ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಕೇವಲ ಎರಡಕ್ಕೆ ಇಳಿಸಲು ಸಚಿವರ ಗುಂಪು ಒಪ್ಪಿಗೆ ನೀಡಿದೆ. ದೆಹಲಿಯ ಬೀದಿನಾಯಿಗಳನ್ನು ಶೆಡ್‌ಗೆ ಸ್ಥಳಾಂತರಿಸುವ ಬಗ್ಗೆ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಲಿದೆ. 

ಬೆಂಗಳೂರು (ಆ.22): ಇಂದಿನ ಪ್ರಮುಖ ಸುದ್ದಿಗಳಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು ಸರಳೀಕರಿಸಲು ಸಚಿವರ ಗುಂಪು ಒಪ್ಪಿಗೆ ನೀಡಿದೆ. ಇನ್ನು ಮುಂದೆ ಜಿಎಸ್‌ಟಿಯಲ್ಲಿ ಶೇ. 5 ಹಾಗೂ 18ರಷ್ಟು ಮಾತ್ರವೇ ತೆರಿಗೆ ವಿಧಿಸಲು ಸಚಿವರ ಗುಂಪು ಒಪ್ಪಿಗೆ ನೀಡಿದೆ. ಅದರೊಂದಿಗೆ ಸುಪ್ರೀಂ ಕೋರ್ಟ್‌ ಇಂದು ದೆಹಲಿಯ ಬೀದಿನಾಯಿಗಳನ್ನು ಶೆಡ್‌ಗೆ ಹಾಕುವ ಬಗ್ಗೆ ತನ್ನ ತೀರ್ಪನ್ನು ಪ್ರಕಟ ಮಾಡಲಿದೆ. ಉಳಿದಂತೆ ದಿನದ ಐದು ಪ್ರಮುಖ ಸುದ್ದಿಗಳ ವಿವರ ಇಲ್ಲಿದೆ.

Add Asianetnews Kannada as a Preferred SourcegooglePreferred

1. ಶೇ.12, ಶೇ.28 ಜಿಎಸ್‌ಟಿ ಸ್ಲ್ಯಾಬ್‌ ರದ್ದತಿಗೆ ಸಚಿವರ ಗುಂಪು ಒಪ್ಪಿಗೆ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಲ್ಲಿ ಹಾಲಿ ಇರುವ ನಾಲ್ಕು ತೆರಿಗೆಯ ಸ್ಲ್ಯಾಬ್‌ಗಳನ್ನು ಎರಡಕ್ಕಿಳಿಸುವ ಕೇಂದ್ರ ಸರ್ಕಾರದ ಮಹತ್ವದ ಪ್ರಸ್ತಾಪಕ್ಕೆ ಗುರುವಾರ ಕರ್ನಾಟಕದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೂ ಇದ್ದ ರಾಜ್ಯ ಸಚಿವರ ಗುಂಪು (ಜಿಎಂಒ) ಅನುಮೋದನೆ ನೀಡಿದೆ. ಹೀಗಾಗಿ ಶೇ.90ರಷ್ಟು ವಸ್ತುಗಳ ದರ ಈಗಿಗಿಂತ ಅಗ್ಗವಾಗುವ ನಿರೀಕ್ಷೆ ಇದೆ.

2. ದಿಲ್ಲಿ ಬೀದಿ ನಾಯಿ ಶೆಡ್‌ಗೆ : ಇಂದು ಸುಪ್ರೀಂನಲ್ಲಿ ತೀರ್ಪು

ದೆಹಲಿಯಲ್ಲಿ ಬೀದಿ ನಾಯಿಗಳನ್ನು ಊರ ಹೊರಗಿನ ಶೆಡ್‌ಗಳಿಗೆ ಸ್ಥಳಾಂತರದ ಬಗ್ಗೆ ಆ.11 ರಂದು ದ್ವಿಸದಸ್ಯ ಪೀಠ ನೀಡಿದ್ದ ಆದೇಶ ತಡೆ ಹಿಡಿಯಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಪ್ರಕಟಿಸಲಿದೆ.

3. ಧರ್ಮಸ್ಥಳಕ್ಕಾಗಿ ಧರ್ಮಯುದ್ಧ- 1 ವಾರ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಪ್ರತಿಭಟನೆ : ಬಿವೈವಿ

ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಹಾಗೂ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ಪ್ರತಿಪಕ್ಷ ಬಿಜೆಪಿ ಶುಕ್ರವಾರದಿಂದ ಒಂದು ವಾರ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ‘ಧರ್ಮದ ಉಳಿವಿಗಾಗಿ ಧರ್ಮ ಯುದ್ಧ’ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.

4. ನಮ್ಮವರಿಂದ, ನಮ್ಮದೇ ರಾಕೆಟ್‌ ಮೂಲಕ ಅತಿ ಶೀಘ್ರ ಬಾಹ್ಯಾಕಾಶಯಾನ : ಶುಕ್ಲಾ

ನಮ್ಮ ನೆಲದಿಂದಲೇ ಒಬ್ಬರು, ನಮ್ಮದೇ ಕ್ಯಾಪ್ಸೂಲ್‌ನಲ್ಲಿ ಕುಳಿತು, ನಮ್ಮದೇ ರಾಕೆಟ್‌ ಮೂಲಕ ಬಾಹ್ಯಾಕಾಶಕ್ಕೆ ತೆರಳುವ ದಿನ ಸನಿಹದಲ್ಲಿದೆ ಎಂದು ಗಗನಯಾತ್ರಿ ಶುಭಾಂಶು ಶುಕ್ಲಾ ಭರವಸೆ ವ್ಯಕ್ತಪಡಿಸಿದ್ದಾರೆ.

5. ಗದ್ದಲದಲ್ಲೇ ಮುಗಿದ ಸಂಸತ್ತಿನ ಮಳೆಗಾಲದ ಅಧಿವೇಶನ

ಸುಮಾರು ಒಂದು ತಿಂಗಳಷ್ಟು ಸುದೀರ್ಘ ಕಾಲ ನಡೆದ ಸಂಸತ್ತಿನ ಮಳೆಗಾಲದ ಅಧಿವೇಶನ ಗುರುವಾರ ಮುಕ್ತಾಯಗೊಂಡಿದೆ. ಈ ಅವಧಿಯಲ್ಲಿ ಒಟ್ಟು 21 ದಿನಗಳ ಕಾಲ ನಡೆದ ಕಲಾಪದಲ್ಲಿ ಆನ್‌ಲೈನ್‌ ಗೇಮ್‌ಗಳಿಗೆ ಕಡಿವಾಣ ಹಾಕುವ ವಿಧೇಯಕ ಸೇರಿ ಲೋಕಸಭೆಯಲ್ಲಿ 12 ಮತ್ತು ರಾಜ್ಯಸಭೆಯಲ್ಲಿ 14 ವಿಧೇಯಕಗಳಿಗೆ ಅನುಮೋದನೆ ಪಡೆಯಲಾಯಿತು.