Karnataka news Live: ರಾಜ್ಯ ಬಿಜೆಪಿಯ ರೆಬೆಲ್ ಬಣದ ಶಕ್ತಿ ಪ್ರದರ್ಶನಕ್ಕೆ ತಯಾರಿ

ಅತ್ತ ರಾಷ್ಟ್ರ ರಾಜಧಾನಿಯಲ್ಲಿ ಭೂ ಕಂಪಿಸಿ, ತುಸು ತಲ್ಲಣ ಸೃಷ್ಟಿಸಿದರೆ ಕರ್ನಾಟಕದಲ್ಲಿ ಮುದ್ದು ಮಗುವ ಕೊಂದು ಸಾವಿಗೆ ಶರಣಾದ ಗ್ರಾಪ ಪಂಚಾಯತಿ ಅಧ್ಯಕ್ಷೆ ಸುದ್ದಿ ಸದ್ದು ಮಾಡುತ್ತಿದೆ. ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಇಂಥ ಕೃತ್ಯಕ್ಕೆ ಮುಂದಾಗಿದ್ದಾರೆನ್ನಲಾಗುತ್ತಿದೆ. ಒಂದೆಡೆ ಬಿಜೆಪಿ ನಾಯಕರು ಹೊಸ ರಾಜ್ಯಾಧ್ಯಕ್ಷರ ಬೇಡಿಕೆ ಇಟ್ಟರೆ, ಮತ್ತೊಂದೆಡೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೋ, ಬೇಡ್ವೋ ಎಂಬ ಚರ್ಚೆಗಳು ನಡೆಯುತ್ತಲೇ ಇದೆ. ಇಂದು ಇಡೀ ದಿನ ರಾಜ್ಯ ಹಾಗೂ ದೇಶ, ವಿದೇಶದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳ ಸಂಕ್ಷಿಪ್ತ ಸುದ್ದಿ ಇಲ್ಲಿದೆ
ಒಳ್ಳೆಯ ಕೆಲಸಗಳಿಗೆ ಭಗವಂತ ಯಾವ ರೂಪದಲ್ಲಾದರೂ ಸಹಾಯ ಮಾಡುತ್ತಾನೆ: ನಿಖಿಲ್ ಕುಮಾರಸ್ವಾಮಿ
ಫೆ.20ಕ್ಕೆ ಸಭೆ ನಡೆಸೋಕೆ ಸಜ್ಜಾದ್ರಾ ರೆಬೆಲ್ಸ್ ನಾಯಕರು?

ಬೆಂಗಳೂರಿನ ರಸ್ತೆಗಳ ಕಸ ಗುಡಿಸೋದಕ್ಕೆ ವರ್ಷಕ್ಕೆ 100 ಕೋಟಿ
ನಾವು ಸ್ವೀಪಿಂಗ್ ಮಷಿನ್ಸ್ ತೆಗೆದುಕೊಳ್ತಾ ಇಲ್ಲ ಯಂತ್ರಗಳನ್ನು ನಿರ್ವಾಹಣೆ ಮಾಡಲು ಆಗೋದಿಲ್ಲ. ಸ್ವೀಪಿಂಗ್ ಮಷಿನ್ ಖರೀದಿಯಲ್ಲಿ ನಮ್ಮ ಹಳೆಯ ಅನುಭವ ಸರಿ ಹೋಗಿಲ್ಲ. ವರ್ಷಕ್ಕೆ100 ಕೋಟಿಯಂತೆ ಏಳು ವರ್ಷಕ್ಕೆ 700 ಕೋಟಿ ವೆಚ್ಚದ ಒಪ್ಪಂದಕ್ಕೆ ಸರ್ಕಾರಕ್ಕೆ ಅನುಮೋದನೆಗೆ ಕಳುಹಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಅಯುಕ್ತ ತುಷಾರ್ ಗಿರಿ ನಾಥ್ ಹೇಳಿದ್ದಾರೆ.
ಉದಯಗಿರಿ ಪೊಲೀಸ್ ಠಾಣೆ ಗಲಭೆ ಪ್ರಕರಣ
ವಿವಾದಿತ ಪೋಸ್ಟ್ ಹಾಕಿದ ಸತೀಶ್ಗೆ ಮೈಸೂರು ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಎರಡನೇ ಅಪರ ಸಿವಿಲ್ ನ್ಯಾಯಾಧೀಶೆ ಸರೋಜ ಅವರು ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಆರೋಪಿ ಸತೀಶ್ ಪರ ವಕೀಲ ಹ.ಮಾ.ಭಾಸ್ಕರ್ ವಾದ ಮಂಡಿಸಿದ್ದರು.
ದೆಹಲಿಗೆ ಹೊರಟ ಪರಮೇಶ್ವರ್
ಗೃಹ ಸಚಿವ ಜಿ ಪರಮೇಶ್ವರ್ ದೆಹಲಿಗೆ ಹೊರಟಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ದಲಿತ ಸಚಿವರು ಒಬ್ಬರಾದ ಮೇಲೆ ಒಬ್ಬರಂತೆ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಪಕ್ಷದ ವರಿಷ್ಠರನ್ನು ದಲಿತ ಸಚಿವರು ಪ್ರತ್ಯೇಕವಾಗಿ ಭೇಟಿಯಾಗುತ್ತಿರುವುದು ಕುತೂಹಲ ಮೂಡಿಸಿದೆ.
ಹಣ ಜಮೆ ಆಗಿಲ್ಲ ಅಂತ ಯಾರು ಹೇಳಿದ್ದು?
ಅನ್ನಭಾಗ್ಯ ಮತ್ತು ಗೃಹಲಕ್ಷ್ಮೀ ಹಣ ಬಿಡುಗಡೆ ಆಗಿಲ್ಲ ಎಂಬ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಹಣ ಜಮೆ ಆಗಿಲ್ಲ ಅಂತ ಯಾರು ಹೇಳಿದ್ದು? ನೋಡಪ್ಪ, ಯಾವುದನ್ನು ಕೂಡ ನಿಲ್ಲಿಸೋ ಪ್ರಶ್ನೆ ಇಲ್ಲ. ಇಲ್ಲಿಯವರೆಗೆ ಮಾಡಿದ್ದೀವಿ ಅಂದ್ರೆ ಮುಂದೆಯೂ ಮಾಡುತ್ತೇವೆ. ಮೂರು ತಿಂಗಳಿಂದ ಪೆಂಡಿಂಗ್ ಇರೋದು ನನಗೆ ಗೊತ್ತಿಲ್ಲ, ಕೂಡಲೇ ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಮ್ಮದು ಒಂದೇ ಬಣ ಅದು ಕಾಂಗ್ರೆಸ್
ನಮ್ಮಲ್ಲಿ ಯಾವುದೇ ಬಣಗಳಿಲ್ಲ. ನಮ್ಮದು ಒಂದೇ ಬಣ ಅದು ಕಾಂಗ್ರೆಸ್. ಮಾಧ್ಯಮ ಮಿತ್ರರಿಗೆ ಮಾತ್ರ ಬಣಗಳು ಕಾಣಸ್ತಿವೆ. ಈ ವಿಚಾರವನ್ನ ನಾನು ಚರ್ಚೆ ಮಾಡದಿದ್ದರೂ, ನೀವೇ ಮಾಡಿಸ್ತೀರಾ? ನಾನು ಏನಾದರೂ ರಾಂಗ್ ಹೇಳಿದ್ರೆ ನೀವು ಬ್ರೇಕಿಂಗ್ ನ್ಯೂಸ್ ಕೊಡ್ತಿರಾ? ಅದಕ್ಕೆ ನಮ್ಮಲ್ಲಿ ಬಣಗಳಿಲ್ಲಾ..ಕಾಂಗ್ರೆಸ್ ನವರೆಲ್ಲಾ ಒಟ್ಟಿಗೆ ಇದ್ದೀವಿ. ಇಡೀ ರಾಜ್ಯದಲ್ಲಿ ನಾವು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಜಾರ್ಜ್ ಹೇಳಿದ್ದಾರೆ.
ಮಾರ್ಚ್ 7 ರಂದು ರಾಜ್ಯ ಬಜೆಟ್ : ಸಿಎಂ ಸಿದ್ದರಾಮಯ್ಯ
ಮಾರ್ಚ್ 3 ರಂದು ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಈ ವರ್ಷದ ಮೊದಲ ಅಧಿವೇಶನವಾಗಿರುವುದರಿಂದ ರಾಜ್ಯಪಾಲರ ಭಾಷಣ ನಡೆಯಲಿದೆ. ಭಾಷಣದ ಕುರಿತು 3 ದಿನಗಳ ಕಾಲ ಚರ್ಚೆ ನಡೆಯಲಿದೆ. ನಂತರ ಮಾರ್ಚ್ 7 ರಂದು ಬಜೆಟ್ ಮಂಡಿಸಲಾಗುವುದು. ಚರ್ಚೆಯ ನಂತರ ಮಾರ್ಚ್ ಅಂತ್ಯದಲ್ಲಿ ನಾನು ಮಾತನಾಡುತ್ತೇನೆ. ಅಧಿವೇಶನವನ್ನು ಎಷ್ಟು ದಿನಗಳವರೆಗೆ ನಡೆಸಬೇಕೆಂದು ವ್ಯವಹಾರ ಸಲಹಾ ಸಮಿತಿ ನಿರ್ಧರಿಸುತ್ತದೆ. ನನಗೆ ಮೊಣಕಾಲು ನೋವು ಇದ್ದರೂ, ಇಂದು ನಾನು ಹಲವಾರು ಇಲಾಖೆಗಳೊಂದಿಗೆ ಸಭೆ ನಡೆಸಿದ್ದೇನೆ. ನಾನು ವಿಧಾನಸೌಧಕ್ಕೆ ಬಂದಿದ್ದೇನೆ, ನಾಯಕರು ಬಂದರು ಮತ್ತು ಅವರು ತಮ್ಮ ಅಭಿಪ್ರಾಯಗಳನ್ನು ನನಗೆ ನೀಡಿದ್ದಾರೆ. ಅವರ ಎಲ್ಲಾ ಬೇಡಿಕೆಗಳನ್ನು ನಾವು ಮನಸ್ಸಿನಲ್ಲಿಟ್ಟುಕೊಂಡು ಅದಕ್ಕೆ ಅನುಗುಣವಾಗಿ ಪರಿಗಣಿಸುತ್ತೇವೆ. ರಾಜ್ಯ ಸರ್ಕಾರ ರೈತರ ಪರವಾಗಿದೆ ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅಶ್ವಿನ್ ವೈಷ್ಣವ್ ರೈಲ್ವೆ ಸಚಿವರೇ ಅಥವಾ ಡಿ-ರೈಲ್ ಸಚಿವರೇ: ಕಾಂಗ್ರೆಸ್ ಸಂಸದನ ವಾಗ್ದಾಳಿ
ನವದೆಹಲಿ ರೈಲು ನಿಲ್ದಾಣದಲ್ಲಿ ನಡೆದ ರೈಲು ದುರಂತದ ನಂತರ ರೈಲ್ವೆ ಇಲಾಖೆಯ ಬಗ್ಗೆ ವಿರೋಧ ಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ, ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವರು ರೈಲ್ವೆ ಸಚಿವರೇ ಅಥವಾ ಡಿರೈಲ್(ಹಳಿ ತಪ್ಪಿದ) ರೈಲ್ವೆ ಸಚಿವರೇ ಎಂದು ಪ್ರಶ್ನಿಸಿದ ಅವರು, ಅಶ್ವಿನ್ ವೈಷ್ಣವ್ ಅವಧಿಯಲ್ಲಿ ಆದಷ್ಟು ರೈಲ್ವೆ ಅನಾಹುತಗಳು ಯಾರ ಅವಧಿಯಲ್ಲಿಯೂ ಆಗಿಲ್ಲ ಎಂದು ದೂರಿದರು.
ಮೆಟ್ರೋ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಗೂಬೆ ಕೂರಿಸುತ್ತಿದೆ :ಸಚಿವ ರಾಮಲಿಂಗಾರೆಡ್ಡಿ
ಮೆಟ್ರೋ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಗೂಬೆ ಕೂರಿಸುತ್ತಿದೆ ಬಿಜೆಪಿ ಅವರು ಎಷ್ಟು ದಿನ ಈ ರೀತಿ ಬೂಟಾಟಿಕೆ ರಾಜಕೀಯ ಮಾಡ್ತೀರಾ ರೈಲ್ವೆ ಸಚಿವರಿಗೂ ಸುಳ್ಳಿನ ಸರದಾರ ಎಂಬ ಕುಖ್ಯಾತಿ ನೀಡಿದ ಕೀರ್ತಿ ಬಿಜೆಪಿಗೆಗೆ ಸಲ್ಲುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಕುಟುಂಬದ ನಾಲ್ವರ ದುರಂತ ಅಂತ್ಯ; ಇಂಚಿಂಚು ಮಾಹಿತಿ ಬಿಚ್ಚಿಟ್ಟ ಪೊಲೀಸರು!
ಮೈಸೂರಿನಲ್ಲಿ ಕುಟುಂಬದ ನಾಲ್ವರ ದುರಂತ ಅಂತ್ಯ; ಇಂಚಿಂಚು ಮಾಹಿತಿ ಬಿಚ್ಚಿಟ್ಟ ಪೊಲೀಸರು!
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವಿಗೀಡಾಗಿರುವ ದುರ್ಘಟನೆ ಸಂಭವಿಸಿದೆ. ಹಣಕಾಸಿನ ನಷ್ಟದ ವಿಚಾರಕ್ಕೆ ಮನೆಯ ಯಜಮಾನನೇ ತನ್ನ ಕುಟುಂಬದ ಸದಸ್ಯರಾದ ತಾಯಿ, ಹೆಂಡತಿ ಹಾಗೂ ಮಗನನ್ನು ತಾನೇ ಕೊಲೆ ಮಾಡಿದ್ದಾನೆ. ನಂತರ ಆತನ ಸಹೋದರನಿಗೆ ಕರೆ ಮಾಡಿ ತಾನು ಸಾವಿಗೆ ಶರಣಾಗುವುದಾಗಿ ಕರೆ ಮಾಡಿ ತಿಳಿಸಿ ನೇಣು ಬಿಗಿದುಕೊಂಡಿದ್ದಾನೆ.
ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನದಿಂದ ಗುಂಡಿನ ದಾಳಿ
ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಪೂಂಚ್ನಲ್ಲಿ ಪಾಕಿಸ್ತಾನದ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಪೂಂಚ್ನ ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಗುಂಡಿನ ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನದವರ ದಾಳಿಗೆ ಭಾರತೀಯ ಸೇನೆಯೂ ದಿಟ್ಟ ಉತ್ತರ ನೀಡಿದೆ ಜಮ್ಮು ಕಾಶ್ಮೀರದ ಪೊಲೀಸರು ಹಾಗೂ ಗಡಿ ಭದ್ರತಾ ಪಡೆಯ ಮಧ್ಯೆ ಉತ್ತಮ ಸಹಕಾರವಿದೆ. ಭಯೋತ್ಪಾದನೆಯನ್ನು ಯಾವುದೇ ಬೆಲೆ ತೆತ್ತಾದರೂ ನಿಲ್ಲಿಸಬೇಕು ಎಂದು ಅವರಿಗೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ನೀಡಿದರು.
ಪ್ರಯಾಗ್ರಾಜ್ ಭೇಟಿ ಬಳಿಕ ಅಯೋಧ್ಯೆಗೆ ಭೇಟಿ ನೀಡುತ್ತಿರುವ ಭಕ್ತರು: ರಾಮಜನ್ಮಭೂಮಿಯಲ್ಲಿ ಕಿಕ್ಕಿರಿದು ಸೇರಿದ ಜನ
ಪ್ರಯಾಗ್ರಾಜ್ ಭೇಟಿ ಬಳಿಕ ಅಯೋಧ್ಯೆಗೆ ಭೇಟಿ ನೀಡುತ್ತಿರುವ ಭಕ್ತರು: ರಾಮಜನ್ಮಭೂಮಿಯಲ್ಲಿ ಕಿಕ್ಕಿರಿದು ಸೇರಿದ ಜನ
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ದಿನವೂ ಕೋಟಿ ಕೋಟಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಇಲ್ಲಿ ಪುಣ್ಯಸ್ನಾನ ಮಾಡುವ ಭಕ್ತರು ನಂತರ ಅಯೋಧ್ಯೆ ಹಾಗೂ ಕಾಶಿಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಅಯೋಧ್ಯೆಗೆ ತೆರಳುವ ಮಾರ್ಗಗಳು ಕಿಕ್ಕಿರಿದು ತುಂಬಿದು ಕಾಲಿಡಲು ಸಾಧ್ಯವಾಗದಂತಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ರಾಮಲಲ್ಲಾನ ದರ್ಶನ ಪಡೆಯಲು ಭಕ್ತರು ಆಗಮಿಸಿದ್ದರಿಂದ ಹೋಗುವ ಹಾಗೂ ಬರುವ ಎರಡು ರಸ್ತೆಗಳಲ್ಲೂ ಪ್ರವಾಹೋಪಾದಿಯಲ್ಲಿ ಜನ ಸೇರಿದ್ದಾರೆ.
ಭೋಜಶಾಲಾ ಕಮಲ್ ಮೌಲಾ ಮಸೀದಿ ವಿವಾದ: ಇಂದು ಸುಪ್ರೀಂನಲ್ಲಿ ವಿಚಾರಣೆ
ಭೋಜಶಾಲಾದಲ್ಲಿ ಪುರಾತತ್ವ ಇಲಾಖೆಯ ಸಮೀಕ್ಷೆಗೆ ವಿಧಿಸಿದ ನಿಷೇಧ ಹೊರ ತೆಗೆಯಬೇಕು
ಮಧ್ಯಪ್ರದೇಶದ ಭೋಜಶಾಲಾ ದೇವಸ್ಥಾನ ಹಾಗೂ ಕಮಲ್ ಮೌಲಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್ನಲ್ಲಿ ಹಿಂದೂ ಫ್ರಂಟ್ ಫಾರ್ ಜಸ್ಟೀಸ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಯಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿದಾದ ಅಶಿಶ್ ಗೋಯಲ್ ಅವರು ಮಾತನಾಡಿದ್ದು, ಭೋಜಶಾಲಾದಲ್ಲಿ ಎಎಸ್ಐ ಸಮೀಕ್ಷೆಯ ಮೇಲೆ ಸುಪ್ರೀಂ ಕೋರ್ಟ್ ವಿಧಿಸಿರುವ ನಿಷೇಧವನ್ನು ತೆಗೆದುಹಾಕಬೇಕು ಮತ್ತು ಎಎಸ್ಐ ಸಮೀಕ್ಷೆಯ ಪ್ರಕಾರ ಭೋಜಶಾಲಾದ ಧಾರ್ಮಿಕ ಸ್ವರೂಪವನ್ನು ಜಾರಿಗೆ ತರಬೇಕು ಎಂದು ನಾವು ಒತ್ತಾಯಿಸಿದ್ದೇವೆ. ಪೂಜಾ ಸ್ಥಳಗಳ ಕಾಯ್ದೆ 1991 ರಲ್ಲಿ ಜಾರಿಗೆ ಬಂದಿತು ಆದರೆ ಎಎಸ್ಐ ಸಂರಕ್ಷಿಸಿದ ಸ್ಥಳಗಳಲ್ಲಿ ಇದನ್ನು ಜಾರಿಗೆ ತರಲಾಗಿಲ್ಲ. ನಾವು ನೋಡಿದಂತೆ, ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಪ್ರಕರಣದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿಲ್ಲ, ಆದ್ದರಿಂದ ಭೋಜಶಾಲಾ ಸಂಕೀರ್ಣದಲ್ಲಿಯೂ ಇದನ್ನು ಜಾರಿಗೆ ತರಬಾರದು ಎಂದು ನಾವು ಒತ್ತಾಯಿಸುತ್ತಿದ್ದೇವೆ ಎಂದರು.
ಹೈಕಮಾಂಡ್ ಟಾಸ್ಕ್ಗೆ ಶಾಕ್ ಆದ ಬಿಜೆಪಿ ತಟಸ್ಥ ನಾಯಕರು
ರಾಜ್ಯ ಬಿಜೆಪಿಯೊಳಗೆ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಅಂಕುಶ ಹಾಕಲು ಹೈಕಮಾಂಡ್ ನಾಯಕರು ಮುಂದಾಗಿದ್ದಾರೆ. ವಿಜಯೇಂದ್ರ ಪರ ಹಾಗೂ ವಿರೋಧಿ ಬಣಗಳ ನಡುವಿನ ಕಿತ್ತಾಟಕ್ಕೆ ಅಂತ್ಯ ಹಾಡಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ ನಾಯಕರು ಇದಕ್ಕಾಗಿ ಬಿಜೆಪಿಯಲ್ಲಿ ಆ ಬಣವೂ ಇಲ್ಲ ಈ ಬಣವೂ ಅಲ್ಲ ಎಂದು ತಟಸ್ಥವಾಗಿ ಕುಳಿತಿರುವ ಕೆಲ ತಟಸ್ಥ ನಾಯಕರನ್ನು ಅಖಾಡಕ್ಕೆ ಇಳಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಬಿಜೆಪಿ ರೆಬೆಲ್ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಸೈಲೆಂಟ್ ಆಗಿಸುವುದು ನಮ್ಮಿಂದಾಗದ ಕೆಲಸ ಎಂದು ತಟಸ್ಥ ನಾಯಕರು ಆತಂಕಕ್ಕೊಳಗಾಗಿದ್ದಾರೆ ಎಂದು ವರದಿಯಾಗಿದೆ.
ಕುಂಭ ಮೇಳದ 36ನೇ ದಿನ: ಸಂಗಮಕ್ಕೆ ಹರಿದು ಬರುತ್ತಿರುವ ಜನಸಾಗರ
ಕುಂಭ ಮೇಳದ 36ನೇ ದಿನವಾದ ಇಂದು ಕೂಡ ಭಕ್ತರು ಪ್ರವಾಹೋಪಾದಿಯಲ್ಲಿ ತ್ರಿವೇಣಿ ಸಂಗಮ ಸ್ಥಳಕ್ಕೆ ಬರುತ್ತಿದ್ದು, ಇದುವರೆಗೆ ಸುಮಾರು 52 ಕೋಟಿ ಜನ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಸಂಗಮದಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳ ಈ ಬಾರಿ ನಡೆಯುತ್ತಿದೆ.
ದೆಹಲಿಯಲ್ಲಿ 4.0 ತೀವ್ರತೆಯ ಭೂಕಂಪ
ಮುಂಜಾನೆ 5.35ಕ್ಕೆ ರಾಷ್ಟ್ರ ರಾಜಧಾನಿ ಸಮೀಪದ ಪ್ರದೇಶಗಳಲೆಲ್ಲಾ ಭೂಮಿ ಕಂಪಿಸಿದ ಅನುಭವ ಆಗಿದೆ. ಇಡೀ ಕಟ್ಟಡವೇ ನಡುಗಲು ಶುರು ಆಯ್ತು, ನಮ್ಮ ಮನೆಯವರೆಲ್ಲರೂ ಮನೆಯಿಂದ ಹೊರಗೋಡಿ ಬಂದೆವು ಎಂದು ನೋಯ್ಡಾದ ನಿವಾಸಿಯೊಬ್ಬರು ಹೇಳಿಕೊಂಡಿದ್ದಾರೆ. ಭೂಮಿ ಈ ರೀತಿ ತೀವ್ರವಾಗಿ ಕಂಪಿಸಿದ ಅನುಭವ ಹಿಂದೆಂದೂ ಆಗಿರಲಿಲ್ಲ ಎಂದು ಅವರು ಹೇಳಿದ್ದಾರೆ.