವ ಆಗಿರಬೇಕು : Viral Video

ಗುರುವಾರ ಬೆಳಗ್ಗೆ 9 ಗಂಟೆಗೆ ವಿದ್ಯಾರ್ಥಿ ತರಗತಿ ಮುಗಿಸಿ ಮನೆಗೆ ಮರಳುತ್ತಿದ್ದಾಗ ಮದರಸಾ ವಿದ್ಯಾರ್ಥಿಯೊಬ್ಬನಿಗೆ ಬೀದಿ ನಾಯಿ ಕಚ್ಚಿದೆ ಎಂದೂ ಸಮೀರ್ ಹೇಳಿದ್ದಾರೆ. ಇನ್ನು, "ವಿಡಿಯೋವನ್ನು ನೋಡಿದ ಮೇಲೆ ಜನರು ಮತ್ತು ಅಧಿಕಾರಿಗಳು ಸಮಸ್ಯೆಯ ಅಗಾಧತೆಯನ್ನು ಅರಿತುಕೊಳ್ಳಬೇಕೆಂದು ನಾನು ಬಯಸುತ್ತೇನೆ" ಎಂದೂ ಅವರು ಹೇಳಿದರು. ತಂದೆಯಾಗಿ ತಮ್ಮ ಮಕ್ಕಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದಾಗಿ ವ್ಯಕ್ತಿ ಹೇಳಿಕೊಂಡಿದ್ದಾರೆ. ಅಲ್ಲದೆ, ಏರ್ ಗನ್ ಅನ್ನು ಸಾಗಿಸಲು ಯಾವುದೇ ಪರವಾನಗಿಯ ಅಗತ್ಯವಿಲ್ಲ. ಅದರ ಸದ್ದು ಕೇಳಿದರೆ ನಾಯಿಗಳು ಓಡಿ ಹೋಗುತ್ತವೆ. ಪೋಷಕರು ತಮ್ಮ ಮಕ್ಕಳನ್ನು ತರಗತಿಗೆ ಒಂಟಿಯಾಗಿ ಕಳುಹಿಸಬಾರದು ಎಂದು ಮದರಸಾ ನಿರ್ಧರಿಸಿದೆ ಎಂದೂ ಸಮೀರ್‌ ಹೇಳಿಕೊಂಡಿದ್ದಾರೆ. 

ಏರ್‌ಗನ್‌ ಹಿಡಿದುಕೊಂಡು ಹೋಗುತ್ತಿದ್ದ ವ್ಯಕ್ತಿ ವಿರುದ್ಧ ಕೇಸ್‌ ದಾಖಲು
ಕೇರಳದ ಕಾಸರಗೋಡಿನ ಸಮೀಪದ ಮದರಸಾಕ್ಕೆ ತನ್ನ ಮಕ್ಕಳನ್ನು ಬೀದಿ ನಾಯಿಗಳಿಂದ ರಕ್ಷಿಸಲು ಏರ್ ಗನ್ ಹಿಡಿದುಕೊಂಡು ಹೋಗುತ್ತಿದ್ದ ವ್ಯಕ್ತಿ ವಿರುದ್ಧ ಶನಿವಾರ ಪ್ರಕರಣ (Case) ದಾಖಲಾಗಿದೆ. ಶಸ್ತ್ರಧಾರಿ ಸಮೀರ್ ಎಂಬಾತ ಮಕ್ಕಳ ಗುಂಪನ್ನು ಮದರಸಾಕ್ಕೆ ಕರೆದೊಯ್ಯುತ್ತಿರುವ ವಿಡಿಯೋ ವೈರಲ್ ಆದ ಒಂದು ದಿನದ ನಂತರ ಪೊಲೀಸರು ತಾನಾಗಿಯೇ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 153 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬೇಕಲ್‌ ಪೊಲೀಸರು ತಿಳಿಸಿದ್ದಾರೆ. 

ಇದನ್ನೂ ಓದಿ: ಝೋಮ್ಯಾಟೋ ಡೆಲಿವರಿ ಬಾಯ್‌ ಖಾಸಗಿ ಅಂಗ ಕಚ್ಚಿದ ಜರ್ಮನ್ ಶೆಫರ್ಡ್ ಶ್ವಾನ: ಭಯಾನಕ ವಿಡಿಯೋ

ನಾಯಿಗಳ ಜನಸಂಖ್ಯೆ ನಿಯಂತ್ರಿಸಲು ಅಥವಾ ಆಂಟಿ ರೇಬಿಸ್ ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಜನರಲ್ಲಿ ವಿಶ್ವಾಸವನ್ನು ಮೂಡಿಸಲು ಸರ್ಕಾರದ ಅಸಮರ್ಥತೆಯ ಬಗ್ಗೆ ಹೆಚ್ಚುತ್ತಿರುವ ಟೀಕೆಗಳ ನಡುವೆ, ಪಿಣರಾಯಿ ವಿಜಯನ್‌ ಸರ್ಕಾರವು ಕ್ರಮಗಳನ್ನು ಕೈಗೊಳ್ಳಲು ಪ್ರಾರಂಭಿಸಿದೆ. ಬೀದಿ ನಾಯಿಗಳಿಗೆ ಲಸಿಕೆ ಹಾಕಲು ಮತ್ತು ಹೆಚ್ಚಿನ ಪ್ರಾಣಿ ಜನನ ನಿಯಂತ್ರಣ ಕೇಂದ್ರಗಳನ್ನು ತೆರೆಯಲು ಸರ್ಕಾರವು ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 20ರವರೆಗೆ ಕೇರಳ ರಾಜ್ಯಾದ್ಯಂತ ಸಾಮೂಹಿಕ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದೆ.